
ದಾವಣಗೆರೆ (ಅ.08): ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧವಾದ್ರೆ ರಾಜಮಾತೆ (ಸೋನಿಯಾ), ಯುವರಾಜ (ರಾಹುಲ್) ಇಬ್ರೂ ಇಟಲಿಗೆ ಓಡಿ ಹೋಗಿ ಪೋಪ್ ಸಾಮ್ರಾಜ್ಯದಲ್ಲಿ ಬೈಬಲ್ ಓದ್ಕಂಡು ಕುಳಿತುಕೊಳ್ಳುತ್ತಾರೆಂದು ಬಿಜೆಪಿ ಧುರೀಣ ಗೋ.ಮಧುಸೂಧನ್ ವ್ಯಂಗ್ಯವಾಡಿದರು.
ಶನಿವಾರ ಇಲ್ಲಿ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕಾರಿಣಿಯನ್ನು ಉದ್ದೇಶಿಸಿ ಮಾತನಾಡಿ, ರಾಹುಲ್ ಗಾಂಧಿ ನರೇಂದ್ರ ಮೋದಿಯವರಿಗೆ ರಕ್ತದ ದಲ್ಲಾಳಿ ಎಂದು ಕರೆಯುವುದರ ಮೂಲಕ ತಾವೇನು ಎಂಬುದನ್ನು ಮರು ಸಾಭೀತುಪಡಿಸಿಕೊಂಡಿದ್ದಾರೆ. ಏಕೆಂದರೆ ದಲ್ಲಾಳಿ ಶಬ್ಧದ ಜನಕರೇ ರಾಜೀವಗಾಂಧಿ, ಬೋಪೋರ್ಸ್ ಹಗರಣದಲ್ಲಿ ರಾಜೀವ್ ದಲ್ಲಾಳಿ ಪಡೆದಿದ್ದರು. ದಲ್ಲಾಳಿ ಮಗನ ಬಾಯಲ್ಲಿ ಈ ಮಾತು ಬರದೇ ಬೇರೆಯವರ ಬಾಯಲ್ಲಿ ಬರಲು ಸಾಧ್ಯವೇ ಎಂದು ಪ್ರಶ್ನಿಸಿದರು.
2ಜಿ, ಸ್ಪೆಕ್ಟ್ರಂ ಹಗರಣ, ಕಲ್ಲಿದ್ದಲಿನಲ್ಲಿಯೂ ಕೂಡ ಕಾಂಗ್ರೆಸ್ ದಲ್ಲಾಳಿ ಪಡೆದು ತಿಂದು ನೀರು ಕುಡಿದಿದ್ದಾರೆ. ಹಾಗಾಗಿ ಇನ್ನೊಬ್ಬರ ಮೇಲೆ ದಲ್ಲಾಳಿ ಎಂಬ ಪದ ಸುಲಭವಾಗಿ ಪ್ರಯೋಗಿಸುತ್ತಾರೆ. ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ, ಕಾಂಗ್ರೆಸ್ ಅಂದ್ರೆ ಕಮಿಷನ್ ಎನ್ನುವಂತಾಗಿದೆ ಎಂದು ಆರೋಪಿಸಿದರು.
ನರೇಂದ್ರ ಮೋದಿ ಅವರು ಯುವರಾಜ, ರಾಜಮಾತೆ ಕೃಪೆಯಿಂದ ಪ್ರಧಾನಿಯಾಗಿಲ್ಲ. ಅಭೂತಪೂರ್ವ ಬೆಂಬಲ ಪಡೆದು ಸ್ವತಂತ್ರವಾಗಿ ಬಿಜೆಪಿ ಪ್ರಧಾನಿಯಾಗಿದ್ದಾರೆ. ಸರ್ಜಿಕಲ್ ಯುದ್ಧ ನರೇಂದ್ರ ಮೋದಿಯವರದ್ದು. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದರು.