Nitin Gadkari Target ಪ್ರತಿ ದಿನ 60 ಕಿ.ಮೀ ರಸ್ತೆ ನಿರ್ಮಿಸುವ ಗುರಿ, ಹೊಸ ದಾಖಲೆಗೆ ಸಜ್ಜಾದ ನಿತಿನ್ ಗಡ್ಕರಿ!

By Suvarna NewsFirst Published Jun 7, 2022, 4:41 PM IST
Highlights
  • ರಾಷ್ಟ್ರೀದ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ನಿರ್ಮಿಸಿದೆ ಭಾರತ
  • ಕೊರೋನಾ ಕಾರಣದಿಂದ ಕಳೆದ ವರ್ಷ ಪ್ರತಿ ದಿನ 28.64 ಕಿ.ಮೀ ರಸ್ತೆ
  • ಇದೀಗ ಪ್ರತಿ ದಿನ 38 ಕಿ.ಮೀ ರಸ್ತೆ ನಿರ್ಮಾಣ, 60 ಕಿ.ಮೀ ಗುರಿ ಎಂದ ಗಡ್ಕರಿ

ನವದೆಹಲಿ(ಜೂ.07): ಭಾರತದಲ್ಲಿ ಹಿಂದೆಂದಿಗಿಂತಲೂ ಅತ್ಯುತ್ತಮವಾದ ರಸ್ತೆ ನಿರ್ಮಾಣವಾಗುತ್ತಿದೆ. ಹೆದ್ದಾರಿ, ಸೇತುವೆ, ಫ್ಲೈ ಓವರ್ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ತ್ವರಿತಗತಿಯಲ್ಲಿ ಆಗುತ್ತಿದೆ. ಇದರ ಶ್ರೇಯಸ್ಸು ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಸಲ್ಲಲಿದೆ. ಇದೀಗ ಗಡ್ಕರಿ ಹೊಸ ಘೋಷಣೆ ಮಾಡಿದ್ದಾರೆ. ಪ್ರತಿ ದಿನ 60 ಕಿಲೋಮೀಟರ್ ರಸ್ತೆ ನಿರ್ಮಿಸುವ ಗುರಿ ಇಟ್ಟುಕೊಂಡಿದ್ದಾರೆ.

ಕೊರೋನಾ ಕಾರಣ 2021-22ರಲ್ಲಿ ಪ್ರತಿ ದಿನ 28.64 ಕಿ.ಮೀ ರಸ್ತೆ ನಿರ್ಮಿಸಲಾಗಿದೆ. ಸದ್ಯ ಪ್ರತಿ ದಿನ 38 ಕಿಲೋಮೀಟರ್ ರಸ್ತೆ ನಿರ್ಮಿಸಲಾಗುತ್ತಿದೆ. ಈ ರಸ್ತೆ ನಿರ್ಮಾಣದ ವೇಗವನ್ನು 60 ಕಿಲೋಮೀಟರ್‌ಗೆ ಹೆಚ್ಚಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಗುರಿ ಹಾಕಿಕೊಂಡಿದ್ದಾರೆ.

ಸ್ಥಳೀಯ ಉತ್ಪಾದನೆಯಿಂದ ಟೆಸ್ಲಾಗೆ ಸಾಕಷ್ಟು ಲಾಭ; ನಿತಿನ್ ಗಡ್ಕರಿ

ನಮ್ಮ ತಂಡ ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಿದೆ. ಕೊರೋನಾ ಸಮಯದಲ್ಲಿ ನಮಗೆ ಹೆಚ್ಚಿನ ಸವಾಲು ಎದುರಾಗಿತ್ತು. ಈ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಕೆಲಸ ಮಾಡಿದ್ದೇವೆ. ಭಾರತದ ಮೂಲೆ ಮೂಲೆಗೂ ರಸ್ತೆ ನಿರ್ಮಿಸುತ್ತಿದ್ದೇವೆ. ರಾಷ್ಟ್ರೀಯ ಹೆದ್ದಾರಿಗಳ ಸ್ವರೂಪ ಬದಲಿಸಿದ್ದೇವೆ. ಈಗಾಗಲೇ ಹೇಳಿದಂತೆ 2025ರ ವೇಳೆಗೆ ಭಾರತದಲ್ಲಿ ಅಮೆರಿಕಾಗಿಂತ ಅತ್ಯುತ್ತಮ ರಸ್ತೆ ನಿರ್ಮಾಣವಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ದೆಹಲಿ-ಜೈಪುರ ಎಲೆಕ್ಟ್ರಿಕ್‌ ಹೆದ್ದಾರಿ ನನ್ನ ಕನಸು :ಗಡ್ಕರಿ
ದೆಹಲಿ ಮತ್ತು ಜೈಪುರದಲ್ಲಿ ಭಾರತದ ಮೊಟ್ಟಮೊದಲ ಎಲೆಕ್ಟ್ರಿಕ್‌ ಹೆದ್ದಾರಿ ನಿರ್ಮಾಣ ಮಾಡುವುದು ನನ್ನ ಕನಸು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ವಿದ್ಯುತ್‌ ಹೆದ್ದಾರಿ ಎಂದರೆ ವಿದ್ಯುತ್‌ ಚಾಲಿತ ವಾಹನಗಳು ಸಂಚರಿಸುತ್ತಲೇ ಚಾಜ್‌ರ್‍ ಆಗುವ ವ್ಯವಸ್ಥೆ ಇರುವ ರಸ್ತೆ. ಅಂಥ ಚಾರ್ಜಿಂಗ್‌ ಸಾಧನಗಳನ್ನು ರಸ್ತೆಯಲ್ಲೇ ಅಳವಡಿಸಿರಲಾಗುತ್ತದೆ. ಸ್ವೀಡನ್‌ನಲ್ಲಿ ಇಂಥ ರಸ್ತೆಗಳು ಈಗಾಗಲೇ ಇವೆ. ಅದನ್ನೇ ಮಾದರಿಯಾಗಿ ಇರಿಸಿಕೊಂಡು ಅಲ್ಲಿನ ಕಂಪನಿಗಳಿಂದ ಸಲಹೆ ಪಡೆದುಕೊಂಡು ಇಂಥ ರಸ್ತೆಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದು ಕಳೆದ ವರ್ಷ ಗಡ್ಕರಿ ಹೇಳಿದ್ದರು. ಮಂಗಳವಾರವೂ ತಮ್ಮ ಮಾತನ್ನು ಅವರು ಪುನರುಚ್ಚರಿಸಿದ್ದಾರೆ.

ಈ ನಡುವೆ, ‘ಸಚಿವಾಲಯದ ಬಜೆಟ್‌ ಉತ್ತಮವಾಗಿದೆ. ಮಾರುಕಟ್ಟೆಸಹ ಅದಕ್ಕೆ ಪೂರಕವಾಗಿದೆ’ ಎಂದೂ ಅವರು ಹೇಳಿದರು. ಪ್ರಸಕ್ತ ಕೇಂದ್ರ ಬಜೆಟ್‌ನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ 1.99 ಲಕ್ಷ ಕೋಟಿ ರು. ಅನುದಾನ ಮೀಸಲಿಡಲಾಗಿದೆ.

ಬೆಂಗಳೂರು-ಮೈಸೂರು ಹೈವೇ ಅಕ್ಟೋಬರ್‌ಗೆ ರೆಡಿ

ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಒಟ್ಟು 279. 03 ಕೋಟಿ ರು. ಮಂಜೂರು
ಉಡುಪಿ- ಚಿಕ್ಕಮಗಳೂರು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಹಾಗು ಸಂಸದೆ ಶೋಭಾ ಕರಂದ್ಲಾಜೆ ಸತತ ಪ್ರಯತ್ನದಿಂದ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ಅನುದಾನಗಳು ಭರಪೂರ ಹರಿದು ಬರುತ್ತಿದೆ.

ಕ್ಷೇತ್ರದಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯ ಕುರಿತು ಈ ಹಿಂದೆ ಜನವರಿ ತಿಂಗಳಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿ, ಅತೀ ಶೀಘ್ರದಲ್ಲಿ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಅನುದಾನಗಳನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದರು. ಸಂಸದೆ ಶೋಭಾ ಕರಂದ್ಲಾಜೆ ಅವರ ಕೋರಿಕೆ ಪರಿಗಣಿಸಿ ಕೇಂದ್ರ ಭೂ ಸಾರಿಗೆ ಸಚಿವರು ರಸ್ತೆಗಳ ಅಭಿವೃದ್ಧಿಗೆ ಒಟ್ಟು 279. 03 ಕೋಟಿ ರು. ಗಳ ಅನುದಾನಗಳನ್ನು ಮಂಜೂರು ಮಾಡಿ ಆದೇಶ ಹೊರಡಿಸಿರುತ್ತಾರೆ.

ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಬಹು ಬೇಡಿಕೆಯ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅನುಮೋದನೆ ನೀಡಿ, ಅನುದಾನಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ನೇತೃತದ ಕೇಂದ್ರ ಸರ್ಕಾರಕ್ಕೆ ಹಾಗು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಕಟಣೆಯಲ್ಲಿ ಕೃತಜ್ಞತೆ ತಿಳಿಸಿದ್ದಾರೆ.

click me!