ನನಗೊಂದು ಮನೆ ಕೊಡಿ. ಇಲ್ಲದಿದ್ದರೆ ನೀವೇ ನನಗೆ ಆಶ್ರಯ ನೀಡಿ ಎಂದು ವೃದ್ಧೆಯೊಬ್ಬರು ಪುತ್ತೂರು ನಗರಸಭಾ ಅಧಿಕಾರಿ ಮತ್ತು ಸಿಬ್ಬಂದಿಯ ಮುಂದೆ ಅಂಗಲಾಚಿದ್ದಾರೆ. ನನಗೆ ಯಾರೂ ದಿಕ್ಕಿಲ್ಲ. ಮಕ್ಕಳು ನೋಡಿಕೊಳ್ಳುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಮಂಗಳೂರು(ಅ.24): ನನಗೆ ಯಾರೂ ದಿಕ್ಕಿಲ್ಲ. ಮಕ್ಕಳು ನೋಡಿಕೊಳ್ಳುತ್ತಿಲ್ಲ. ನನಗೊಂದು ಮನೆ ಕೊಡಿ. ಇಲ್ಲದಿದ್ದರೆ ನೀವೇ ನನಗೆ ಆಶ್ರಯ ನೀಡಿ ಎಂದು ವೃದ್ಧೆಯೊಬ್ಬರು ಪುತ್ತೂರು ನಗರಸಭಾ ಅಧಿಕಾರಿ ಮತ್ತು ಸಿಬ್ಬಂದಿಯ ಮುಂದೆ ಅಂಗಲಾಚಿದ ಘಟನೆ ಪುತ್ತೂರು ನಗರಸಭೆಯಲ್ಲಿ ನಡೆದಿದೆ.
ನಗರಸಭಾ ವ್ಯಾಪ್ತಿಯ ಜಿಡೆಕಲ್ಲು ಎಂಬಲ್ಲಿನ ನಿವಾಸಿ ವೃದ್ಧೆ ದಿಢೀರನೆ ನಗರಸಭೆಗೆ ಆಗಮಿಸಿ ಆಸರೆ ನೀಡುವಂತೆ ಗೋಳಿಟ್ಟರು. ಪುತ್ತೂರು ತಾಲೂಕಿನ ಜಿಡೆಕಲ್ಲು ನಿವಾಸಿ ಸಂಕಮ್ಮ ಎಂಬ ಸುಮಾರು 80 ವರ್ಷ ಪ್ರಾಯದ ವೃದ್ಧೆ ಮಂಗಳವಾರ ಬೆಳಗ್ಗೆ ನಗರಸಭೆ ಕಚೇರಿಗೆ ಬಂದು ತನಗೆ ಮನೆ ನೀಡುವಂತೆ ಕೇಳಿಕೊಂಡಿದ್ದಾರೆ.
ಕನ್ನಡಿಗರಿಗೆ ಕ್ಲರ್ಕ್ ಪರೀಕ್ಷೆಯಲ್ಲೂ ‘ಕೇರಳ’ ತಾರತಮ್ಯ!
ಅವರ ಹಿನ್ನೆಲೆ ವಿಚಾರಿಸಿದಾಗ ಈಕೆ ಆರು ಮಕ್ಕಳ ತಾಯಿ ಎಂಬುದು ಗೊತ್ತಾಯಿತು. ಮಕ್ಕಳ ಮನೆಯಲ್ಲಿ ಹಂಚಿಕೊಂಡು ಬದುಕುತ್ತಿದ್ದ ಅಜ್ಜಿ ಪ್ರಸ್ತುತ ಜಿಡೆಕಲ್ಲಿನಲ್ಲಿರುವ ಮಗಳು ಕಮಲ ಅವರ ಜತೆ ವಾಸವಾಗಿದ್ದರು. ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬದು ಅಜ್ಜಿಯ ದೂರು.
ಪರಿಸ್ಥಿತಿಯ ಗಂಭೀರತೆ ಅರಿತ ಪೌರಾಯುಕ್ತೆ ರೂಪಾ ಶೆಟ್ಟಿಅವರು ಅಜ್ಜಿಗೆ ನಗರಸಭೆಯ ಕೊಠಡಿಯಲ್ಲಿ ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸಿದರು. ಚಹಾ ತಿಂಡಿ ತರಿಸಿ ಕೊಟ್ಟರು. ಬಳಿಕ ನಗರಸಭೆ ಸಿಬ್ಬಂದಿಯನ್ನು ಅಜ್ಜಿಯ ಮನೆಗೆ ಕಳುಹಿಸಿ ವಿಷಯ ತಿಳಿಸಿದರು. ಈ ನಡುವೆ ಪೊಲೀಸರಿಗೂ ಮಾಹಿತಿ ನೀಡಲಾಯಿತು. ಕೊನೆಗೆ ನಗರಸಭೆ ಪೌರಾಯುಕ್ತರು ಅಜ್ಜಿಯನ್ನು ಸುರಕ್ಷಿತವಾಗಿ ಅವರ ಮಗಳ ಮನೆಗೆ ತಲುಪಿಸಿದ್ದಾರೆ.
ಮನೆಗೆ ಮುಟ್ಟಿಸಿದ್ದೇವೆ
ನಗರಸಭೆ ಸಿಬ್ಬಂದಿ ವೃದ್ಧೆಯ ಮಕ್ಕಳ ಮನೆಗೆ ಹೋಗಿ ಮಾಹಿತಿ ನೀಡಿದರೂ ಅಜ್ಜಿಯನ್ನು ಕರೆದುಕೊಂಡು ಹೋಗಲು ಯಾರೂ ಬಂದಿಲ್ಲ. ಹೀಗಾಗಿ ನಾವು ಅಜ್ಜಿಯನ್ನು ಪೊಲೀಸರ ಸಹಕಾರದೊಂದಿಗೆ ಮಗಳ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟಿದ್ದೇವೆ. ಸರ್ಕಾರಿ ಆಸ್ಪತ್ರೆ ಕರೆದುಕೊಂಡು ಹೋಗಿ ಅಲ್ಲಿ ಆರೋಗ್ಯ ತಪಾಸಣೆ ಮಾಡಿಸಿ ಏನೂ ಆರೋಗ್ಯ ಸಮಸ್ಯೆ ಇಲ್ಲ ಎಂಬುದು ಖಾತ್ರಿಯಾದ ಮೇಲೆ ಮನೆಗೆ ಕಳುಹಿಸಿಕೊಡಲಾಗಿದೆ ಎಂದು ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಹೇಳಿದ್ದಾರೆ.
ದೈವಾರಾಧನೆಗೆ ಅವಹೇಳನ: ಆಯುಕ್ತರಿಗೆ ದೂರು