7 ತಿಂಗಳ ಸಂಬಳ, ಮರು ನೇಮಕಕ್ಕೆ ಆಗ್ರಹಿಸಿ, ಪ್ರಧಾನಿ ಸಿಎಂಗೆ ರಕ್ತದಲ್ಲಿ ಪತ್ರ

By Suvarna NewsFirst Published Feb 8, 2023, 12:37 AM IST
Highlights

ಕಳೆದ 9 ದಿನಗಳಿಂದ ಧಾರವಾಡ ಮಹಾನಗರ ಪಾಲಿಕೆ  ಆವರಣದಲ್ಲಿ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನಡೆಸುತ್ತಿರುವ ಆಮರಣ ಉಪವಾಸ ಹಾಗೂ 358 ನೌಕರರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 10ನೇ ದಿನಕ್ಕೆ ಕಾಲಿರಿಸಿದೆ. 

ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 
ಧಾರವಾಡ : ಕಳೆದ 9 ದಿನಗಳಿಂದ ಧಾರವಾಡ ಮಹಾನಗರ ಪಾಲಿಕೆ  ಆವರಣದಲ್ಲಿ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನಡೆಸುತ್ತಿರುವ ಆಮರಣ ಉಪವಾಸ ಹಾಗೂ 358 ನೌಕರರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 10ನೇ ದಿನಕ್ಕೆ ಕಾಲಿರಿಸಿದೆ. 7 ತಿಂಗಳ ಸಂಬಳ ಬಿಡುಗಡೆ ಹಾಗೂ 358 ನೀರು ಸರಬರಾಜು ನೌಕರರ ಮರು ನೇಮಕ ಆಗುವರೆಗೆ ಹೋರಾಟ ಕೈ ಬಿಡದಿರಲು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಪಟ್ಟು ಹಿಡಿದಿರುವುದರಿಂದ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಈ ಹಿನ್ನೆಲೆಯಲ್ಲಿ ಇಂದು ಮಹಿಳಾ ನೌಕರರು ತಮ್ಮ ರಕ್ತದ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದು ಗಮನ ಸೆಳೆದರು.

ಪತ್ರದ ವಿವರ ನೋಡೋದಾದ್ರೆ ಅವಳಿನಗರದ ಜನತೆಗೆ ಕಳೆದ 15ರಿಂದ 20 ವರ್ಷಗಳಿಂದ ಜಲಮಂಡಳಿಯ ನೀರು ಸರಬರಾಜು ನಿರ್ವಹಣಾ ವ್ಯವಸ್ಥೆಯಲ್ಲಿ ಕೆಲಸ ಮಾಡಿದ ನೌಕರರನ್ನು ಎಲ್ ಆಂಡ್ ಟಿ ಕಂಪನಿಗೆ ಹಸ್ತಾಂತರಿಸಲಾಗಿದೆ. ಅವರು  7 ತಿಂಗಳು ದುಡಿಸಿಕೊಂಡು ಕೊನೆಗೆ ಸಂಬಳವೂ ನೀಡದೆ 358 ನೌಕರರ ಮರು ನೇಮಕವೂ ಮಾಡದೆ 358 ಬಡ ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸಿ  ಅನ್ಯಾಯ ಎಸಗಿದ್ದಾರೆ. ಇಷ್ಟೆಲ್ಲಾ ಹೋರಾಟ ನಡೆಯುತ್ತಿದ್ದರೂ ಅವರು ಸಕಾರಾತ್ಮಕವಾಗಿ ಸ್ಪಂದಿಸುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ತಾವು ನಮ್ಮ ರಕ್ತ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

Dharwad: 358 ನೌಕರರನ್ನು ಮರುನೇಮಕ ಮಾಡಿಕೊಳ್ಳಲು ಆಗ್ರಹ: ಆಮರಣಾಂತ ಉಪವಾಸ

ಈ ಸಂದರ್ಭದಲ್ಲಿ ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ನೌಕರರ ಸಂಘದ ನೂರಾರು ಸದಸ್ಯರು ಭಜನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಒಂಬತ್ತನೇ ದಿನದ ಹೋರಾಟ ಬೆಂಬಲಿಸಿ ಹುಡಾ ಮಾಜಿ ಅಧ್ಯಕ್ಷ ದಾನಪ್ಪ ಕಬ್ಬೇರ, ರವಿ ಮಾಳಗೇರ, ಸೂರಜ್ ಪುಡಕಲಕಟ್ಟಿ, ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.

ಉಪವಾಸ ಸತ್ಯಾಗ್ರಹದ ನಡುವೆ 3 ಈಡಿಯಟ್ಸ್‌ ಚಿತ್ರದ ಪ್ರೇರಣೆ ಸೋನಮ್ ವಾಂಗ್ಚುಕ್ ವಶಕ್ಕೆ..?

click me!