Chanakya University: ಬೆಂಗಳೂರು ಬಳಿ ನಾಳೆ ಚಾಣಕ್ಯ ವಿಶ್ವವಿದ್ಯಾಲಯ ಉದ್ಘಾಟನೆ

By Govindaraj SFirst Published Nov 18, 2022, 8:43 AM IST
Highlights

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪರಿಪೂರ್ಣ ಅನುಷ್ಠಾನದೊಂದಿಗೆ ಪ್ರವೇಶ ಲಭ್ಯತೆ, ಗುಣಮಟ್ಟದ ಶಿಕ್ಷಣ ಮತ್ತು ಸಮಾನತೆಯ ಪರಿಕಲ್ಪನೆಯಲ್ಲಿ ದೇವನಹಳ್ಳಿ ಬಳಿಯ ಹರಳೂರು ಗ್ರಾಮದಲ್ಲಿ ಸ್ಥಾಪಿತವಾಗಿರುವ ‘ಚಾಣಕ್ಯ ವಿಶ್ವವಿದ್ಯಾಲಯ’ ನ.19ರ ಶನಿವಾರ ಅಧಿಕೃತವಾಗಿ ಉದ್ಘಾಟನೆಯಾಗಲಿದೆ. 

ಬೆಂಗಳೂರು (ನ.18): ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪರಿಪೂರ್ಣ ಅನುಷ್ಠಾನದೊಂದಿಗೆ ಪ್ರವೇಶ ಲಭ್ಯತೆ, ಗುಣಮಟ್ಟದ ಶಿಕ್ಷಣ ಮತ್ತು ಸಮಾನತೆಯ ಪರಿಕಲ್ಪನೆಯಲ್ಲಿ ದೇವನಹಳ್ಳಿ ಬಳಿಯ ಹರಳೂರು ಗ್ರಾಮದಲ್ಲಿ ಸ್ಥಾಪಿತವಾಗಿರುವ ‘ಚಾಣಕ್ಯ ವಿಶ್ವವಿದ್ಯಾಲಯ’ ನ.19ರ ಶನಿವಾರ ಅಧಿಕೃತವಾಗಿ ಉದ್ಘಾಟನೆಯಾಗಲಿದೆ. ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನೂತನ ಖಾಸಗಿ ವಿಶ್ವವಿದ್ಯಾಲಯದ ಪ್ರಥಮ ಕುಲಾಧಿಪತಿ ಪ್ರೊ.ಎಂ.ಕೆ.ಶ್ರೀಧರ್‌ ಮತ್ತು ಮೊದಲ ಕುಲಪತಿ ಪ್ರೊ.ಯಶವಂತ ಡೋಂಗ್ರೆ ಅವರು ವಿವಿಯ ಸಂರಚನೆ, ಉದ್ದೇಶ, ವೈಶಿಷ್ಟ್ಯಗಳ ಕುರಿತು ವಿವರಿಸಿದರು.

ಶನಿವಾರ ಸಂಜೆ 5 ಗಂಟೆಗೆ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಪದ್ಮವಿಭೂಷಣ ಡಾ.ಕೆ.ಕಸ್ತೂರಿರಂಗನ್‌ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಅಮೆರಿಕದ ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಅಂತಾರಾಷ್ಟ್ರೀಯ ಗಣಿತಶಾಸ್ತ್ರಜ್ಞೆ ಪ್ರೊ.ಮಂಜುಲ್‌ ಭಾರ್ಗವ ಮುಖ್ಯ ಅತಿಥಿಯಾಗಿ, ಉನ್ನತ ಶಿಕ್ಷಣ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಇಸ್ಫೋಸಿಸ್‌ ಫೌಂಡೇಷನ್‌ನ ಸಂಸ್ಥಾಪಕರಾದ ಪದ್ಮಶ್ರೀ ಡಾ.ಸುಧಾಮೂರ್ತಿ, ಜಿಂದಾಲ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಡಾ.ಸೀತಾರಾಮ್‌ ಜಿಂದಾಲ್‌ ಅತಿಥಿಗಳಾಗಿ ಪಾಳ್ಗೊಳ್ಳಿದ್ದಾರೆ ಎಂದು ತಿಳಿಸಿದರು.

Chanakya University: ಚಾಣಕ್ಯ ವಿವಿಯಲ್ಲಿ ಉನ್ನತ ಶಿಕ್ಷಣದ ಹೊಸ ಪ್ರಯೋಗ

ಕುಲಪತಿ ಪ್ರೊ.ಡೋಂಗ್ರೆ ಮಾತನಾಡಿ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ತೊಡಗಿರುವ ಪರಿಣತರು ಸೇರಿ ಈ ವಿವಿಯನ್ನು ಸ್ಥಾಪಿಸಿದ್ದೇವೆ. ಉನ್ನತ ಶಿಕ್ಷಣವನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ಯುವ ಉದ್ದೇಶ ನಮ್ಮದಾಗಿದೆ. ವಿವಿಯು ಪ್ರಸ್ತುತ ಆರಂಭಿಕ ವರ್ಷ ದೇವನಹಳ್ಳಿಯ ಬ್ರಿಗೇಡ್‌ ಗ್ರೂಪ್‌ನಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸಿದೆ. ಆರಂಭಿಕ ವರ್ಷವೇ 16 ರಾಜ್ಯಗಳ ನೂರಾರು ವಿದ್ಯಾರ್ಥಿಗಳು ಪದವಿ ಕೋರ್ಸುಗಳಿಗೆ ದಾಖಲಾಗಿದ್ದಾರೆ. 2023ರ ಜೂನ್‌ ಜುಲೈ ವೇಳೆಗೆ ಇಲ್ಲಿನ ಹರಳೂರು ಗ್ರಾಮದ 116 ಎಕರೆಯಲ್ಲಿ 1300 ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯಗಳೊಂದಿಗೆ ಕ್ಯಾಂಪಸ್‌ ಸಿದ್ಧವಾಗಲಿದೆ. 

ಕನ್ನಡ, ಇಂಗ್ಲಿಷ್‌, ಹಿಂದಿ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಅಧ್ಯಯನಕ್ಕೆ ಅವಕಾಶವಿದೆ. ಪ್ರತಿ ವಿದ್ಯಾರ್ಥಿಗೆ ಅವರ ಆಸಕ್ತಿಗೆ ತಕ್ಕ ಕೋರ್ಸು, ವಿಷಯಗಳಲ್ಲಿ ಉತ್ತಮ ಕಲಿಕೆಯ ಜೊತೆಗೆ ವ್ಯಾಸಂಗ ಮುಗಿದ ಬಳಿಕ ಉತ್ತಮ ಪ್ರತಿಫಲ ದೊರೆಯಬೇಕು. ಈ ನಿಟ್ಟಿನಲ್ಲಿ ಆಧುನಿಕ ಕಾಲಘಟ್ಟಕ್ಕೆ ಪ್ರಸ್ತುತ ಎನಿಸುವ ಕೋರ್ಸ್‌ಗಳು, ಭಾಷಾ ಸಂವಹನ, ಡಿಜಿಟಲ್‌ ಕೌಶಲ್ಯ, ಸಂಶೋಧನೆ, ನಾಯಕತ್ವ ಗುಣ, ನೈತಿಕ ಶಿಕ್ಷಣವನ್ನು ಒಳಗೊಂಡ ಪ್ರಮುಖ ಕೋರ್ಸ್‌ಗಳಿರುತ್ತವೆ ಎಂದು ಹೇಳಿದರು.

ಒಂಬುಡ್ಸ್‌ ಸಮನ್‌-ಕೋರ್ಟ್‌ ಸ್ಥಾಪನೆ: ಚಾಣಕ್ಯ ವಿವಿ ಒಂದು ಸಾಮಾಜಿಕ ಸಂಸ್ಥೆಯಿಂದ ಆರಂಭವಾಗಿರುವಂತಹದ್ದು. ಇಲ್ಲಿ ಯಾವುದೇ ಸಮಸ್ಯೆಗಳು ಎದುರಾದರೆ ಅದರ ಪರಿಹಾರಕ್ಕೆ ಒಂಬುಡ್ಸ್‌ ಸಮನ್‌ ನೇಮಕ ಮತ್ತು ನಮ್ಮದೇ ಆದ ಕೋರ್ಟ್‌ ಸ್ಥಾಪಿಸಲು ಕಾಯ್ದೆಯಲ್ಲಿ ಅವಕಾಶ ಮಾಡಿಕೊಂಡಿದ್ದೇವೆ. ವಿವಿಗೆ ಸಂಬಂಧಿಸಿದ ವಿದ್ಯಾರ್ಥಿ, ಪೋಷಕರು, ಅಧ್ಯಾಪಕರು ಸೇರಿದಂತೆ ಎಲ್ಲ ಪಾಲುದಾರರು ಯಾವುದೇ ಸಮಸ್ಯೆಗಳನ್ನು ಇವುಗಳ ಮುಂದೆ ತಂದು ಇತ್ಯರ್ಥಮಾಡಿಕೊಳ್ಳಲು ವಿಶೇಷ ಅವಕಾಶವಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿವಿಯ ಉಪ ಕುಲಾಧಿಪತಿ ಎಂ.ಪಿ.ಕುಮಾರ್‌ ಉಪಸ್ಥಿತರಿದ್ದರು.

ಘೋಷಣೆಗಳ ಚಾಪಲ್ಯ VS ಸಂಕಲ್ಪದ ಸಾಫಲ್ಯ: ಸಚಿವ ಶ್ರೀರಾಮುಲು

ಅನ್ಯಭಾಷಿಕರಿಗೆ ಕನ್ನಡ ಕಲಿಸಲು ಒತ್ತು: ಅನ್ಯಭಾಷಿಕರಿಗೆ ಕನ್ನಡ ಕಲಿಯಲು ರಾಜ್ಯ ಸರ್ಕಾರ ರಚಿಸಿರುವ ಪಠ್ಯಕ್ರಮವನ್ನು ಬಳಿಸಿಕೊಂಡು ನಮ್ಮ ವಿವಿಗೆ ದಾಖಲಾಗುವ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡದ ಓದುವ, ಬರೆಯುವ ಮತ್ತು ಮಾತನಾಡುವ ತರಬೇತಿ ನೀಡಲಾಗುವುದು. ಆದರೆ, ಕನ್ನಡ ಕಲಿಕೆ ಕಡ್ಡಾಯಲ್ಲ. ನಮ್ಮ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಬೇರೆ ರಾಜ್ಯದ ಮಕ್ಕಳಿಗೆ ತಿಳಿಸುವ ಮೂಲಕ ಅವರಲ್ಲಿ ಅಭಿಮಾನ ಮೂಡಿಸಲು ಸ್ವಯಂಪ್ರೇರಿತವಾಗಿ ಕನ್ನಡ ಕಲಿಕೆಗೆ ಉತ್ತೇಜನ ನೀಡಲಾಗುವುದು ಎಂದು ಕುಲಪತಿ ಪ್ರೊ.ಯಶವಂತ ಡೋಂಗ್ರೆ ಇದೇ ವೇಳೆ ತಿಳಿಸಿದರು.

click me!