Districts
ಸರ್ಕಾರದ ಜಮೀನಿಗೆ ನಕಲಿ ದಾಖಲೆ ಮೂಲಕ ಖಾತೆ ಮತ್ತು ಪಹಣಿ ಮಾಡಿಸಿಕೊಂಡು ಕೃಷಿ ಇಲಾಖೆಯಿಂದ ಸಬ್ಸಿಡಿ ಹಣವನ್ನು ಪಡೆಯಲು ಭಾರೀ ಗೋಲ್ ಮಾಲ್ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ(ಎ.07): ಸರ್ಕಾರದ ಜಮೀನಿಗೆ ನಕಲಿ ದಾಖಲೆ ಮೂಲಕ ಖಾತೆ ಮತ್ತು ಪಹಣಿ ಮಾಡಿಸಿಕೊಂಡು ಕೃಷಿ ಇಲಾಖೆಯಿಂದ ಸಬ್ಸಿಡಿ ಹಣವನ್ನು ಪಡೆಯಲು ಭಾರೀ ಗೋಲ್ ಮಾಲ್ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಲಕ್ಷ್ಮೀಪುರ ಗ್ರಾಮದ ಸರ್ವೆ ನಂ 128 ರಲ್ಲಿ 1 ಎಕರೆ 10 ಗುಂಟೆ ಜಮೀನು ತನಗೆ ಸೇರಿದ್ದೆಂದು ಗ್ರಾಮದ ನಾಗ್ಯನಾಯ್ಕ ಪಹಣಿ ಪತ್ರದ ದಾಖಲೆ ನೀಡಿ ಕೃಷಿ ಇಲಾಖೆಯಿಂದ ಟಿಲ್ಲರ್ ಖರೀದಿಗೆ ನೀಡುವ 1 ಲಕ್ಷದ 12 ಸಾವಿರ ರೂ ಸಬ್ಸಿಡಿ ಹಣಕ್ಕೆ ಅರ್ಜಿ ಹಾಕಿದ್ದಾನೆ. ಆದರೆ ದಾಖಲೆಯನ್ನು ಪರಿಶೀಲನೆ ನಡೆಸದ ಅಧಿಕಾರಿಗಳು ಸಬ್ಸಿಡಿ ಹಣಕ್ಕಾಗಿ ಹಸಿರು ನಿಶಾನೆ ನೀಡಿದ್ದಾರಂತೆ.
ವಾಸ್ತವ ಸಂಗತಿ ಎಂದರೇ ನಾಗ್ಯನಾಯ್ಕ ಪಹಣಿ ಪತ್ರ ನೀಡಿದ ಸರ್ವೆ ನಂಬರ್ 128 ರ ಜಮೀನಿನಲ್ಲಿ ಅದೇ ಗ್ರಾಮದ ದೇವರಾಜ್ ಮತ್ತವರ ಕುಟುಂಬಸ್ಥರು ಕಳೆದ 30 ವರ್ಷಗಳಿಂದ ಉಳುಮೆ ಮಾಡುತ್ತಾ ಬಂದಿದ್ದಾರೆ. ಜಮೀನಿನ ವಿವಾದ ಎಸಿ ಕೋರ್ಟ್ ಮತ್ತು ಡಿಸಿ ಕೋರ್ಟ್ಗಳಲ್ಲಿ ನಡೆಯುತ್ತಿದ್ದು ಸದ್ಯ ನಾಗ್ಯನಾಯ್ಕನಿಗಾಗಲಿ , ದೇವರಾಜ್ ಗಾಗಲಿ ಜಮೀನಿನ ಮೇಲೆ ಯಾವುದೇ ಹಕ್ಕಿಲ್ಲ. ಅಲ್ಲದೇ ಸರ್ಕಾರಿ ಭೂ ದಾನದ ಜಮೀನಿನ ಪರಭಾರೆಯನ್ನು ಮಾಡಲು ಸಾಧ್ಯವಿಲ್ಲದಿದ್ದರೂ ಪರಸ್ಪರು ಇದೇ ಜಮೀನಿಗೆ ತಾವೇ ಮಾಲೀಕರೆಂದು ವಾದ ಮಂಡಿಸಿದ್ದಾರೆ.
ಕೃಷಿ ಇಲಾಖೆ ಅಧಿಕಾರಿಗಳು ನಾಗ್ಯನಾಯ್ಕನನ್ನು ಫಲಾನುಭವಿಯಾಗಿ ಗುರುತಿಸಿರುವುದೇ ಇದೀಗ ವಿವಾದಕ್ಕೆ ಕಾರಣವಾಗಿದೆ. ಸದ್ಯ ಸಹಾಯಕ ಕೃಷಿ ಅಧಿಕಾರಿಗ ತಹಶೀಲ್ದಾರ್ ಮತ್ತು ಎಸಿಯವರಿಗೆ ಪತ್ರ ಬರೆದು ಸಮರ್ಪಕ ಮಾಹಿತಿ ಬರುವವರೆಗೂ ಈ ಜಮೀನಿನ ಆಧಾರದ ಮೇಲೆ ನೀಡಲಾಗಿರುವ ಸರ್ಕಾರದ ಸಬ್ಸಿಡಿಯನ್ನು ತಡೆ ಹಿಡಿಯಲು ನಿರ್ಧರಿಸಿದ್ದಾರೆ.