
ಬಾಗಲಕೋಟೆ(ಎ.30): ಕಳೆದ ಒಂದು ವರ್ಷದ ಹಿಂದೆ ಸುದ್ದಿ ಮಾಡಿದ್ದ ಬಾಗಲಕೋಟೆ ಜಿಲ್ಲೆಯ ಕಲಾದಗಿಯ ಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಹಿರೇಮಠದ ವಿವಾದ ಮತ್ತೆ ಸುದ್ದಿಯಲ್ಲಿದೆ. ಇತ್ತ ಮಠದ ಉತ್ತರಾಧಿಕಾರತ್ವ ವಿವಾದ ಕೋರ್ಟ್ ಮೆಟ್ಟಿಲೇರಿದ್ದು, ಈಗಿರುವ ರಂಭಾಪುರಿ ಶ್ರೀಗಳ ಬೆಂಬಲಿತ ಸ್ವಾಮೀಜಿಯನ್ನು ಒಪ್ಪದ ಕೆಲವು ಭಕ್ತರ ನೂತನ ಸ್ವಾಮೀಜಿಯನ್ನು ಪುರಪ್ರವೇಶ ಮಾಡಿ ಅದ್ಧೂರಿ ಮೆರವಣಿಗೆ ನಡೆಸಿದ್ದಾರೆ. ಇದು ಮತ್ತೆ ಮಠದಲ್ಲಿ ವಿವಾದ ಸೃಷ್ಟಿಸುವ ಹಂತಕ್ಕೆ ತಲುಪಿದೆ.
ಹೀಗೆ ಗ್ರಾಮದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಿರುವುದು ಕಂಡುಬಂದಿದ್ದು ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ. ಇದಕ್ಕೆ ಕಾರಣ, ಗುರುಲಿಂಗೇಶ್ವರ ಮಠಕ್ಕೆ ನೂತನ ಸ್ವಾಮೀಜಿಗಳ ನೇಮಕ ವಿಚಾರ. ಎರಡು ವರ್ಷದ ಹಿಂದೆ ಗ್ರಾಮದ ಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾಗಿದ್ರು. ಅವರ ಉತ್ತರಾಧಿಕಾರಿಯನ್ನಾಗಿ ರಂಭಾಪುರಿ ಶ್ರೀಗಳು ಮಧ್ಯಸ್ಥಿಕೆ ವಹಿಸಿ ತಮ್ಮದೇ ಪೀಠದ ಶಿಷ್ಯರಾಗಿರೋ ಕೆ.ಎಮ್.ಗಂಗಾಧರ ಸ್ವಾಮೀಜಿಯನ್ನ ನೇಮಕ ಮಾಡಿದ್ರು. ಆದರೆ, ಗ್ರಾಮಸ್ಥರ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕ ಮಾಡದೇ ಏಕಪಕ್ಷೀಯವಾಗಿ ರಂಭಾಪುರಿ ಶ್ರೀಗಳು ನಿರ್ಧಾರ ತೆಗೆದುಕೊಂಡಿದ್ದಾರೆಂದು ಕೆಲ ಗ್ರಾಮಸ್ಥರು ಆರೋಪಿಸಿದ್ರು, ಇದ್ರಿಂದ ಪರ ವಿರೋಧ ಬಣಗಳು ಹುಟ್ಟಿಕೊಂಡು ವ್ಯಾಜ್ಯ ಜಿಲ್ಲಾ ನ್ಯಾಯಾಲಯದಲ್ಲಿದೆ. ಆದ್ರೆ ಇದೀಗ ರಂಭಾಪುರಿ ಶ್ರೀಗಳ ವಿರೋಧಿ ಬಣ ನೂತನ ಸ್ವಾಮೀಜಿಯನ್ನಾಗಿ ಮಹಾಂತ ದೇವರು ಸ್ವಾಮೀಜಿಯನ್ನ ಕರೆತಂದು ಅದ್ಧೂರಿ ಮೆರವಣಿಗೆ ಮಾಡಿದ್ರು.
ಇನ್ನು ಈಗಿರುವ ಗುರುಲಿಂಗೇಶ್ವರ ಮಠದ ಗಂಗಾಧರ ಸ್ವಾಮೀಜಿ ಮಾತನಾಡಿದ್ದು, ಭಕ್ತರಲ್ಲಿ ಯಾವುದೇ ಬಣಗಳಿಲ್ಲ, ಎಲ್ಲರೂ ನಮ್ಮ ಭಕ್ತರೇ, ಆದ್ರೆ ಗುರುಲಿಂಗೇಶ್ವರ ಮಠಕ್ಕೆ ಹಾನಿಯಾಗುವಂತ ಯಾವುದಾದ್ರೂ ಕಾರ್ಯ ಚಟುವಟಿಕೆಗಳನ್ನ ಕೈಗೊಂಡಲ್ಲಿ, ಸುಮ್ಮನಿರದೇ ಅಂತವರ ವಿರುದ್ಧ ಕಾನೂನಾತ್ಮಕ ಕ್ರಮಕೈಗೊಳ್ಳಲಾಗುವುದು ಎಂದು ಪರೋಕ್ಷವಾಗಿ ತಮ್ಮ ವಿರೋಧಿ ಬಣಕ್ಕೆ ಎಚ್ಚರಿಕೆ ಸಂದೇಶವನ್ನ ನೀಡಿದ್ದಾರೆ.
ಒಟ್ಟಿನಲ್ಲಿ, ಒಂದೆಡೆ ಗುರುಲಿಂಗೇಶ್ವರ ಮಠಕ್ಕೆ ಪರ್ಯಾಯ ಮಠ ಕಟ್ಟುವ ಇಂಗಿತ ಕೆಲ ಭಕ್ತರಿಂದ ವ್ಯಕ್ತವಾಗಿರೋ ಹಿನ್ನೆಲೆ, ಕಲಾದಗಿ ಗ್ರಾಮದಲ್ಲಿ ಹಲವು ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ.