
ಶಿವಮೊಗ್ಗ: 'ಸರಕಾರಿ ವೆಚ್ಚದಲ್ಲಿ ಸಾಧನಾ ಸಮಾವೇಶ ಮಾಡಿ, ಸಿಎಂ ಸಿದ್ದರಾಮಯ್ಯ ನೈತಿಕತೆ ಮರೆಯುತ್ತಿದ್ದಾರೆ,' ಎಂದು ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ್ದಾರೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ' ಸಾಧನಾ ಸಮಾವೇಶವನ್ನು ಸರಕಾರಿ ದುಡ್ಡಿನಲ್ಲಿ ಮಾಡಬೇಡಿ. ಮಂಗನ ಕೈಲಿ ಮಾಣಿಕ್ಯ ಕೊಟ್ಟಂತೆ ಇವರಿಗೆ ಅಧಿಕಾರ ಕೊಟ್ಟಂತಾಗಿದೆ. ಹುಚ್ಚನ ಕೈಲಿ ಅಧಿಕಾರ ಕೊಟ್ಟಿದ್ದೀವಿ. ಇದಕ್ಕಾಗಿ ಇವನ್ನೆಲ್ಲಾ ನೋಡಬೇಕಾಗಿದೆ,' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಜಿಲ್ಲಾಧಿಕಾರಿ ಇನ್ನಿತರ ಅಧಿಕಾರಿಗಳನ್ನು ವೇದಿಕೆ ಮೇಲೆ ಕೂರಿಸಿಕೊಂಡು ರಾಜಕೀಯ ಭಾಷಣ ಮಾಡುತ್ತಿದ್ದಾರೆ.
ಸರ್ಕಾರದ ಸಾಧನೆಗಳನ್ನು ಹೇಳುವುದನ್ನು ಬಿಟ್ಟು ಪ್ರತಿಪಕ್ಷಗಳನ್ನು ಟೀಕಿಸಲು ಸಾರ್ವಜನಿಕರ ಹಣ ಬಳಸುತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿ ತನ್ನ ನೈತಿಕತೆ ತೋರಿಸಬೇಕು. ಕಾಂಗ್ರೆಸ್ ಸಮಾವೇಶ ಮಾಡಲಿ. ಸರ್ಕಾರಿ ವೆಚ್ಚದಲ್ಲಿ ಮಾಡೋದು ಬೇಡ,' ಎಂದು ಆಗ್ರಹಿಸಿದರು.
ಅಧಿಕಾರಿಗಳಿಗೆ ಎಚ್ಚರ
'ಇನ್ನು ಮೂರು ತಿಂಗಳು ಮಾತ್ರ ಈ ಸರಕಾರ ಇರುತ್ತೆ. ಮುಂದೆ ನಿಮ್ಮ ವಿರುದ್ದವೂ ಕ್ರಮ ಕೈಗೊಳ್ಳಬೇಕಾಗುತ್ತೆ,' ಎಂದು ಅಧಿಕಾರಿಗಳಿಗೂ ಈಶ್ವರಪ್ಪ ಎಚ್ಚರಿಸಿದರು.
'ಜ್ಞಾನ ಇಲ್ಲದ ಮುಖ್ಯಮಂತ್ರಿಯನ್ನು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ನೋಡುತ್ತಿದ್ದೇವೆ. ಪ್ರತಿಪಕ್ಷದವರನ್ನು ಬೈಯ್ಯುವ ಸಮಾವೇಶ ಇದು.
ಕರ್ನಾಟಕ ಕೊಲೆಗಡುಕರ ಸ್ವರ್ಗ. ಕೊಲೆಗಾರರನ್ನು ಸರಕಾರ ರಕ್ಷಿಸುತ್ತದೆ. ಮಂಗಳೂರಿನಲ್ಲಿ ಬಶೀರ್ ಮನೆಗೆ ಹೋಗಬೇಕು ಎಂಬ ಕಾರಣಕ್ಕೆ ದೀಪಕ್ ಮನೆಗೂ ಭೇಟಿ ನೀಡಿದರು. ಇದೂವರೆಗೂ ಹತ್ಯೆ ಆದ ಯಾರೊಬ್ಬರ ಮನೆಗೂ ಸಿಎಂ ಹೋಗಿರಲಿಲ್ಲ,' ಎಂದರು.
'ನಮ್ಮ ಮನೇಲಿ ನೋಟು ಎಣಿಸುವ ಮಷಿನ್ ಇದೆ, ಪ್ರಿಂಟಿಂಗ್ ಮಷಿನ್ ಅಲ್ಲ. ನನ್ನ ವ್ಯಾಪಾರದ ಹಣ ಎಣಿಸಲು ಇಂದಿಗೂ ನೋಟ್ ಕೌಂಟಿಂಗ್ ಮಿಷಿನ್ ಬಳಸುವೆ. ಇದನ್ನ ವಿಧಾನಪರಿಷತ್ನಲ್ಲೇ ಹೇಳಿದಿನಿ. ಹುಚ್ಚ ಏನೇನೋ ಮಾತಾಡಿದ್ರೆ ನಾ ಉತ್ತರ ಕೊಡೋಕೆ ಆಗುತ್ತಾ?' ಎಂದಿದ್ದಾರೆ ಈಶ್ವರಪ್ಪ.