
ಸೊರಬ (ಅ.14): ನಾನು ನಾನು ಅಂದುಕೊಳ್ಳುತ್ತ ಹೋದರೆ ಸಂಘಟನೆಗಳು ನಿಷ್ಕ್ರಿಯವಾಗುತ್ತವೆ. ನಾವು ಎಂಬ ಪರಿಭಾವನೆ ಇರಿಸಿಕೊಂಡರೆ ಸಂಘಟನೆಗೆ ಹತ್ತು ಕೈಗಳು ಕೈ ಜೋಡಿಸುತ್ತವೆ ಎಂದು ಶ್ರೀರಾಮಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಪಟ್ಟಣದ ಗೋ ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹೇಮನಗೌಡ ಪಾಟೀಲ್ರ ಮನೆಯಲ್ಲಿ ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ ಮಾತನಾಡಿದರು.
ಈಚೆಗೆ ಉಗ್ರರ ವಿರುದ್ಧ ಕೇಂದ್ರ ತೆಗೆದುಕೊಂಡಿರುವ ದಿಟ್ಟ ನಿರ್ಧಾರವನ್ನು ಸೇನೆ ಸ್ವಾಗತಿಸುತ್ತದೆ. ಇಂದು ಕಾಶ್ಮೀರದ ನಮ್ಮ ನೆಲೆಯಲ್ಲಿ ೧೨೦ಕ್ಕೂ ಹೆಚ್ಚು ಉಗ್ರರ ತರಬೇತಿ ಕೇಂದ್ರಗಳಿವೆ. ಇವುಗಳ ನಿರ್ಣಾಮಕ್ಕೆ ಮುಂದಿನ ಹೆಜ್ಜೆ ಇಡಬೇಕು. ಉಗ್ರರನ್ನು ಬೆಂಬಲಿಸುತ್ತಿರುವ ಪಾಕಿಸ್ತಾನದೊಡನೆ ಭಾರತ ಯಾವುದೇ ಸಂಪರ್ಕ ಹೊಂದುವುದರಲ್ಲಿ ಅರ್ಥವಿಲ್ಲ. ಅವರೊಂದಿಗೆ ವ್ಯವಹಾರ, ಕ್ರೀಡೆ, ಸಾರಿಗೆ ಸಂಪರ್ಕವನ್ನು ಖುದ್ದು ಕಡಿತಗೊಳಿಸಿ ಎಂದು ಆಗ್ರಹಿಸಿರುವ ಅವರು, ಟಿಪ್ಪು ಸುಲ್ತಾನ್ ಎಂದೂ ಹಿಂದೂ ಪರವಾಗಿ ಇಲ್ಲ, ಅವನ ಅವಧಿಯಲ್ಲಿ ಅಪಾರ ಪ್ರಮಾಣದ ಹಿಂದೂ ದೇವಸ್ಥಾನಗಳು ನಾಶಗೊಂಡಿವೆ. ಹಿಂದೂ ಜನರ ಮತಾಂತರವಾಗಿದೆ. ಮತದಾಸೆಗೆ ನಮ್ಮ ಪುಡಿ ರಾಜಕಾರಣಿಗಳು ಇತಿಹಾಸ ತಿರುಚಿ ಟಿಪ್ಪೂವನ್ನು ವೈ‘ವೀಕರಿಸುತ್ತಿದ್ದಾರೆ. ಇಂತವರ ಜಯಂತಿ ಆಚರಣೆ ಭಾರತದ ಭೂಮಿಯಲ್ಲಿ ನಡೆಯಕೂಡದು. ಆಚರಣೆಗೆ ಮುಂದಾದರೆ ಸೇನೆ ದೇಶಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಸ್ಲಿಂ ಸಮುದಾಯದಲ್ಲಿನ ಪ್ರಚಲಿತ ತಲಾಖ್ ಪದ್ಧತಿ ಅತ್ಯಂತ ಕೀಳು ಮಟ್ಟದ್ದು, ಮಹಿಳೆಯರು ಎಲ್ಲಕಡೆಯೂ ಒಂದೆ ಅವರಿಗೆ ಅನ್ಯಾಯವಾಗಬಾರದು. ಈ ಹಿನ್ನೆಲೆಯಲ್ಲಿ ಅವರಿಗೆ ಹೀಗೆ ಹಿಂಸೆ ಕೊಡುವುದನ್ನು ನಾವು ವಿರೋಧಿಸುತ್ತೇವೆ ಎಂದರು.
ಇಂದು ಇಲ್ಲಿ ಭ್ರಷ್ಟಾಚಾರಿ, ದೇಶದ್ರೋಹಿಗಳಿಗೆ, ಕ್ರೂರಿಗಳಿಗೆ, ಮೋಸಗಾರರಿಗೆ ಬೆಲೆಯಿದೆಯೆ ವಿನಃ ಹಿಂದೂ ವಾದಿಗಳಿಗೆ, ಪ್ರಾಮಾಣಿಕರಿಗೆ, ದೇಶ ಪ್ರೇಮಿಗಳಿಗೆ ಬೆಲೆಯಿಲ್ಲ, ನಿಜವಾಗಿಯೂ ನಮಗೆ ಯಾವುದೇ ಸ್ವಾತಂತ್ರ್ಯವಿಲ್ಲದಂತಾಗಿರುವುದು ಇಂತಹ ದೇಶದ್ರೋಹಿ ರಾಜಕಾರಣಿಗಳಿಂದ ಎಂದ ಅವರು, ನಮ್ಮ ಸಂಘಟನೆಗಳು ಹಿಂಸಾತ್ಮಕ ರೂಪಕ್ಕಿಳಿಯುವ ಅಗತ್ಯವಿಲ್ಲ, ನಮ್ಮ ಹಕ್ಕು, ನಮ್ಮ ದೇಶದ ಉಳಿವಿಗಾಗಿ ಹೋರಾಡೋಣ ಎಂದು ಕರೆನೀಡಿದರು.