5 ವರ್ಷದಲ್ಲಿ 3000 ಕರ್ನಾಟಕ ಪಬ್ಲಿಕ್‌ ಶಾಲೆ ಶುರು: ಸಚಿವ ಮಧು ಬಂಗಾರಪ್ಪ

By Kannadaprabha NewsFirst Published Nov 17, 2023, 10:28 AM IST
Highlights

ರಾಜ್ಯದಲ್ಲಿ ಮುಂದಿನ ಐದು ವರ್ಷದಲ್ಲಿ 3 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಆರಂಭಿಸಲು ತೀರ್ಮಾನಿಸಲಾಗಿದೆ. ಶೂನ್ಯ ದಾಖಲಾತಿ ಇರುವ 600 ಸರ್ಕಾರಿ ಶಾಲೆಗಳನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕೆಪಿಎಸ್‌ಗಳಾಗಿ ಪರಿವರ್ತಿಸಲು ಸಿದ್ಧತೆ ನಡೆದಿದೆ ಎಂದು ಸಚಿವ ಮಧು ಬಂಗಾರಪ್ಪ ಇದೇ ವೇಳೆ ತಿಳಿಸಿದರು. 

ಬೆಂಗಳೂರು (ನ.17): ರಾಜ್ಯದಲ್ಲಿ ಮುಂದಿನ ಐದು ವರ್ಷದಲ್ಲಿ 3 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಆರಂಭಿಸಲು ತೀರ್ಮಾನಿಸಲಾಗಿದೆ. ಶೂನ್ಯ ದಾಖಲಾತಿ ಇರುವ 600 ಸರ್ಕಾರಿ ಶಾಲೆಗಳನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕೆಪಿಎಸ್‌ಗಳಾಗಿ ಪರಿವರ್ತಿಸಲು ಸಿದ್ಧತೆ ನಡೆದಿದೆ ಎಂದು ಸಚಿವ ಮಧು ಬಂಗಾರಪ್ಪ ಇದೇ ವೇಳೆ ತಿಳಿಸಿದರು. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಅದಕ್ಕೆ ಅಗತ್ಯ ಸೌಕರ್ಯ ಕಲ್ಪಿಸಿ ವಿದ್ಯಾರ್ಥಿಗಳನ್ನು ಸೆಳೆಯಲು ಪ್ರತಿ ಎರಡು ಗ್ರಾಮ ಪಂಚಾಯಿತಿಗೆ ಒಂದರಂತೆ 3 ಸಾವಿರ ಕೆಪಿಎಸ್ ಅನ್ನು ಮುಂದಿನ 5 ವರ್ಷಗಳಲ್ಲಿ ಆರಂಭಿಸುತ್ತೇವೆ. 

ಈ ಶಾಲೆಯಲ್ಲಿ ಪೂರ್ವ ಪ್ರಾಥಮಿಕದಿಂದ ದ್ವಿತೀಯ ಪಿಯುವರೆಗೆ ಒಂದೇ ಕ್ಯಾಂಪಸ್‌ನಲ್ಲಿ ತರಗತಿಗಳು ನಡೆಯಲಿವೆ. ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲಮಾಧ್ಯಮ ಕೂಡ ಇರಲಿದೆ. ಇದಕ್ಕೆ 2500 ಕೋಟಿ ರು.ಗಳ ಅನುದಾನದ ಅವಶ್ಯಕತೆ ಇದ್ದು, ಇದನ್ನು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್) ಅಡಿಯಲ್ಲಿ ಸಂಗ್ರಹಿಸುವ ಆಲೋಚಿಸಲಾಗಿದೆ ಎಂದರು. ಶೂನ್ಯ ಪ್ರವೇಶವಿರುವ 600 ಸರ್ಕಾರಿ ಶಾಲೆಗಳನ್ನು ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೆಪಿಎಸ್ ಆಗಿ ಪರಿವರ್ತಿಸುತ್ತಿದ್ದೇವೆ. ಇವುಗಳನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ಆರಂಭಿಸುತ್ತೇವೆ ಎಂದು ತಿಳಿಸಿದರು.

ನನ್ನ ಪಕ್ಷಾಂತರ ಪ್ರಭಾವ ಪಂಚರಾಜ್ಯ ಚುನಾವಣೆ ಮೇಲೂ ಆಗಿದೆ: ಜಗದೀಶ್‌ ಶೆಟ್ಟರ್‌

ಶೀಘ್ರ 13 ಸಾವಿರ ಶಿಕ್ಷಕ ಸ್ಥಳ ನಿಯುಕ್ತಿ: 13,500 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವ ಅಂದಾಜು 400 ರಿಂದ 500 ಹುದ್ದೆಗಳ ನೇಮಕಾತಿ ಮಾತ್ರ ತಡವಾಗಿದೆ. ಇದು ಸಹ ಶೀಘ್ರದಲ್ಲೇ ಇತ್ಯರ್ಥವಾಗಲಿದೆ. ಉಳಿದ 13 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ ಸ್ಥಳ ನಿಯುಕ್ತಿಗೊಳಿಸಲಾಗುವುದು. ಇದರ ಹೊರತಾಗಿ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಇನ್ನೂ 20 ಸಾವಿರ ಶಿಕ್ಷಕರ ನೇಮಕಕ್ಕೆ ಮುಖ್ಯಮಂತ್ರಿ ಅವರ ಬಳಿ ಚರ್ಚಿಸಲಾಗಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಆಪರೇಷನ್‌ ಕಮಲ ಮಾಡುವುದಿಲ್ಲ, ಭಯ ಬೇಡ: ಬಿ.ವೈ.ವಿಜಯೇಂದ್ರ

ತಪ್ಪು ಯಾರೇ ಮಾಡಿದ್ರೂ ಕ್ರಮ: ಶಾಲಾ ಮಕ್ಕಳಿಗೆ ಶೂ ಬದಲಿಗೆ ಚಪ್ಪಲಿ ಕೊಟ್ಟ ಪ್ರಕರಣದಲ್ಲಿ ತಪ್ಪು ನಡೆದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಟ್ಟೆ ಮತ್ತು ಶೂ ವಿತರಣೆ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ರು ಗ್ಯಾರಂಟಿ ಕ್ರಮ ಕೈಗೊಳ್ಳಲಾಗುವುದು ಎಂದರು ತಿಳಿಸಿದರು. ಬರಗಾಲದಲ್ಲಿ ರೈತರ ಸಾಲ‌ ಮನ್ನಾ ವಿಚಾರದ ಬಗ್ಗೆ ಈಗ ಚಿಂತನೆ ಮಾಡುವ ಅಗತ್ಯ ಇಲ್ಲ. ಮುಂದೆ ನೋಡೋಣ ಎಂದ ಅವರು, ಮಲೆನಾಡಿನಲ್ಲಿ ಕಾಡಾನೆ ಹಾವಳಿ ಪ್ರಕರಣಗಳು ನಡೆಯುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

click me!