
ಜಮಖಂಡಿ(ಆ.26): ಇಬ್ಬರೂ ಹೆಣ್ಣು ಮಕ್ಕಳಾದರೆಂದು ಬೇಸರಗೊಂಡು ತಾಯಿಯೇ ತನ್ನ ಮೂವರೂ ಮಕ್ಕಳನ್ನು ಬಾವಿಗೆ ಎಸೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು, ಮೂರೂ ಮಕ್ಕಳು ಮೃತಪಟ್ಟ ಹೃದಯ ವಿಧ್ರಾವಕ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕುಂಬಾರಹಳ್ಳದಲ್ಲಿ ನಡೆದಿದೆ.
ಮಗ ಶ್ರೀಶೈಲ್ (6), ಮಗಳು ಶ್ರಾವಣಿ (3) ಹಾಗೂ ಕಳೆದ 21 ದಿನಗಳ ಹಿಂದೆಯಷ್ಟೇ ಜನಿಸಿದ್ದ ಹಸುಗೂಸು ಸೌಜನ್ಯ ಮೃತಪಟ್ಟವರು. ಬಾಣಂತಿ ಸಂಗೀತಾ ಹಣಮಂತ ಗೌಡಪ್ಪಹೋಳ (26) ಅದೃಷ್ಟವಶಾತ್ ಬದುಕುಳಿದಿದ್ದಾಳೆ. ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, 21 ದಿನಗಳ ಹಸುಗೂಸು ಸೇರಿ ಮೂವರೂ ಮಕ್ಕಳು ಪ್ರಾಣ ತೆತ್ತಿವೆ.
ಬಂಧನಕ್ಕೆ ಹೆದರಿ ಕ್ರಿಮಿನಾಶಕ ಸೇವಿಸಿದ ಆರೋಪಿ; ಮಂಗಳೂರು ಜಿಲ್ಲಾಸ್ಪತ್ರೆಗೆ ದಾಖಲು!
ಮೊದಲು ಗಂಡು ಮಗನನ್ನು ಹೆತ್ತಿದ್ದ ಸಂಗೀತಾಗೆ ಎರಡನೇ ಹೆರಿಗೆಯಲ್ಲಿ ಹೆಣ್ಣು ಮಗಳು ಜನಿಸಿದ್ದಳು. ಕಳೆದ 20 ದಿನಗಳ ಹಿಂದಷ್ಟೇ ಆದ ಮೂರನೇ ಹೆರಿಗೆಯಲ್ಲಿ ಹೆಣ್ಣು ಮಗುವೇ ಹುಟ್ಟಿತೆಂದು ಮಾನಸಿಕವಾಗಿ ನೊಂದು ಸಂಗೀತಾ ಮೂವರೂ ಮಕ್ಕಳನ್ನು ಹೊಲದಲ್ಲಿದ್ದ ಬಾವಿಗೆ ಎಸೆದು ತಾನೂ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಆದರೆ, ಅಕ್ಕಪಕ್ಕದಲ್ಲಿದ್ದ ರೈತರು ನೋಡಿ ರಕ್ಷಣೆಗೆ ಧಾವಿಸುವಷ್ಟರಲ್ಲಿ ಮಕ್ಕಳು ಅಸುನೀಗಿದ್ದವು. ನೀರಿನಲ್ಲಿ ಮುಳುಗೇಳುತ್ತಿದ್ದ ಬಾಣಂತಿ (ತಾಯಿ)ಯನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಸಂಗೀತಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಡಿವೈಎಸ್ಪಿ ಶಾಂತೀರ, ಸಿಪಿಐ ಮಲ್ಲಪ್ಪ ಮಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ