ಹೆಚ್ಚು ವೇತನದ ಆಸೆ ತೋರಿಸಿ ವಿಜಯಪುರದ ಇಬ್ಬರ ಯುವಕರಿಗೆ ಕುವೈತ್‌ನಲ್ಲಿ ಒಂಟೆ ಕಾಯೋ ಕೆಲ್ಸ!

By Kannadaprabha NewsFirst Published Sep 7, 2023, 6:37 AM IST
Highlights

ಏಜೆಂಟರು ನೀಡಿದ ಅಧಿಕ ಸಂಬಳದ ಉದ್ಯೋಗದ ಭರ​ವಸೆ ನಂಬಿ ಕುವೈ​ತ್‌ಗೆ ಹೋಗಿದ್ದ ವಿಜಯಪುರ ಜಿಲ್ಲೆಯ ಇಬ್ಬರು ಯುವಕರನ್ನು ಅಲ್ಲಿ ಕೆಲಸಕ್ಕಿಟ್ಟುಕೊಂಡಿದ್ದ ಮಾಲೀಕರು ಒಂಟೆ ಕಾಯುವ ಕೆಲಸ ನೀಡಿ ಸರಿಯಾಗಿ ವೇತನ ಹಾಗೂ ಹೊಟ್ಟೆತುಂಬ ಊಟವೂ ನೀಡದೆ ಹಿಂಸಿಸಿದ ಪರಿಣಾಮ ನರಕ ಯಾತನೆ ಅನುಭವಿಸಿದ ಘಟ​ನೆ ನಡೆ​ದಿ​ದೆ.

ವಿಜಯಪುರ (ಸೆ.7) :  ಏಜೆಂಟರು ನೀಡಿದ ಅಧಿಕ ಸಂಬಳದ ಉದ್ಯೋಗದ ಭರ​ವಸೆ ನಂಬಿ ಕುವೈ​ತ್‌ಗೆ ಹೋಗಿದ್ದ ವಿಜಯಪುರ ಜಿಲ್ಲೆಯ ಇಬ್ಬರು ಯುವಕರನ್ನು ಅಲ್ಲಿ ಕೆಲಸಕ್ಕಿಟ್ಟುಕೊಂಡಿದ್ದ ಮಾಲೀಕರು ಒಂಟೆ ಕಾಯುವ ಕೆಲಸ ನೀಡಿ ಸರಿಯಾಗಿ ವೇತನ ಹಾಗೂ ಹೊಟ್ಟೆತುಂಬ ಊಟವೂ ನೀಡದೆ ಹಿಂಸಿಸಿದ ಪರಿಣಾಮ ನರಕ ಯಾತನೆ ಅನುಭವಿಸಿದ ಘಟ​ನೆ ನಡೆ​ದಿ​ದೆ.

ಈ ಕುರಿತು ಜಿಪಂ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ಉಮೇಶ ಕೊಳಕೂರ ಬುಧ​ವಾರ ಪತ್ರಿ​ಕಾ​ಗೋ​ಷ್ಠಿ​ಯಲ್ಲಿ ಮಾಹಿತಿ ನೀಡಿ, ಕುವೈತ್‌ನಲ್ಲಿ ಬಬಲೇಶ್ವರ ತಾಲೂಕಿನ ಅಡವಿಸಂಗಾಪುರ ಗ್ರಾಮದ ಯುವಕರಾದ ಸಚಿನ್‌ ಜಂಗಮಶೆಟ್ಟಿ, ವಿಶಾಲ ಸೇಲರ ನರಕಯಾತನೆ ಅನುಭವಿಸಿದ್ದಾರೆ. ಸಂಸದ ರಮೇಶ ಜಿಗಜಿಣಗಿ ಹಾಗೂ ಭಾರತೀಯ ರಾಯಭಾರ ಕಚೇರಿ ನೆರವಿನಿಂದ ಈ ಇಬ್ಬರು ಯುವಕರು ತಾಯ್ನಾಡಿಗೆ ಮರಳಿದ್ದಾರೆಂದರು.

Bengaluru crime: ಹಣ ಡಬಲ್‌ ಆಸೆ ತೋರಿಸಿ ಅರ್ಚಕನಿಗೆ ₹1.7 ಕೋಟಿ ಟೋಪಿ

ಈ ಯುವ​ಕರು ತಮ್ಮ ಗ್ರಾಮದ ಅಮೋಘಿ ಎಂಬ ವ್ಯಕ್ತಿ ಮೂಲಕ ಬಾಂಬೆ ಏಜೆಂಟ್‌ ಇಷ್ಕಾರ್‌ನನ್ನು ಸಂಪರ್ಕಿಸಿದ್ದಾರೆ. ಆತ ಕುವೈತ್‌ನಲ್ಲಿ ತರಕಾರಿ ಪ್ಯಾಕಿಂಗ್‌ ಕೆಲಸ ಹಾಗೂ .32 ಸಾವಿರ ಸಂಬಳ (120 ದಿನಾರ್‌) ಕೊಡಿಸುವುದಾಗಿ ಹೇಳಿ ಇಬ್ಬರಿಂದ ತಲಾ .1 ಲಕ್ಷ ಪಡೆದುಕೊಂಡಿದ್ದಾನೆ. ಕುವೈತ್‌ಗೆ ಹೋದ ಬಳಿಕ ಮಾಲೀಕ ಇವರಿಬ್ಬರ ಪಾಸ್‌ಪೋರ್ಚ್‌, ಮೊಬೈ​ಲ್‌ ಕಸಿದುಕೊಂಡು ಒಂಟೆ ಕಾಯುವ ಕೆಲಸ ಹಚ್ಚಿದ್ದಾನೆ. ಸುಮಾರು 6 ತಿಂಗಳು ಸರಿಯಾಗಿ ಊಟ ನೀಡದೆ, ಸಂಬಳ ಸಹ ಕೊಡದೆ ಹಿಂಸಿಸಿದ್ದಾನೆ. ನೊಂದ ಯುವಕರು ರಾತ್ರಿ ಕುಟುಂಬ ಸದಸ್ಯರಿಗೆ ಹೇಗೋ ಕರೆ ಮಾಡಿ ನೋವು ಹೇಳಿಕೊಂಡಿದ್ದಾರೆ.

Bengaluru crime: ಕಡಿಮೆ ಬಡ್ಡಿ ಆಸೆ ತೋರಿಸಿ ಖೋಟಾ ನೋಟು ಚಲಾವಣೆ

ನಂತರ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಟ್ಯಾಕ್ಸಿಯಲ್ಲಿ ಭಾರತೀಯ ರಾಯಭಾರ ಕಚೇರಿ ತಲುಪಿ ತಮ್ಮ ಸಂಕಷ್ಟಹೇಳಿಕೊಂಡಿದ್ದಾರೆ. ಸುಮಾರು ಒಂದು ವಾರ ಅಲ್ಲೇ ಆಶ್ರಯ ಪಡೆದಿದ್ದಾರೆ. ವಂಚನೆ ಕುರಿತು ರಾಯಭಾರ ಕಚೇರಿಯಲ್ಲಿ ದೂರು ಸಲ್ಲಿಸಲಾಗಿದೆ. ತಾವು ಕೆಲಸ ಮಾಡಿದ ಸ್ಥಳದಲ್ಲಿ ಸುಮಾರು 70ಕ್ಕೂ ಅಧಿಕ ಭಾರತೀಯರು ಸಂಕಷ್ಟದಲ್ಲಿದ್ದಾರೆ ಎಂದು ಯುವಕರು ತಿಳಿಸಿದ್ದಾರೆ ಎಂದು ಕೊಳ​ಕೂರ ಹೇಳಿ​ದ​ರು.

click me!