
ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ನಿಜಕ್ಕೂ ಸಿಎಂ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇಂದು ನಡೆಯುವ ಕ್ಯಾಬಿನೆಟ್ ಸಭೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಲಿಂಗಾಯತ ಸ್ವತಂತ್ರ್ಯ ಧರ್ಮಕ್ಕಾಗಿ ಒತ್ತಾಯಿಸುತ್ತಿರುವವರು ಒಂದೆಡೆಯಾದ್ರೆ, ಮತ್ತೊಂದೆಡೆ ಇದಕ್ಕೆ ವಿರೋಧವೂ ಪ್ರಬಲವಾಗಿಯೇ ಕೇಳಿಬರುತ್ತಿದೆ. ಇದು ಸಿಎಂಗೆ ಚುನಾವಣಾ ಹೊಸ್ತಿಲಲ್ಲಿ ತಲೆನೋವಾಗಿ ಪರಿಣಮಿಸಿದೆ.
ನಿನ್ನೆ ತಮ್ಮನ್ನ ಭೇಟಿ ಮಾಡಿದ ಪ್ರತ್ಯೇಕ ಲಿಂಗಾಯತ ಪರ ಮಠಾಧೀಶರಿಗೆ ಆಶಾವಾದಿಗಳಾಗಿರಿ ಎಂದು ತಿಳಿಸಿದ್ದಾರೆ ಸಿಎಂ. ಈಗಾಗಲೇ ವೀರಶೈವ ಮಹಾಸಭಾ ಸೇರಿದಂತೆ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಪ್ರತ್ಯೇಕ ಧರ್ಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಇಬ್ಬರು ಸಚಿವರು ರಾಜೀನಾಮೆ ನೀಡಿದ್ರೆ ಏನು ಆಗೋದಿಲ್ಲ ಎನ್ನುವ ಮೂಲಕ ಈಶ್ವರ ಖಂಡ್ರೆ, ಎಸ್. ಎಸ್. ಮಲ್ಲಿಖಾರ್ಜುನ್ ಅವರಿಗೆ ಚಾಟಿ ಬೀಸೋ ಮೂಲಕ ಸಚಿವ ವಿನಯ್ ಕುಲಕರ್ಣಿ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಇನ್ನು, ವಿನಯ್ ಹೇಳಿಕೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ರಾಜೀನಾಮೆ ಪ್ರಹಸನದ ಕಿತ್ತಾಟಕ್ಕೂ ಕಾರಣವಾಗಬಹುದು. ಹೀಗಾಗೇ ಚುನಾವಣೆ ಸಮಯದಲ್ಲಿ ಇಂಥ ಕಿತ್ತಾಟಗಳೆಲ್ಲಾ ಬೇಡ ಎಂದು ನಾಗಮೋಹನ್ ದಾಸ್ ನೀಡಿರುವ ವರದಿಗೆ ಪ್ರತಿಯಾಗಿ ಮತ್ತೊಂದು ಉಪ ಸಮಿತಿ ರಚಿಸಬಹುದು ಸಿಎಂ. ಆ ಮೂಲಕ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.
ಪ್ರತ್ಯೇಕ ಲಿಂಗಾಯತ ಧರ್ಮವಾದ್ರೆ ಸಿದ್ದುಗೆ ಲಾಭ..?
ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಮಾಡೋದ್ರಿಂದ ಲಿಂಗಾಯತರು ಕಾಂಗ್ರೆಸ್ ಪರ ಬ್ಯಾಟಿಂಗ್ ಮಾಡಬಹುದೆಂಬುವುದು ಸಿಎಂ ಲೆಕ್ಕಚಾರ. ಲಿಂಗಾಯತ ಪ್ರಾಬಲ್ಯದ 62 ಕ್ಷೇತ್ರಗಳಲ್ಲಿ ಆ ಸಮುದಾಯದ ಮನವೊಲಿಕೆಗೆ ಸಿಎಂಗೆ ರಾಜಮಾರ್ಗವಾಗಬಹುದು.
ರಾಮಕೃಷ್ಣ ಹೆಗಡೆ ಬಳಿಕ ಬಹುಸಂಖ್ಯಾತರ ಪರ ರಾಜಕೀಯ ನಿಲುವು ವ್ಯಕ್ತಪಡಿಸಿದ ನಾಯಕ ಅನ್ನೋ ಗೌರವಕ್ಕೂ ಪಾತ್ರರಾಗಬಹುದು. ಲಿಂಗಾಯತರ ನಾಯಕ ಅಂತ ಬಿಂಬಿಸಿಕೊಳ್ಳುತ್ತಿರುವ ಯಡಿಯೂರಪ್ಪರನ್ನು ಕಟ್ಟಿಹಾಕಲು ಅನುಕೂಲವಾಗಲೂ ಬಹುದು. ಒಂದೇ ಏಟಿಗೆ 2 ಹಕ್ಕಿ ಹೊಡೀತಾರಾ ಸಿಎಂ ಸಿದ್ದರಾಮಯ್ಯ..? ಕಾದು ನೋಡಬೇಕು.