ಎನ್ ಕೌಂಟರ್ ನಂಬರ್- 119 ದುಬೆ! ಉತ್ತರ ಪ್ರದೇಶದಲ್ಲಿ ಮಾತನಾಡುತ್ತಿರುವ ಖಾಕಿ

By Suvarna NewsFirst Published Jul 11, 2020, 7:37 PM IST
Highlights

ದೇಶವನ್ನೇ ಬೆಚ್ಚಿಬೀಳಿಸಿದ ಎನ್ ಕೌಂಟರ್/ ಆ ಪಾಪಿಗೆ ಶಿಕ್ಷೆ ಆಗಬೇಕಿತ್ತು/ ರೌಡಿ ವಿಕಾಸ್ ದುಬೆ ಎನ್ ಕೌಂಟರ್  ಹಿಂದೆ ಮತ್ತು ಮುಂದೆ/ ಉತ್ತರ ಪ್ರದೇಶ ಪೊಲೀಸರ ರಿವಾಲ್ವಾರ್ ನಿಂದ ಹಾರಿದ ಗುಂಡು

ಡೆಲ್ಲಿ ಮಂಜು

ಎನ್ ಕೌಂಟರ್ ನಂಬರ್- 119...! ಪೊಲಿಟಿಕಲ್ ವುಡ್ ನಿಂದ ಹಿಡಿದು ಬಾಲಿವುಡ್ ತನಕ  ಈ ಎನ್ ಕೌಂಟರ್- 119 ರದ್ದೇ ಮಾತು. ಬಾಲಿವುಡ್ ನಲ್ಲಿ ಈ ಕಥೆಗೆ ಯಾರು ಹೀರೋ ಅನ್ನುವ ತನಕ ಮಾತು ಹೋಗಿದೆ. ಟೈಟಲ್ ಕೂಡ ರಿಜಿಸ್ಟರ್ ಆಗಿದೆ.  ಇಂಡಿಯಾದಲ್ಲಿ ಸೂರ್ಯ 12 ತಾಸು ನಿದ್ರೆ ಮಾಡಿ ಮತ್ತೆ ಬರೋ ಹೊತ್ತಿಗೆ ಇಡೀ ಉತ್ತರ ಭಾರತದಲ್ಲಿ ಸದ್ದು ಮಾಡಿತ್ತು ಈ ಎನ್ ಕೌಂಟರ್.

ಉತ್ತರ ಪ್ರದೇಶದಲ್ಲಿ ಯೋಗಿ ಅವರ ಸರ್ಕಾರ ಬಂದ ಮೇಲೆ ಪೊಲೀಸರ ಸರ್ವೀಸ್ ರಿವಾಲ್ವರು ಮಾತನಾಡ ತೊಡಗಿತು. ಅಪರಾಧಗಳು ಎಲ್ಲೆ ಮೀರುತ್ತಿವೆ. ಸಾಮಾಜ ವಿರೋಧಿ ಶಕ್ತಿಗಳು ಅಟ್ಟಹಾಸ ಮೆರೆಯೋಕೆ ಶುರುವಾದಾಗ ಖಾಕಿಗಳು ರಿವಾಲ್ವರ್ ಗಳಿಗೆ ಕೆಲಸ ಕೊಡೋಕೆ ಶುರು ಮಾಡಿದ್ರು. ಇದಕ್ಕೆ ಯೋಗಿ ಸರ್ಕಾರ ಬೆಂಬಲಕ್ಕೆ ನಿಂತಿತು. ಹೀಗೆ ಸಾಗಿದ 'ಬುಲೆಟ್ ಗಳ ಸವಾರಿ' ಜುಲೈ 10ಕ್ಕೆ ಕಾನ್ಪುರ ಹೈವೇ ಬಂದು ನಿಂತಿತ್ತು.  ಅದು 119 ನೇ ಏನ್ ಕೌಂಟರ್ ಆಗಿತ್ತು.

ಸಚಿವರು ಕಾಪಾಡುತ್ತಾರೆ ಎಂದು ಸರಂಡರ್ ಆಗಿದ್ದ ದುಬೆ

119 ಆರೋಪಿಗಳು...13 ಮಂದಿ ಪೊಲೀಸರು..!

2017 ರಲ್ಲಿ 28, 2018 ರಲ್ಲಿ 41, 2019 ರಲ್ಲಿ 34, 2020 ರಲ್ಲಿ 16 ಹೀಗೆ ನಾಲ್ಕು ವರ್ಷಗಳಲ್ಲಿ ಬರೋಬ್ಬರಿ 119 ಮಂದಿ ಪಾತಕಿಗಳು ಉಸಿರು ನಿಲ್ಲಿಸಿದ್ದಾರೆ ಉತ್ತರ ಪ್ರದೇಶದ ಪೊಲೀಸರು. ಇನ್ನು ರೌಡಿಗಳ ಮತ್ತು ಖಾಕಿಗಳ ನಡುವಿನ ಕಾಳಗದಲ್ಲಿ 13 ಪೊಲೀಸರು ಕೂಡ ಹುತಾತ್ಮರಾಗಿದ್ದಾರೆ.
ಇಷ್ಟರ ನಡುವೆ ತನಿಖೆಯ ಮೇಲೆ ತನಿಖೆ ಎನ್ನುವಂತೆ ನಡೆದರೂ ಕೂಡ 74 ಎನ್ ಕೌಂಟರ್ ಗಳಲ್ಲಿ ಪೊಲೀಸರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಪೊಲೀಸರ ರಿವಾಲ್ವರ್ ನಿಂದ ಹಾರಿದ ಗುಂಡು ಆತ್ಮರಕ್ಷಣೆಗಾಗಿ ಅಂಥ ತನಿಖೆಗಳಲ್ಲಿ ಸಾಬೀತಾಗಿದೆ.

ಆ ಗುಂಡು ಹಾರಬೇಕಿತ್ತು...!

ತನ್ನನ್ನು ಹಿಡಿಯಲು ಬಂದ ಪೊಲೀಸರ ಮೇಲೆ ಗುಂಡಿನ ಸುರಿಮಳೆಗೈದು ಎಂಟು ಮಂದಿ ಖಾಕಿವಸ್ತ್ರಧಾರಿಗಳು ಹುತಾತ್ಮರಾಗಿಸಿದ್ದೆ ಸಾಕಾಯ್ತು 119 ನೇ ಎನ್ ಕೌಂಟರ್ ಗೆ ಕಾರಣ. ಉತ್ತರ ಪ್ರದೇಶದ ಕಾನ್ಪುರ ಹೈವೇ ಪೊಲೀಸರ ರಿವಾಲ್ವರ್ ನಿಂದ ನಾಲ್ಕು ಗುಂಡುಗಳು ಹಾರಿದವು. ಆ ಗುಂಡಿಗೆ ಸಾವನ್ನಪ್ಪಿದ್ದು ಕುಖ್ಯಾತ ಪಾತಕಿ ವಿಕಾಸ್ ದುಬೆ.

ಪೊಲೀಸರನ್ನು ಕೊಂದ ಬಳಿಕ ದುಬೆ ತಲೆಮರೆಸಿಕೊಂಡು ಮಧ್ಯಪ್ರದೇಶ ದ ಉಜ್ಜಯಿನಿ ತಲುಪಿದ್ದು. ಅಲ್ಲಿನ ಮಹಾಕಾಲ ದೇವಾಲಯದ ಬಳಿ 'ಮೇಹು ವಿಕಾಸ್ ದುಬೆ' ಎಂದು ಕಿರುಚಿದ ನಂತರ ಎಂ ಪಿ ಪೊಲೀಸರು ಹಿಡಿದು ಯು.ಪಿ ಪೊಲೀಸರಿಗೆ ಒಪ್ಪಿಸಿದರು.  ನಂತರ ಶುಕ್ರವಾರ ಬೆಳಗ್ಗೆ ಮತ್ತೆ ಪೊಲೀಸರ ಮೇಲೆ ಅಟ್ಯಾಕ್ ಮಾಡಲು ಮುಂದಾದಾಗ ಪೊಲೀಸರ ರಿವಾಲ್ವಾರ್ ನಲ್ಲಿದ್ದ ಗುಂಡುಗಳು ದುಬೆ ಎದೆಹೊಕ್ಕವು. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ವಿಕಾಸ ದುಬೆ ಕೊನೆ ಉಸಿರೆಳೆದ. ಈ ಸುದ್ದಿ ಕೇಳಿದ ಹುತಾತ್ಮ ಪೊಲೀಸರ ಕುಟುಂಬಗಳು ಈ ಗುಂಡುಗಳು ಹಾರಲೇಬೇಕಿತ್ತು ಅಂಥ ಪ್ರತಿಕ್ರಿಯಿಸಿದವು. ಅಲ್ಲದೇ ಉತ್ತರ ಪ್ರದೇಶದಂಥ ದೊಡ್ಡ ರಾಜ್ಯದ ಪೊಲೀಸ್ ಪಡೆಗೆ ನೈತಿಕ ಸ್ಥೈರ್ಯ ತುಂಬ ಬೇಕಿತ್ತು ಅನ್ನುವ ಮಾತುಗಳು ಕೂಡ ಕೇಳಿಬಂದವು.

ದುಬೆ ಎನ್ ಕೌಂಟರ್ ಗೆ ಮುನ್ನ ನಡೆದಿದ್ದ ಘಟನೆ

ರಾಜಕೀಯ ಕೆಸರೆರಚಾಟ ಶುರು..

60 ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಿದ್ದ ವ್ಯಕ್ತಿ, ಕೊಲೆ, ಸುಲಿಗೆಯಿಂದ ಹಿಡಿದ ಮಾಡದ ಅಪರಾಧವಿಲ್ಲ ಎನ್ನುವಂಥ ವಿಕಾಸ್ ದುಬೆ ಸತ್ತರೇ ರಾಜಕೀಯ ನಾಯಕರು ಕೆಸರೆರಚಾಟ ಶುರು ಮಾಡಿದ್ದಾರೆ. ದುಬೆ ಒಂದು ಕಾಲದಲ್ಲಿ ಎಸ್ಪಿ, ಬಿಎಸ್ಪಿ ಪಕ್ಷಗಳ ಆಪ್ತ ನಾಗಿದ್ದ. ನಂತರ ಇತ್ತೀಚೆಗೆ ಬಿಜೆಪಿಯತ್ತ ಒಲುವು ತೋರಿದ್ದ. ಬಿಜೆಪಿ ಶಾಸಕರ ಕೊಲೆ ಪ್ರಕರಣದ ಆರೋಪ ಇದ್ದ ಕಾರಣಕ್ಕೆ ಬಿಜೆಪಿ ಈತನ ಬಗ್ಗೆ ಒರೆಗಣ್ಣಿನಿಂದ ನೋಡುತ್ತಿತ್ತು.

ಪೊಲೀಸರ ಹತ್ಯೆ ನಂತರದ ಎನ್ ಕೌಂಟರ್ ಗಳು ಸುಪ್ರೀಂ ಕೋರ್ಟ್ ತನಿಖೆ ನಡೆಸಬೇಕು ಅಂಥ ಮಾಯಾವತಿ ಆಗ್ರಹಿಸಿದರೇ, ದುಬೆ ಕರೆತರುತ್ತಿದ್ದ ಕಾರು ಪಲ್ಟಿಯಾಗಿ ಉತ್ತರ ಪ್ರದೇಶ ಸರ್ಕಾರ ಪಲ್ಟಿಯಾಗುವುದು ತಪ್ಪಿದೆ ಅಂಥ ಎಸ್ಪಿ ಕುಟುಕಿದೆ. ಆರೋಪಿ ಹೋದ ಆದ್ರೆ ಆತನಿಗೆ ರಕ್ಷಣೆ ನೀಡುತ್ತಿದ್ದರವರ ಗತಿ ಏನು? ಅಂಥ ಕಾಂಗ್ರೆಸ್ ಟೀಕಿಸಿದೆ.

ಪೊಲೀಸರೇ ಶತ್ರುಗಳು..!

ಪೊಲೀಸರಿಗೆ ಪೊಲೀಸರೇ ಶತ್ರುಗಳು... ಉತ್ತರ ಪ್ರದೇಶದಲ್ಲಿ ಇಂಥ ಪರಿಸ್ಥಿತಿ ಬಂದಿದೆ. ಪೊಲೀಸರ ಲಿಂಕ್ ಇಲ್ಲದೇ ದುಬೆ ಆ ಮಟ್ಟಿಗೆ ಬೆಳೆಯಲು ಸಾಧ್ಯವಿಲ್ಲ ಅನ್ನು ಮಾತು ಮೊನ್ನೆ ಯು.ಪಿ ಪೊಲೀಸರು ಪ್ರೂವ್ ಮಾಡಿದ್ದಾರೆ ಅನ್ನಿಸುತ್ತೆ. ಬಂಧನಕ್ಕೆ ಟೀಂ ಬರುತ್ತಿದೆ ಅಂಥ ಪೊಲೀಸರ ವಿರುದ್ದ ಪೊಲೀಸರೇ ಮಾಹಿತಿ ಹಾಕಿಕೊಟ್ಟಿದ್ದಾರೆ. ಇಂಥ ಅವಮಾನ ಆಗಬಾರದಿತ್ತು ಯು.ಪಿ ಪೊಲೀಸರಿಗೆ. ಇದೇ ಕಾರಣಕ್ಕೆ ಒಂದಷ್ಟು ಮಂದಿ ಪೊಲೀಸ್ ಅಧಿಕಾರಿಗಳು ಅಮಾನತ್ತುಗೊಂಡಿದ್ದಾರೆ. ಹುತ್ಮಾತ್ಮರ ಕುಟುಂಬದ ಶಾಪ ಮಾತ್ರ ದುಬೆ ಜೊತೆ ಶಾಮೀಲಾಗಿರುವ ಪೊಲೀಸರಿಗೆ ತಟ್ಟದೆ ಬಿಡೋದಿಲ್ಲ.

click me!