
ಉಡುಪಿ(ಡಿ.20): ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ನಿರ್ವಹಣೆ ಮಾಡುತ್ತಿರುವ ರೆಸಾರ್ಟ್ನಲ್ಲಿ ಯಾವುದೇ ಅಧಿಕೃತ ದಾಖಲೆಗಳಿಲ್ಲದ ನೇಪಾಳಿ ಮೂಲದ ವಿದೇಶಿಯರಿಗೆ ಆಶ್ರಯ ನೀಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.
ರೆಸಾರ್ಟ್ನಲ್ಲಿ ನೆಲೆಸಿದ್ದ ನೇಪಾಳಿ ಮೂಲದ ಗರ್ಭಿಣಿ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಚಿಕಿತ್ಸೆ ನೀಡಲು ಮುಂದಾದ ವೈದ್ಯರು ಗುರುತಿನ ಚೀಟಿ ಹಾಗೂ ಅಗತ್ಯ ದಾಖಲಾತಿಗಳನ್ನು ಕೇಳಿದ್ದಾರೆ. ಆದರೆ, ಮಹಿಳೆ ಹಾಗೂ ಆಕೆಯ ಜೊತೆಗಿದ್ದವರು ಯಾವುದೇ ಕಾನೂನುಬದ್ಧ ದಾಖಲೆಗಳನ್ನು ಹೊಂದಿರಲಿಲ್ಲ. ಇದರಿಂದ ಸಂಶಯಗೊಂಡ ವೈದ್ಯರು ಕೂಡಲೇ ಬ್ರಹ್ಮಾವರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ವೈದ್ಯರ ಮಾಹಿತಿಯ ಮೇರೆಗೆ ಆಸ್ಪತ್ರೆಗೆ ಧಾವಿಸಿದ ಬ್ರಹ್ಮಾವರ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ದೀಪಕ್ ದಮಾಯಿ, ಸುನಿತಾ ದಮಾಯಿ, ಊರ್ಮಿಳಾ, ಕೈಲಾಶ್ ದಮಾಯಿ, ಕಪಿಲ್ ದಮಾಯಿ ಸೇರಿದಂತೆ ಒಟ್ಟು ಒಂಬತ್ತು ಮಂದಿ ನೇಪಾಳಿ ಮೂಲದವರು ಪತ್ತೆಯಾಗಿದ್ದಾರೆ. ಇವರಲ್ಲಿ ಮೂವರು ಸಣ್ಣ ಮಕ್ಕಳೂ ಸೇರಿದ್ದು, ಇವರೆಲ್ಲರೂ ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಹೆಗ್ಡೆ ನಿರ್ವಹಣೆಯ ರೆಸಾರ್ಟ್ನಲ್ಲಿ ವಾಸವಿದ್ದರು ಎಂಬುದು ತಿಳಿದುಬಂದಿದೆ.
ದಾಖಲೆಗಳಿಲ್ಲದ ಆಶ್ರಯ ನೀಡಿದ್ದು ಹೇಗೆ? ತನಿಖೆ
ವಿದೇಶಿ ಪ್ರಜೆಗಳು ಭಾರತಕ್ಕೆ ಬಂದಾಗ ಅಥವಾ ಇಲ್ಲಿ ನೆಲೆಸುವಾಗ ಪಾಲಿಸಬೇಕಾದ ಯಾವುದೇ ನಿಯಮಗಳನ್ನು ಪಾಲಿಸದೆ, ದಾಖಲೆಗಳಿಲ್ಲದವರಿಗೆ ಆಶ್ರಯ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಜಕೀಯ ಮುಖಂಡನಿಗೆ ಸೇರಿದ ರೆಸಾರ್ಟ್ನಲ್ಲಿ ಈ ರೀತಿ ಅಕ್ರಮ ವಲಸಿಗರಿಗೆ ಆಶ್ರಯ ನೀಡಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಸದ್ಯ ಪೊಲೀಸರು ವಶಕ್ಕೆ ಪಡೆದಿರುವ ವಿದೇಶಿಯರ ಹಿನ್ನೆಲೆ ಮತ್ತು ರೆಸಾರ್ಟ್ ಮಾಲೀಕರ ಜವಾಬ್ದಾರಿಯ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ