ನಾಲ್ಕು ಮದುವೆ ಆದರೂ ಮತ್ತೆ ಅನೈತಿಕ ಸಂಬಂಧ: ಹೆಂಡತಿ ಕೊಲೆ ಮಾಡಿದ ನಾಲ್ಕನೇ ಗಂಡ!

By Suvarna NewsFirst Published Sep 21, 2022, 12:33 PM IST
Highlights

Husband kills wife: ಅನೈತಿಕ ಸಂಬಂಧಗಳು ಮುಗಿಯುವುದು ದುರಂತ ಅಂತ್ಯದಲ್ಲಿ ಎಂಬುದಕ್ಕೆ ಮತ್ತೊಂದು ನಿದರ್ಶನ ಅಜ್ಮೇರ್‌ನಲ್ಲಿ ಕಂಡುಬಂದಿದೆ. ನಾಲ್ಕು ಜನರನ್ನು ಮದುವೆಯಾಗಿ ಇನ್ನೊಬ್ಬನ ಜೊತೆ ಸಂಬಂಧ ಬೆಳೆಸಿದ್ದ ಹೆಂಡತಿಯನ್ನು ಗಂಡ ಕೊಲೆ ಮಾಡಿದ್ದಾನೆ.

ಅಜ್ಮೇರ್‌: ಆಕೆಗೆ ನಾಲ್ಕು ಮದುವೆಯಾಗಿತ್ತು. ಮೂರು ಗಂಡಂದಿರನ್ನು ಬಿಟ್ಟು ನಾಲ್ಕನೇ ಮದುವೆಯಾಗಿದ್ದಳು. ಆದರೆ ನಂತರವೂ ಅನೈತಿಕ ಸಂಬಂಧ ಹೊಂದಿದ್ದಳು ಎಂಬ ಶಂಕೆ ನಾಲ್ಕನೇ ಗಂಡನಲ್ಲಿತ್ತು. ಕಡೆಗೆ ಗಂಡ ಆಕೆಯನ್ನು ಕೊಲೆ ಮಾಡಿಯೇ ಬಿಟ್ಟ. ಈ ಘಟನೆ ನಡೆದಿರುವುದು ಅಜ್ಮೇರ್‌ನಲ್ಲಿ. ಅಜ್ಮೇರ್‌ ಪೊಲೀಸರು ಗಂಡ ಮತ್ತು ಕೊಲೆಗೆ ಸಹಕರಿಸಿದ ಇಬ್ಬರನ್ನು ಬಂಧಿಸಿದ್ದಾರೆ. ಅಜ್ಮೇರ್‌ ಜಿಲ್ಲೆಯ ದಿಯೋಘರ್‌ನ ಪುಷ್ಪಕ್‌ ಬ್ಲಾಕ್‌ನಲ್ಲಿ ಮಹಿಳೆಯ ಕೊಲೆ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ ಹೆಂಡತಿ ಇನ್ನೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ನಾಲ್ಕನೇ ಗಂಡ ಮಹಿಳೆಯನ್ನು ಕೊಲೆ ಮಾಡಿದ್ದಾನೆ. 

ಸೆಪ್ಟೆಂಬರ್‌ 17ರಂದು ಮಹಿಳೆಯ ಮೃತದೇಹ ಕಾಡಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರಿಗೆ ಸ್ಥಳೀಯರಿಂದ ಮಾಹಿತಿ ಸಿಕ್ಕಿತ್ತು. ಮಹಿಳೆಯ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳಿಸಿದರು. ಮೃತ ಮಹಿಳೆಯ ಹೆಸರು ಖಾನ್ಪುರಾ ಮೂಲದ ಕಾಂತಾದೇವಿ ಎಂದು ತನಿಖೆ ವೇಳೆ ಪತ್ತೆಯಾಗಿತ್ತು. ವಿಚಾರಣೆ ಮುಂದುವರೆಸಿದ ಪೊಲೀಸರು ಕಾಂತಾದೇವಿಯ ತವರುಮನೆಗೆ ಹೋಗಿದ್ದಾರೆ. ಅಲ್ಲಿ ಕಾಂತಾದೇವಿ ತಂದೆ ಚೋಟು ಸಿಂಗ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಸೇತು ಸಿಂಗ್‌ ಎಂಬುವವನ ಜೊತೆ ನನ್ನ ಮಗಳ ಮದುವೆಯಾಗಿತ್ತು. ಆತನೇ ಮಗಳನ್ನು ಕೊಲೆ ಮಾಡಿರಬಹುದು ಎಂದು ಅನುಮಾನ ಎಂಬ ಶಂಕೆಯನ್ನು ಕಾಂತಾದೇವಿ ತಂದೆ ವ್ಯಕ್ತಪಡಿಸಿದ್ದರು. ಚೋಟು ಸಿಂಗ್‌ ಹೇಳಿಕೆ ಆಧರಿಸಿ ತನಿಖೆ ಮುಂದುವರೆಸಿದ ಪೊಲೀಸರು ಸೇತು ಸಿಂಗ್‌ರನ್ನು ವಿಚಾರಣೆಗೊಳಪಡಿಸಿದರು. ಸೆಪ್ಟೆಂಬರ್‌ 17ನೇ ತಾರೀಕು ಸೇತು ಸಿಂಗ್‌ ಮತ್ತು ಕಾಂತಾದೇವಿ ಆಟೋ ರಿಕ್ಷಾವೊಂದರಲ್ಲಿ ಮಕರ್ವಾಲಿ ಹಳ್ಳಿಯ ಬಳಿ ಹೋಗುತ್ತಿದ್ದರು. ಆಗ ಇಬ್ಬರ ನಡುವೆ ವಾಗ್ವಾದವಾಗಿದೆ. ಅಕ್ರಮ ಸಂಬಂಧ ಇರುವ ಶಂಕೆಯನ್ನು ಸೇತು ಸಿಂಗ್‌ ಹೊರಹಾಕಿದ್ದಾನೆ. ಇದರಿಂದ ಇಬ್ಬರ ನಡುವೆ ಜಗಳವಾಗಿದೆ. ಸಿಟ್ಟಿನ ಬರದಲ್ಲಿ ಸೇತು ಸಿಂಗ್‌ ಕಾಂತಾದೇವಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಟೋ ಮಾಲೀಕ ಖೇಮ್‌ ಸಿಂಗ್‌ ಮತ್ತು ಆತನ ಗರ್ಲ್‌ಫ್ರೆಂಡ್‌ ರೇಣು ಮೃತದೇಹವನ್ನು ಕಾಡಿಗೆ ಹೊತ್ತೊಯ್ದು ಬಿಸಾಕಿದ್ದಾರೆ. 

ಇದನ್ನೂ ಓದಿ: ಒಂದಿನ ಬೇರೆಯವರ ಜೊತೆ ಮಲಗಬೇಕು, ಹೆಂಡತಿ ಡಿಮ್ಯಾಂಡಿಗೆ ಗಂಡ ಸುಸ್ತು!

ಕಾಂತಾ ಮತ್ತು ಸೇತು ಸಿಂಗ್‌ ಮದುವೆಯಾಗಿ ಒಂದೂವರೆ ವರ್ಷ ಕಳೆದಿತ್ತು. ಜೋಧ್‌ಪುರದಲ್ಲಿ ಸೇತು ಸಿಂಗ್‌ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಘಟನೆ ನಡೆದ ದಿನ ಆತ ಅಜ್ಮೇರ್‌ಗೆ  ಬಂದಿದ್ದ. ಆಟೋದಲ್ಲಿ ಕುಳಿತಾಗ, ಕಾಂತಾ ಜೊತೆ ಮಾತನಾಡಲು ಸೇತು ಸಿಂಗ್‌ ಹಾತೊರೆಯುತ್ತಿದ್ದ. ಆದರೆ ಕಾಂತಾದೇವಿಗೆ ಪದೇ ಪದೇ ಕರೆಗಳು ಬರುತ್ತಿದ್ದವು. ಇದರಿಂದ ಮಾತನಾಡಲು ಸಾಧ್ಯವಾಗಲಿಲ್ಲ. 

ಇದರಿಂದ ಸೇತು ಸಿಂಗ್‌ಗೆ ಕಾಂತಾದೇವಿ ಅಕ್ರಮ ಸಂಬಂಧ ಹೊಂದಿರುವ ಶಂಕೆಯಾಗಿದೆ. ಫೋನ್‌ ಯಾರು ಮಾಡುತ್ತಿರುವುದು, ಮೊಬೈಲ್‌ ತೋರಿಸು ಎಂದಾಗ, ಕಾಂತಾ ತೋರಿಸಲು ಒಪ್ಪಲಿಲ್ಲ. ಇಬ್ಬರ ನಡುವೆ ಜಗಳ ತಾರಕ್ಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ. 

ಇದನ್ನೂ ಓದಿ: Real Story: ಈ ಕಾರಣಕ್ಕೆ ಪತಿಗೆ ಮೋಸ ಮಾಡಿದ್ದಾರೆ ಮಹಿಳೆಯರು

ಅನೈತಿಕ ಸಂಬಂಧಗಳು ದುರಂತ ಅಂತ್ಯ ಕಾಣುತ್ತಿರುವುದು ಇದು ಮೊದಲೇನಲ್ಲ. ಆದರೆ ಈ ಪ್ರಕರಣದಲ್ಲಿ ಮಹಿಳೆ ನಾಲ್ಕು ಮದುವೆಯಾಗಿರುವದು ನಿಜವಾದರೂ, ಇನ್ನೊಬ್ಬನೊಂದಿಗೆ ಸಂಬಂಧ ಹೊಂದಿದ್ದಳೆಂದು ಹೇಳಲು ಸಾಧ್ಯವಾಗುವುದಿಲ್ಲ. ಪದೇ ಪದೇ ಕರೆ ಬರುತ್ತಿರುವುದರಿಂದ ಗಂಡನಿಗೆ ಅನುಮಾನವಾಗಿದೆ. ಈ ಅನುಮಾನದಿಂದಲೇ ಈ ದುರಂತ ನಡೆದಿದೆ. ಒಟ್ಟಿನಲ್ಲಿ ಗಂಡ ಹೆಂಡತಿ ಸಂಬಂಧದಲ್ಲಿ ಅನುಮಾನ ಎಂಬ ವಿಶಬೀಜ ಬಿದ್ದರೆ ಅದು ಹೆಮ್ಮರವಾಗಿ ಬೆಳೆಯಲು ವರ್ಷಗಳು ಬೇಡ, ನಿಮಿಷಗಳಷ್ಟೇ ಸಾಕು ಎಂಬುದು ಈ ಘಟನೆಯಿಂದ ಸಾಬೀತಾಗುತ್ತದೆ. ಹೆಂಡತಿಯನ್ನು ಕೊಲೆ ಮಾಡಿದ ತಪ್ಪಿಗೆ ಈಗ ಜೈಲು ಪಾಲಾಗಿರುವ ಗಂಡ ಸ್ವಲ್ಪ ಸಹನೆಯಿಂದ ವರ್ತಿಸಿದ್ದರೆ ಒಂದು ಜೀವ ಉಳಿಯುತ್ತಿತ್ತು.

click me!