ABVP State Conference: ಬೆಳಗಾವಿಯಲ್ಲಿ ಜ.6ರಿಂದ ಎಬಿವಿಪಿ ರಾಜ್ಯ ಸಮ್ಮೇಳನ

By Kannadaprabha NewsFirst Published Dec 31, 2022, 7:54 PM IST
Highlights

ಮೂರು ದಿನಗಳ ಕಾಲ  ಬೆಳಗಾವಿಯಲ್ಲಿ ನಡೆಯುವ ರಾಜ್ಯ ಸಮ್ಮೇಳನದಲ್ಲಿ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರಂಥ ಮಹಾನ ವ್ಯಕ್ತಿಗಳ ಇತಿಹಾಸವನ್ನು ಹೊಂದಿರುವ ಪುಣ್ಯಭೂಮಿಯಲ್ಲಿ ರಾಜ್ಯದ ಶೈಕ್ಷಣಿಕ ಪರಿಸ್ಥಿತಿ, ವರ್ತಮಾನ, ಪರಿಸರ ಅಭಿವೃದ್ಧಿಯ ಪೂರಕ ಕುರಿತು ನಾಲ್ಕು ಕರಡು ನಿರ್ಣಯಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ

ಬೆಳಗಾವಿ (ಡಿ.31): ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಜೆಎನ್‌ಎಂಸಿ ಸಬಾಭವನದಲ್ಲಿ ಜ.6ರಿಂದ 8ರವೆರೆಗೆ 42ನೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ರಾಜ್ಯಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ಹೇಳಿದರು. ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಕಾಲ ನಡೆಯುವ ರಾಜ್ಯ ಸಮ್ಮೇಳನದಲ್ಲಿ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣರಂಥ ಮಹಾನ್‌ ವ್ಯಕ್ತಿಗಳ ಇತಿಹಾಸವನ್ನು ಹೊಂದಿರುವ ಪುಣ್ಯಭೂಮಿಯಲ್ಲಿ ರಾಜ್ಯದ ಶೈಕ್ಷಣಿಕ ಪರಿಸ್ಥಿತಿ, ವರ್ತಮಾನ, ಪರಿಸರ ಅಭಿವೃದ್ಧಿಯ ಪೂರಕ ಕುರಿತು ನಾಲ್ಕು ಕರಡು ನಿರ್ಣಯಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ದೇಶವು ಜಿ-20ನೇ ನೇತೃತ್ವವನ್ನು ವಹಿಸಿರುವುದು ಭಾಷಾ ವಿಷಯ, ಜನಸಂಖ್ಯಾ ಅಸಮತೋಲನ ಕುರಿತಂತೆ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗುವುದು. ನಗರದ ಪ್ರಮುಖ ವೃತ್ತಗಳಲ್ಲಿ ಭವ್ಯ ಶೋಭಾಯಾತ್ರೆ ನಡೆಸಿ ಸಾರ್ವಜನಿಕ ಸಭೆಯನ್ನು ನಡೆಸಲಾಗುವುದು. 42ನೇ ರಾಜ್ಯ ಸಮ್ಮೇಳನದಲ್ಲಿ 1,500 ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಪ್ರಾಧ್ಯಾಪಕರು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಶೈಕ್ಷಣಿಕ ವೇಳಾಪಟ್ಟಿವಿಸ್ತರಿಸಿ: ಎಬಿವಿಪಿ
ತುಮಕೂರು: ಪ್ರಥಮ ಸೆಮಿಸ್ಟರ್‌ನ ಶೈಕ್ಷಣಿಕ ವೇಳಾಪಟ್ಟಿ ವಿಸ್ತರಣೆ ಸೇರಿದಂತೆ ಹಲವಾರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ತುಮಕೂರು ವಿವಿ ಮುಂದೆ ಪ್ರತಿಭಟನೆ ನಡೆಸಿದರು.

ತುಮಕೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಶಿಕ್ಷಣ ನೀತಿಯ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಪ್ರಥಮ ಸೆಮಿಸ್ಟರ್‌ನ ಜನವರಿ 12ರಿಂದ ಪರೀಕ್ಷೆ ಪ್ರಾರಂಭವಾಗಲಿದೆ ಎಂದು ಸುತ್ತೋಲೆ ಹೊರಡಿಸಿದೆ. ತುಮಕೂರು ವಿಶ್ವ ವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪದವಿ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದ ಪಠ್ಯಕ್ರಮ ಮುಗಿಯದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಪ್ರಥಮ ಸೆಮಿಸ್ಟರ್‌ನ ಶೈಕ್ಷಣಿಕೆ ವೇಳಾಪಟ್ಟಿಯು ಡಿಸೆಂಬರ್‌ 31ರಂದು ಮುಗಿಯಲಿದೆ. ನವೆಂಬರ್‌ ತಿಂಗಳಲ್ಲಿ 4ನೇ ಹಾಗೂ 6ನೇ ಸೆಮಿಸ್ಟರ್‌ನ ಮೌಲ್ಯಮಾಪನ ನಡೆದಿತ್ತು. ಹಾಗೂ 2ನೇ ಸೆಮಿಸ್ಟರ್‌ ಪರೀಕ್ಷೆ ಕೂಡ ನಡೆದಿತ್ತು, ಇದರ ಜೊತೆಗೆ ಪ್ರಥಮ ಸೆಮಿಸ್ಟರ್‌ನ ತರಗತಿಗಳು ಕೂಡ ನಡೆದಿದೆ. ಆದರೆ ನವೆಂಬರ್‌ನಲ್ಲಿ ಪೂರ್ಣ ಪ್ರಮಾಣದ ತರಗತಿಗಳು ನಡೆದಿಲ್ಲ. ಇದರ ಮಧ್ಯೆ ನವೆಂಬರ್‌ನಲ್ಲಿ ಮೌಲ್ಯಮಾಪನ ಇದ್ದುದರಿಂದ 10 ದಿನಗಳ ಕಾಲ ರಜೆ ಕೊಟ್ಟಿದ್ದಾರೆ. ಈ ಎಲ್ಲಾ ಕಾರಣಕ್ಕಾಗಿ ಪೂರ್ಣ ಪ್ರಮಾಣದ ಪಠ್ಯಕ್ರಮ ಮುಗಿದಿಲ್ಲ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಥಮ ಸೆಮಿಸ್ಟರ್‌ ಶೈಕ್ಷಣಿಕ ವೇಳಾಪಟ್ಟಿಯನ್ನು ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ 3800 ಸರ್ಕಾರಿ ಶಾಲೆಯಲ್ಲಿ 5ಕ್ಕಿಂತಲೂ ಕಡಿಮೆ ಮಕ್ಕಳಿಂದ ಓದು: ಸಚಿವ ಬಿಸಿ ನಾಗೇಶ್

2021-22ನೇ ಸಾಲಿನ 2ನೇ ಸೆಮಿಸ್ಟರ್‌ ಪರೀಕ್ಷಾ ಫಲಿತಾಂಶ ಬಂದಿಲ್ಲದ ಕಾರಣ ಸರ್ಕಾರಿ ವಸತಿ ನಿಲಯಕ್ಕೆ ಅರ್ಜಿ ಹಾಕಲು ಹಾಗೂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ತೊಂದರೆ ಉಂಟಾಗಿದ್ದು ಬೇಗನೇ ಫಲಿತಾಂಶವನ್ನು ನೀಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕು. ಸ್ನಾತಕ ಪದವಿ 4ನೇ ಸೆಮಿಸ್ಟರ್‌, 6ನೇ ಸೆಮಿಸ್ಟರ್‌ ಹಾಗೂ 1ನೇ ಸೆಮಿಸ್ಟರ್‌ನ ಮರುಮೌಲ್ಯಮಾಪನ ಫಲಿತಾಂಶವನ್ನು ನೀಡಬೇಕು, 2021-22ನೇ ಸಾಲಿನ ಘಟಿಕೋತ್ಸವ ಪ್ರಮಾಣ ಪತ್ರವನ್ನು ಜರೂರಾಗಿ ವಿತರಿಸಬೇಕು ಎಂದಿದ್ದಾರೆ.

ಅವ್ಯವಸ್ಥೆಯ ಆಗರ ಅಂಬೇಡ್ಕರ್ ವಸತಿ ಶಾಲೆ: 'ಹಸಿವು ಆಗ್ತಿದೆ ಊಟ ಕೊಡಿ ಸಾರ್' ಅಂತಿರೋ ಮಕ್ಕಳು!

ಪ್ರತಿಭಟನೆಯಲ್ಲಿ ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್‌, ಕಾರ್ಯಕರ್ತರಾದ ಜೀವನ್‌, ರೇಣುಕಪ್ರಸಾದ್‌, ಹರ್ಷವರ್ಧನ್‌, ಲಿಖಿತ್‌ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

click me!