ಬೆಂಗಳೂರು ನಗರ ವಿವಿ ಕುಲಪತಿ ನಿರ್ಧಾರದಿಂದ ವಿವಾದ

By Kannadaprabha NewsFirst Published Nov 14, 2020, 7:26 AM IST
Highlights

ಜಾಫೆಟ್‌ ನಡೆಗೆ ಸಿಂಡಿಕೇಟ್‌ ಸದಸ್ಯರ ಆಕ್ಷೇಪ| ವರ್ಗಾವಣೆ ರದ್ದು ಮಾಡಿ ಸಿಂಡಿಕೇಟ್‌ ಸಭೆಯಲ್ಲಿ ಚರ್ಚೆಗೆ ಆಗ್ರಹ| ನಿವೃತ್ತಿ ಅಂಚಲ್ಲಿ ನಿರ್ಧಾರ| 

ಬೆಂಗಳೂರು(ನ.14): ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ (ಬಿಸಿಯು) ಅಗತ್ಯ ಮೂಲ ಸೌಕರ್ಯ, ಹೊಸ ಕಟ್ಟಡ ಹಾಗೂ ಹಾಲಿ ಕಟ್ಟಡ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ವಿವಿಯ 150 ಕೋಟಿ ರು. ವರ್ಗಾವಣೆ ಮಾಡಲು ಬಿಸಿಯು ಕುಲಪತಿ ಎಸ್‌.ಜಾಫೆಟ್‌ ಏಕಮುಖ ನಿರ್ಧಾರ ಕೈಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕುಲಪತಿ ಅವರು ಈ ಸಂಬಂಧ ಸಿಂಡಿಕೇಟ್‌ ಸಭೆಯಲ್ಲಿ ಯಾವುದೇ ವಿಚಾರ ಚರ್ಚೆ ನಡೆಸದೇ ಸ್ವಯಂ ನಿರ್ಧಾರ ಕೈಗೊಂಡಿದ್ದಾರೆ. ಇದು ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ ಎಂದು ಕೆಲ ಸಿಂಡಿಕೇಟ್‌ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕುಲಪತಿ ಅವರ ನಿರ್ಧಾರ ಸರಿಯಲ್ಲ. ಕೂಡಲೇ ತಮ್ಮ ನಿರ್ಧಾರ ಕೈಬಿಟ್ಟು ಸಿಂಡಿಕೇಟ್‌ ಸಭೆಯಲ್ಲಿ ಚರ್ಚಿಸಬೇಕೆಂದು ಆಗ್ರಹಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಪಿಜಿ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

ಬೆಂ.ನಗರ ವಿವಿ ಪ್ರಸನ್ನಕುಮಾರ ಬ್ಲಾಕ್‌ ಆವರಣದಲ್ಲಿ 43 ಎಕರೆ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಪ್ರತ್ಯೇಕ ಇಂಜಿನಿಯರಿಂಗ್‌ ವಿಭಾಗ ಇಲ್ಲದ ಕಾರಣ ಕುಲಪತಿ ಅವರು ಸರ್ಕಾರದ ಮೊರೆ ಹೋಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್‌ ಘಟಕದ ಮೂಲಕ ಯೋಜನೆ ರೂಪಿಸಿ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲು ಕೋರಿದ್ದಾರೆ. ಇದಕ್ಕೆ ಆ ಇಲಾಖೆಯು 150 ಕೋಟಿ ರು.ಗಳ ಅಂದಾಜು ವೆಚ್ಚದಲ್ಲಿ ಯೋಜನೆ ನೀಡಿದೆ. ಹಾಗಾಗಿ ಕುಲಪತಿ ಅವರು ವಿವಿಯಲ್ಲಿ ಲಭ್ಯವಿರುವ 90 ಕೋಟಿ ರು. ಗಳನ್ನು ಠೇವಣಿ ನೀಡಿ, ಉಳಿದ ಹಣವನ್ನು ಹಂತ ಹಂತವಾಗಿ ನೀಡಲು ನಿರ್ಧರಿಸಿದ್ದಾರೆ. ಈ ಸಂಬಂಧ ಯೋಜನೆಗೆ 90 ಕೋಟಿ ರು. ವರ್ಗಾವಣೆ ಆಡಳಿತಾತ್ಮಕ ಅನುಮತಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಮನವಿ ಕೂಡ ಮಾಡಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.

ನಿವೃತ್ತಿ ಅಂಚಲ್ಲಿ ನಿರ್ಧಾರ:

ಬೆಂ.ನಗರ ವಿವಿಯ ಕುಲಪತಿ ಡಾ.ಎಸ್‌.ಜಾಫೆಟ್‌ ಅವರು ನ.20ರಂದು ನಿವೃತ್ತಿಯಾಗುತ್ತಿದ್ದಾರೆ. ನಿವೃತ್ತಿಗೆ ಒಂದು ವಾರ ಬಾಕಿ ಉಳಿದಿರುವಾಗ ಇಷ್ಟು ದೊಡ್ಡ ಮೊತ್ತವನ್ನು ವಿವಿಯಿಂದ ಆರೋಗ್ಯ ಇಲಾಖೆಗೆ ವರ್ಗಾವಣೆ ಮಾಡಲು ಆತುರವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಯಾವುದೇ ಆಡಳಿತಾತ್ಮಕ ವಿಚಾರಗಳಲ್ಲಿ ಸಿಂಡಿಕೇಟ್‌ ನಿರ್ಧಾರವೇ ಅಂತಿಮ. ನಿವೃತ್ತಿಗೆ 6 ತಿಂಗಳು ಇರುವಾಗ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂಬ ನಿಯಮವಿದ್ದರೂ ಇದನ್ನು ಗಾಳಿಗೆ ತೂರಿ ಅನುದಾನ ವರ್ಗಾವಣೆಗೆ ಮುಂದಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂಬುದು ಸದಸ್ಯರ ಆರೋಪ.
 

click me!