ಲಾಕ್ಡೌನ್ನಿಂದ ಪರೀಕ್ಷೆ ಬಗ್ಗೆ ಆತಂಕಗೊಂಡಿರುವ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಧೈರ್ಯ ತುಂಬಿದ್ದಾರೆ.
ಬೆಂಗಳೂರು, (ಏ.14): ಲಾಕ್ಡೌನ್ ಮೇ.3ರ ವರೆಗೆ ವಿಸ್ತರಣೆಯಾಗಿರುವುದಕ್ಕೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಅನಗತ್ಯ ಆತಂಕ ಬೇಡ ಎಂದು ಸಚಿವ ಸುರೇಶ್ ಕುಮಾರ್ ಅಭಯ ನೀಡಿದ್ದಾರೆ.
ಲಾಕ್ ಡೌನ್ ಅವಧಿ ಮುಗಿದ ಬಳಿಕ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳ ಹಿತ ಕಾಯುವ ತೀರ್ಮಾನವನ್ನು ನಾನೇ ಖುದ್ದಾಗಿ ಪ್ರಕಟಿಸುತ್ತೇನೆ. ಪೋಷಕರು, ವಿದ್ಯಾರ್ಥಿಗಳು ಅನಗತ್ಯ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಧೈರ್ಯ ತುಂಬಿದರು.
ಪ್ರಧಾನಿ ನರೇಂದ್ರ ಮೋದಿಯವರು ಕರೋನಾ ಲಾಕ್ ಡೌನ್ ಅವಧಿಯನ್ನು ಮೇ.03ರ ವರೆಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ, ಎಸ್.ಎಸ್.ಎಲ್.ಸಿ ಪರೀಕ್ಷಾ ಅವಧಿಯನ್ನು ಸದ್ಯಕ್ಕೆ ಪ್ರಕಟಿಸಲಾಗುವುದಿಲ್ಲ. ಜನ ಜೀವನ ಸಹಜ ಸ್ಥಿತಿಗೆ ಮರಳಿದ ಬಳಿಕ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸುವೆ ಎಂದು ಸ್ಪಷ್ಟಪಡಿಸಿದರು.
ಅಲ್ಲದೇ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ತರಗತಿಗಳನ್ನು ಪ್ರಾರಂಭಿಸಲಾಗಿದೆಯೆಂದು ಸುದ್ದಿ ಹರಿದಾಡುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಇಂತಹ ಯಾವುದೇ ಕ್ರಮವನ್ನು ಆರಂಭಿಸಿಲ್ಲ. ಪೋಷಕರು, ವಿದ್ಯಾರ್ಥಿಗಳು ಇಂತಹ ಮಾಹಿತಿಗಳ ಬಗ್ಗೆ ಜಾಗರೂಕರಾಗಿರಬೇಕೆಂದು ಮನವಿ ಮಾಡಿದರು.