Districts
ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಮೇಲ್ಮನೆ ಸದಸ್ಯ ಬಸನ ಗೌಡ ಪಾಟೀಲ ಯತ್ನಾಳ ಬಿಜೆಪಿ ಸೇರ್ಪಡೆ ಕಾರ್ಯ ಮುಂದೂಡಲ್ಪಟ್ಟಿದ್ದು, ಆರ್ಎಸ್ಎಸ್ ನಾಯಕರು ಒಪ್ಪಿಗೆ ನೀಡದಿರುವುದೂ ಇದಕ್ಕೆ ಕಾರಣ ಎನ್ನಲಾಗಿದೆ.
ವಿಜಯಪುರ: ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಮೇಲ್ಮನೆ ಸದಸ್ಯ ಬಸನ ಗೌಡ ಪಾಟೀಲ ಯತ್ನಾಳ ಬಿಜೆಪಿ ಸೇರ್ಪಡೆ ಕಾರ್ಯ ಮುಂದೂಡಲ್ಪಟ್ಟಿದ್ದು, ಆರ್ಎಸ್ಎಸ್ ನಾಯಕರು ಒಪ್ಪಿಗೆ ನೀಡದಿರುವುದೂ ಇದಕ್ಕೆ ಕಾರಣ ಎನ್ನಲಾಗಿದೆ.
ಮಾ.24ರಂದು ಯತ್ನಾಳ ಅವರು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಚುನಾವಣೆ ಪ್ರಭಾರಿ ಪ್ರಕಾಶ ಜಾವಡೇಕರ್, ರಾಜ್ಯ ಉಸ್ತುವಾರಿ ಮುರಳಿಧರ ರಾವ್, ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ ಅವರೊಂದಿಗೆ ಚರ್ಚಿಸಿದ್ದರು.
ಮಾ.28ರಂದು ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಆದರೆ, ಮಂಗಳವಾರ ಚುನಾವಣೆ ಘೋಷಣೆಯಾಗಿದ್ದರಿಂದ ರಾಜ್ಯ ಮತ್ತು ರಾಷ್ಟ್ರ ನಾಯಕರು ಚುನಾವಣಾ ತಯಾರಿಯಲ್ಲಿ ನಿರತರಾಗಿರುವುದರಿಂದ ಯತ್ನಾಳ್ ಅವರ ಬಿಜೆಪಿ ಸೇರ್ಪಡೆ ಮುಂದಕ್ಕೆ ಹೋಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಜಿಲ್ಲಾ ಬಿಜೆಪಿಯಲ್ಲೂ ಯತ್ನಾಳ್ ಪಕ್ಷ ಸೇರ್ಪಡೆಗೆ ಅಪಸ್ವರ ಕೇಳಿಬಂದಿದ್ದು, ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಅರುಣ ಶಹಾಪುರ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ. ಬೆಳ್ಳುಬ್ಬಿ ಸೇರಿ ಅನೇಕರು ಅಸಮಾಧಾನ ಹೊರಹಾಕಿದ್ದಾರೆ.