
ಮದ್ದೂರು (ಆ.11): ತಾಲೂಕಿನ ಕೋಣಸಾಲೆ ವ್ಯಾಪ್ತಿಯ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಎರಡು ಕುಟುಂಬಗಳನ್ನು ಮಾಲೀಕರು ಜೀತಕ್ಕೆ ಇರಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಗ್ರಾಮದಲ್ಲಿ ಎರಡು ಕುಟುಂಬಗಳನ್ನು ಜಾನುವಾರಗಳ ಸಾಕಾಣಿಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಮಂಡ್ಯ ಉಪ ವಿಭಾಗಾಧಿಕಾರಿ ಶಿವಮೂರ್ತಿ ಹಾಗೂ ತಹಸೀಲ್ದಾರ್ ಸೋಮಶೇಖರ್ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ ಜೀತದಾಳುಗಳಾಗಿ ದುಡಿಯುತಿದ್ದ ಬಿಜಾಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕು ಗೊಲ್ಲರ ಉಕ್ಕಲಿ ಗ್ರಾಮದ ರಮೇಶ್ ಪುತ್ರ ಯಲ್ಲಪ್ಪ 27, ಆತನ ಹೆಂಡತಿ ಶ್ವೇತ(27) ಹಾಗೂ ವೆಂಕಟೇಶ್ ಬಿನ್ ಕುಮಾರ್ (24) ಕೋಣಸಾಲೆ, ಹೆಂಡತಿ ಗೀತಾ ದಂಪತಿಗಳ ಮಕ್ಕಳನ್ನು ಅಧಿಕಾರಿಗಳ ತಂಡ ರಕ್ಷಣೆ ಮಾಡಿ ಮಂಡ್ಯ ತಾಲೂಕು ಯತ್ತಗದಹಳ್ಳಿ ಜ್ಞಾನಸಿಂಧು ವೃದ್ಧಾಶ್ರಮಕ್ಕೆ ಕಳುಹಿಸಿದೆ.
ಪಿಆರ್ಇಡಿ ಕಚೇರಿಯಲ್ಲಿ 3.51 ಕೋಟಿ ರು.ದುರ್ಬಳಕೆ ಪ್ರಕರಣ, ಅಧಿಕಾರಿಗಳ ಅಸಹಕಾರ,ಆರೋಪಿಗಳು ನಿರಾಳ!
2 ಕುಟುಂಬಗಳನ್ನು ಕಳೆದ 5 ವರ್ಷಗಳಿಂದ ಬಲವಂತವಾಗಿ ಜೀತಕ್ಕಿರಿಸಿಕೊಂಡು ಹೊರಗಿನ ಸಂಪರ್ಕಕ್ಕೆ ಬಿಡದೇ ಬಿಡದಿರುವ ಬಗ್ಗೆ ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ (ಫೆವಾರ್ಡ್ ಮಂಡ್ಯ)ಕ್ಕೆ ಜೀತ ವಿಮುಕ್ತಿ ಸದಸ್ಯರಿಂದ ಮಾಹಿತಿ ತಿಳಿದು ಬಂದಿದೆ.
ಈ ಬಗ್ಗೆ ದೂರು ನೀಡಿದ ಪರಿಣಾಮ ಜಿಲ್ಲಾಧಿಕಾರಿಗಳು, ಉಪವಿಭಾಗಧಿಕಾರಿಗಳಿಗೆ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಮೇರೆಗೆ ಆ.6 ರಂದು ಸಂಜೆ 6.50 ಗಂಟೆಗೆ ಎಸಿ ಶಿವಮೂರ್ತಿ, ತಹಸೀಲ್ದಾರ್ ಕೆ.ಎಸ್.ಸೋಮಶೇಖರ್, ವಿ ಹೆಲ್ಸ್ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ರಾಣಿಚಂದ್ರಶೇಖರ್, ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರಗುರು, ಹಾಗೂ ಹೊಭಾಳೆ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಸವರಾಜು ಕೋಣಸಾಲೆ ಗ್ರಾಮಕ್ಕೆ ತೆರಳಿ ಪರಿಶೀಲನೆ ಮಾಡಿದೆ.
ತುಮಕೂರಿನಲ್ಲಿ ವಿಜಯನಗರ ಕಾಲದ ತಾಮ್ರ ಶಾಸನ ಪತ್ತೆ!
ಕೋಣಸಾಲೆ ಗ್ರಾಮದ ನಾಗರಾಜು ಪುತ್ರ ಮುರಳಿ (40) ಹಂದಿ ಸಾಕಾಣಿಕಾ ಕೇಂದ್ರ ನಡೆಸುತ್ತಿದ್ದರು. ಈ ಎರಡು ಕುಟುಂಬಗಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು. ಬಿಜಾಪುರ ಜಿಲ್ಲೆಯ ರಮೇಶ ಬಿನ್ ಯಲ್ಲಪ್ಪ (27), ಹೆಂಡತಿ ಶ್ವೇತ (25) , ಇಬ್ಬರು 12 ವರ್ಷ ಮತ್ತು 8 ವರ್ಷದ ಹೆಣ್ಣು ಮಕ್ಕಳಿದ್ದು ಶಾಲೆಗೆ ಹೋಗುತ್ತಿದ್ದು ಇವರನ್ನು ವಿಚಾರಿಸಿದಾಗ ತಮ್ಮಿಂದ ಯಾವುದೇ ಬಲವಂತದ ಕೆಲಸ ಮಾಡಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
ಆದರೆ, ಮತ್ತೊಂದು ಕುಟುಂಬ ವೆಂಕಟೇಶ್ ಬಿನ್ ಕುಮಾರ್ (24) ಕೋಣಸಾಲೆ, ಹೆಂಡತಿ ಗೀತಾ ಇವರಿಗೆ 4 ಮತ್ತು 3 ವರ್ಷದ ಇಬ್ಬರು ಮಕ್ಕಳಿದ್ದು, ಇವರನ್ನು ವಿಚಾರಿಸಿದಾಗ ಮಾಲೀಕ ಮುರಳಿ ತಮ್ಮನ್ನು 7 ವರ್ಷಗಳಿಂದ ಕೆಲಸಕ್ಕೆ ಇಟ್ಟುಕೊಂಡಿದ್ದು, ಪ್ರತೀ ತಿಂಗಳಿಗೆ ಇಬ್ಬರಿಗೂ ಸೇರಿ 15 ಸಾವಿರ ಸಂಬಳವನ್ನು ಕೊಡುತ್ತಿದ್ದಾರೆ. ದಿನಕ್ಕೆ ತಲಾ 250 ರು. ಕೂಲಿ ನಿಗದಿ ಮಾಡಿದ್ದ ಮಾಲೀಕ, ಕೇವಲ 5 ಸಾವಿರ ಮಾತ್ರ ಕೊಡುತ್ತಿದ್ದರು. ದಂಪತಿಗಳನ್ನು ಒತ್ತಾಯ ಪೂರ್ವಕವಾಗಿ ದುಡಿಸಿಕೊಳ್ಳುತ್ತಿದ್ದರು. ಜೊತೆಗೆ ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಈಗ ಕುಟುಂಬವನ್ನು ಜೀತಮುಕ್ತಿಗೊಳಿಸಿರುವ ಜಿಲ್ಲಾಡಳಿತ ಯತ್ತಗದಹಳ್ಳಿ ಜ್ಞಾನಸಿಂಧು ವೃದ್ಧಾಶ್ರಮದಲ್ಲಿ ಪುನರ್ವಸತಿ ಕಲ್ಪಿಸಿದೆ.
ಸಾಲವಾಗಿ 1 ಲಕ್ಷ ರು ಕೊಟ್ಟಿದ್ದು ಅದು ಬಡ್ಡಿ ಸೇರಿ 2.35 ಲಕ್ಷ ರು. ಆಗಿದೆ. ತಮಗೆ ಹೊರಗೆ ಹೋಗಲು ಬಿಡದೇ ಬಲವಂತದಿಂದ ಕೆಲಸ ಮಾಡಿಸುತ್ತಿದ್ದಾರೆ. ವಾರಕ್ಕೆ ಒಂದು ಸಾರಿ ಮಾತ್ರ ದವಸ ಧಾನ್ಯಗಳನ್ನು ತರಲು ಗಂಡನನ್ನು ಮಾತ್ರ ಹೊರಗೆ ಬಿಡುತ್ತಿದ್ದಾರೆ. ಕೆಲಸ ಮಾಡದಿದ್ದರೆ ಹೊಡೆಯುವುದು ಮತ್ತು ಬೈಯ್ಯುವುದು ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ನಂತರ ಎಲ್ಲರ ಹೇಳಿಕೆ ಪಡೆದು ಸ್ಥಳ ಮಹಜರ್ ನಡೆಸಿದ ಮೇರೆಗೆ ಸದರಿ ವ್ಯಕ್ತಿಗಳು ಜೀತದಾಳುಗಳಾಗಿ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ಮಾಲೀಕರಾದ ಮುರಳಿ, ಕಾರ್ಮಿಕರಾದ ವೆಂಕಟೇಶ ಮತ್ತು ಗೀತಾ ರವರು ಪ.ಜಾತಿಗೆ ಸೇರಿದ್ದಾರೆ. ಆದರೂ ಜೀತ ಪದ್ಧತಿಯಂತೆ ಕೆಲಸ ಮಾಡಿಸುತ್ತಿದ್ದಾರೆ. ಆದ್ದರಿಂದ ಮಾಲೀಕ ಮುರಳಿ ಬಿನ್ ನಾಗರಾಜು ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.
ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಶೋಧ ಕಾರ್ಯ:
ಕೋಣಸಾಲೆ ಗ್ರಾಮದಲ್ಲಿ ಎರಡು ಕುಟುಂಬಗಳನ್ನು ಹಂದಿ ಸಾಕಾಣಿಕೆಗಾಗಿ ಜೀತಕ್ಕೆ ಇರಿಸಿಕೊಂಡಿದ್ದ ಪ್ರಕರಣ ಸಂಬಂಧ ಗ್ರಾಮದ ಮುರಳಿ ವಿರುದ್ಧ ಬೆಸಗರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗೆ ಶೋಧಕಾರ್ಯ ಕೈಗೊಂಡಿದ್ದಾರೆ.
ಪ್ರಕರಣದ ಆರೋಪಿ ಮುರಳಿ ವಿರುದ್ಧ ಬಿ.ಎನ್. ಎಸ್ ಹೊಸ ಕಾಯ್ದೆ ಅನ್ವಯ 143. 146 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಹಾಗೂ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಕಾರ್ಯ ಕೈಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ