ಮಂಗಳೂರು: 'ಬಿಎಸ್‌ವೈ ಶಾಸಕರ ಕುದುರೆ ವ್ಯಾಪಾರದ ಸಿಇಒ'..!

By Kannadaprabha NewsFirst Published Nov 6, 2019, 9:53 AM IST
Highlights

ಇಡೀ ದೇಶದಲ್ಲಿ ವ್ಯಾಪಾರ, ಉದ್ಯಮ ವ್ಯವಸ್ಥೆ ಸಂಪೂರ್ಣ ನೆಲಕಚ್ಚಿರುವಾಗ ಕರ್ನಾಟಕದಲ್ಲಿ ಮಾತ್ರ ಬಿಜೆಪಿಯಿಂದ ಶಾಸಕರ ಖರೀದಿಯ ಕುದುರೆ ವ್ಯಾಪಾರ ಜೋರಾಗಿ ನಡೆದಿದೆ. ಸಿಎಂ ಯಡಿಯೂರಪ್ಪ ಅವರೇ ಈ ಕುದುರೆ ವ್ಯಾಪಾರದ ಸಿಇಒ ಎಂದು ರಾಷ್ಟ್ರೀಯ ಕಾಂಗ್ರೆಸ್‌ನ ವಕ್ತಾರ ಜೈವೀರ್‌ ಶೆರ್ಗಿಲ್‌ ಟೀಕಿಸಿದ್ದಾರೆ.

ಮಂಗಳೂರು(ನ.06): ಇಡೀ ದೇಶದಲ್ಲಿ ವ್ಯಾಪಾರ, ಉದ್ಯಮ ವ್ಯವಸ್ಥೆ ಸಂಪೂರ್ಣ ನೆಲಕಚ್ಚಿರುವಾಗ ಕರ್ನಾಟಕದಲ್ಲಿ ಮಾತ್ರ ಬಿಜೆಪಿಯಿಂದ ಶಾಸಕರ ಖರೀದಿಯ ಕುದುರೆ ವ್ಯಾಪಾರ ಜೋರಾಗಿ ನಡೆದಿದೆ. ಸಿಎಂ ಯಡಿಯೂರಪ್ಪ ಅವರೇ ಈ ಕುದುರೆ ವ್ಯಾಪಾರದ ಸಿಇಒ ಎಂದು ರಾಷ್ಟ್ರೀಯ ಕಾಂಗ್ರೆಸ್‌ನ ವಕ್ತಾರ ಜೈವೀರ್‌ ಶೆರ್ಗಿಲ್‌ ಟೀಕಿಸಿದ್ದಾರೆ.

ಬಿಜೆಪಿ ಆಡಿಯೊ ಬಿಡುಗಡೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಶಾಸಕರ ಕುದುರೆ ವ್ಯಾಪಾರ ಮಾಡಿದ್ದಕ್ಕೆ ಆಡಿಯೊ ಬಿಡುಗಡೆಯಾಗಿರುವುದೇ ಸಾಕ್ಷಿ. ಇಡೀ ದೇಶದಲ್ಲಿ ಟ್ರೇಡಿಂಗ್‌ ಕ್ರೈಸಿಸ್‌ನಲ್ಲಿರುವಾಗ ಯಡಿಯೂರಪ್ಪ ಕುದುರೆ ರೈಡ್‌ ಟ್ರೇಡಿಂಗ್‌ನ ಸಿಇಒ ಆಗಿದ್ದಾರೆ ಎಂದು ಆರೋಪಿಸಿದ್ದಾರೆ.

ಗದಗ: ಯಡಿಯೂರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆ

ಆಡಿಯೊ ಧ್ವನಿ ತನ್ನದೇ ಎಂದು ಒಪ್ಪಿಕೊಂಡ ಯಡಿಯೂರಪ್ಪ ಅವರಿಗೆ ಸಿಎಂ ಕುರ್ಚಿಯಲ್ಲಿ ಕೂರಲು ಅರ್ಹತೆಯಿಲ್ಲ. ಜನರ ಪವರ್‌ನ್ನು ಬಿಜೆಪಿಯವರು ಮನಿ ಪವರ್‌ ಮಾಡಿದ್ದಾರೆ. ಈ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಜೈವೀರ್‌ ಆಗ್ರಹಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಆಡಿಯೊವನ್ನು ಪರಿಗಣಿಸುವುದಾಗಿ ಹೇಳಿದೆ. ಈ ನ್ಯಾಯಿಕ ಹೋರಾಟ ಕೊನೆಯಾಗುವವರೆಗೂ ಕಾಂಗ್ರೆಸ್‌ ಹೋರಾಟ ನಡೆಸಲಿದೆ. ಆಡಿಯೊದಿಂದಾಗಿ ಯಡಿಯೂರಪ್ಪ ಬಣ್ಣ ಬಯಲಾಗಿದೆ ಎಂದಿದ್ದಾರೆ.

ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಿ:

ಆರ್ಥಿಕವಾಗಿ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ ದೇಶದ ಪರಿಸ್ಥಿತಿ ಸುಧಾರಣೆಗೆ ಕೇಂದ್ರ ಬಿಜೆಪಿ ಸರ್ಕಾರ ಏನು ಕ್ರಮ ಕೈಗೊಂಡಿದೆ ಎನ್ನುವ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಕೇಂದ್ರ ಹಣಕಾಸು ಸಚಿವರ ‘ಲಾಲಿಪಾಪ್‌’ಗಳು ದೇಶವನ್ನು ಆರ್ಥಿಕ ಸುಧಾರಣೆಯತ್ತ ಕೊಂಡೊಯ್ಯುತ್ತಿಲ್ಲ. ಹಾಗಾಗಿ ಅವರು ಕೂಡಲೆ ರಾಜೀನಾಮೆ ನೀಡಬೇಕು. ಆರ್ಥಿಕ ದಿವಾಳಿ ಪರಿಸ್ಥಿತಿ ಬಂದಿರುವುದರಿಂದ ದೇಶಕ್ಕೆ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಬೇಕು ಎಂದು ಜೈವೀರ್‌ ಆಗ್ರಹಿಸಿದ್ದಾರೆ.

‘ಮಹಾ’ ಡೈವೋರ್ಸ್‌:

ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ ಫಲಿತಾಂಶವು ಜನತೆ ಕಾಂಗ್ರೆಸ್‌ ಪರವಾಗಿದ್ದಾರೆ ಎನ್ನುವುದನ್ನು ತೋರಿಸಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆಯ ಪರಿಸ್ಥಿತಿ ‘ವಿವಾಹಕ್ಕೆ ಮೊದಲೇ ಡೈವೋರ್ಸ್‌’ ಎಂಬಂತಾಗಿದೆ. ಅಧಿಕಾರ ಪಡೆಯುವ ತಿಕ್ಕಾಟದ ಅವರ ಮ್ಯೂಸಿಕಲ್‌ ಚೇರ್‌ ಕೂಡಲೆ ನಿಲ್ಲಿಸಬೇಕು. ಆದರೆ ಕಾಂಗ್ರೆಸ್‌ ಇವರೊಂದಿಗೆ ಕೈಜೋಡಿಸುವುದಿಲ್ಲ ಎಂದರು.

ಕುಂಭಕರ್ಣ ಸರ್ಕಾರ:

ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟು ಉದ್ಯಮಗಳು ನೆಲಕಚ್ಚಿ ಶೇ.45ರಷ್ಟುನಿರುದ್ಯೋಗದ ಪ್ರಮಾಣ ಏರಿಕೆಯಾಗಿದೆ ಎನ್ನುವುದನ್ನು ಸರ್ಕಾರದ ದಾಖಲೆಗಳೇ ಹೇಳುತ್ತವೆ. ನಿರುದ್ಯೋಗದ ಅಂತಾರಾಷ್ಟ್ರೀಯ ಪ್ರಮಾಣ ಶೇ.4.1 ಆಗಿದ್ದರೆ, ಭಾರತದಲ್ಲಿ ಇದರ ದುಪ್ಪಟ್ಟು ಶೇ.8.5ರಷ್ಟಿದೆ. ಜನತೆ ತೀವ್ರ ಸಮಸ್ಯೆ ಎದುರಿಸುತ್ತಿದ್ದರೂ ಕೇಂದ್ರ ಸರ್ಕಾರ ಕುಂಭಕರ್ಣನಂತೆ ನಿದ್ದೆಗೆ ಜಾರಿದೆ. ದೇಶದ ಆರ್ಥಿಕ ಬಿಕ್ಕಟ್ಟಿಗೆ ಬಿಜೆಪಿಯೇ ಪ್ರಧಾನ ಆರ್ಕಿಕೆಕ್ಟ್ ಎಂದು ಟೀಕಿಸಿದರು.

ಜೈಶಾ ಉದ್ಯಮ ಗುಟ್ಟು ಹೇಳಲಿ:

ದೇಶದ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ತೀವ್ರ ನಷ್ಟದ ಪರಿಸ್ಥಿತಿಯಲ್ಲಿರುವಾಗ ಅಮಿತ್‌ ಶಾ ಪುತ್ರ ಜೈಶಾ ಅವರ ಉದ್ಯಮದ ಆದಾಯ 15 ಸಾವಿರ ಪಟ್ಟು ಏರಿಕೆಯಾಗಿದೆ. ಇದು ಹೇಗೆ ಸಾಧ್ಯವಾಯ್ತು? ನಷ್ಟದಲ್ಲಿರುವ ಉದ್ದಿಮೆದಾರರಿಗೆ ತಮ್ಮ ಸಕ್ಸಸ್‌ನ ಬಗ್ಗೆ ಜೈಶಾ ವಿವರಿಸುತ್ತಾರೆಯೇ ಎಂದು ವ್ಯಂಗ್ಯವಾಡಿದ್ದಾರೆ.

ನಿರ್ಮಲಾ ಮಿಸ್‌ ಮ್ಯಾನೇಜರ್‌:

ಆರ್‌ಬಿಐ ಸೋಮವಾರವಷ್ಟೇ ಬಿಡುಗಡೆ ಮಾಡಿದ ವರದಿಯ ಪ್ರಕಾರ ದೇಶದ ಆರ್ಥಿಕ ಅಪರಾಧಗಳ ಸಂಖ್ಯೆ 25 ಸಾವಿರ ದಾಟಿದೆ. ಬ್ಯಾಂಕ್‌ಗಳ ಎನ್‌ಪಿಎ ಮೊತ್ತ 8 ಲಕ್ಷ ಕೋಟಿ ರು. ಮೀರಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಿಸ್‌ ಮ್ಯಾನೇಜರ್‌ ಆಗಿರುವುದೇ ಇದಕ್ಕೆ ಸಾಕ್ಷಿ. ಬಿಜೆಪಿಯವರು ತಮ್ಮ ಆದಾಯದ ಮೊತ್ತ ನೋಡಿ ದೇಶದ ಆರ್ಥಿಕತೆ ಸುಸ್ಥಿತಿಯಲ್ಲಿದೆ ಎಂದು ಹೇಳುತ್ತಿದ್ದಾರೆಯೇ ಹೊರತು ನಿಜವಾದ ಆರ್ಥಿಕ ದುಃಸ್ಥಿತಿಯ ಬಗ್ಗೆ ಮಾತನಾಡುತ್ತಿಲ್ಲ ಎಂದು ಜೈವೀರ್‌ ಕಿಡಿಕಾರಿದ್ದಾರೆ.

BSY ಆಡಿಯೋ ರೆಕಾರ್ಡ್: ಹೋಟೆಲ್‌ ಮ್ಯಾನೇಜರ್‌ಗೆ ನೋಟಿಸ್‌

ಕಾಂಗ್ರೆಸ್‌ ಮುಖಂಡರಾದ ರಮಾನಾಥ ರೈ, ಯು.ಟಿ. ಖಾದರ್‌, ಹರೀಶ್‌ ಕುಮಾರ್‌, ಅಭಯಚಂದ್ರ ಜೈನ್‌, ಮೊಹಿಯುದ್ದೀನ್‌ ಬಾವ, ರಾಷ್ಟ್ರೀಯ ಕಾಂಗ್ರೆಸ್‌ ಮಾಧ್ಯಮ ಸಂಯೋಜಕ ಸಂಜೀವ್‌ ಸಿಂಗ್‌, ರಾಜ್ಯ ಜಾಲತಾಣ ಸಂಯೋಜಕಿ ಲಾವಣ್ಯಾ ಬಲ್ಲಾಳ್‌ ಮತ್ತಿತರರಿದ್ದರು.

click me!