ಬೆಂಗ್ಳೂರಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: 82 ಕೆಜಿ ಮಾದಕ ವಸ್ತು ಜಪ್ತಿ, ಇಬ್ಬರ ಬಂಧನ

By Girish GoudarFirst Published Apr 26, 2022, 5:04 AM IST
Highlights

*   ಗಾಂಜಾ ಮಾರಾಟಕ್ಕೆ ಯತ್ನ
*   ಕರಗ ನೋಡಿ ಹೋಗುವವರ ದರೋಡೆಗೆ ಹೊಂಚು
*  ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಆರೋಪಿಗಳು

ಬೆಂಗಳೂರು(ಏ.26):  ಗಾಂಜಾ(Marijuana) ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಡ್ರಗ್ಸ್‌ ಪೆಡ್ಲರ್‌ಗಳನ್ನು ಚಂದ್ರಾ ಲೇಔಟ್‌ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಬಂಧಿತ ಶಿವಾಜಿ ನಗರ ನಂದಿದುರ್ಗ ರಸ್ತೆಯ ನಿವಾಸಿ ಈನೇಶ್ವರ(25) ಮತ್ತು ಕೊಡಿಗೇಹಳ್ಳಿಯ ನದೀಮ್‌ ಪಾಷಾ(29)ನಿಂದ 82 ಕೆ.ಜಿ. ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಸರಕು ಸಾಗಣೆ ವಾಹನ ಜಪ್ತಿ ಮಾಡಲಾಗಿದೆ. ಏ.22ರಂದು ಇಬ್ಬರು ಅಪರಿಚಿತರು ನಾಯಂಡಹಳ್ಳಿ ರಿಂಗ್‌ ರಸ್ತೆಯ ಜಂಕ್ಷನ್‌ನಲ್ಲಿ ಸರಕು ಸಾಗಣೆ ವಾಹನದಲ್ಲಿ ಗಾಂಜಾ ತುಂಬಿಕೊಂಡು ರಾಮನಗರ ಕಡೆಗೆ ತೆರಳಲು ಪ್ರಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ(Arrest) ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru Drug Bust: ಕುರ್ಕುರೆ, ಚಕ್ಕುಲಿ ಪ್ಯಾಕೆಟಲ್ಲಿ ಡ್ರಗ್ಸ್‌ ತುಂಬಿಸಿ ಮಾರಾಟ..!

ಆರೋಪಿಗಳು(Accused) ವೃತ್ತಿಯಲ್ಲಿ ಸರಕು ಸಾಗಣೆ ವಾಹನ ಚಾಲಕರಾಗಿದ್ದು, ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಗಾಂಜಾ ಮಾರಾಟ ದಂಧೆಗೆ ಇಳಿದಿದ್ದರು. ಆಂಧ್ರಪ್ರದೇಶದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ, ಬೆಂಗಳೂರು ನಗರ ಸೇರಿದಂತೆ ರಾಜ್ಯದ(Karnataka) ವಿವಿಧ ಜಿಲ್ಲೆಗಳಲ್ಲಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಗಳು ಅಂದು ರಾಮನಗರದಲ್ಲಿ ಗಾಂಜಾ ಮಾರಾಟಕ್ಕೆ ತೆರಳುತ್ತಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಂದ್ರಾಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕರಗ ನೋಡಿ ಹೋಗುವವರ ದರೋಡೆಗೆ ಹೊಂಚು: 5 ಸೆರೆ

ಬೆಂಗಳೂರು: ಕರಗ ನೋಡಿಕೊಂಡು ಹೋಗುವವರನ್ನು ಅಡ್ಡಗಟ್ಟಿ ದರೋಡೆ(Robbery) ಮಾಡಲು ಹೊಂಚು ಹಾಕಿ ಕುಳಿತಿದ್ದ ಕುಖ್ಯಾತ ರೌಡಿ ಕಿಟ್ಟಿಅಲಿಯಾಸ್‌ ಕೇಬಲ್‌ ಕಿಟ್ಟಿಯ ಐವರ ಸಹಚರರನ್ನು ಕೇಂದ್ರ ಅಪರಾಧ ವಿಭಾಗ (CCB) ಪೊಲೀಸರು ಬಂಧಿಸಿದ್ದಾರೆ.

Marijuana Racket: ಗಾಂಜಾ ಚಾಕ್ಲೆಟ್‌ ಮಾರುತ್ತಿದ್ದ ಒಡಿಶಾ ಮೂಲದ ಇಬ್ಬರು ಅರೆಸ್ಟ್‌

ಕೆಂಗೇರಿಯ ಸ್ವಾಮಿ, ನರಸಿಂಹಮೂರ್ತಿ, ದಾಬಾಸ್‌ಪೇಟೆಯ ನವೀನ್‌ ಕುಮಾರ್‌, ರಾಘವೇಂದ್ರ ಹಾಗೂ ದಿನೇಶ ಬಂಧಿತರು. ಆರೋಪಿಗಳು ಏ.24ರಂದು ಕೆಂಗೇರಿ ರೈಲ್ವೆ ಅಂಡರ್‌ ಪಾಸ್‌ನ ಹರ್ಷ ಲೇಔಟ್‌ನಲ್ಲಿ ಮಾರಕಾಸ್ತ್ರ ಹಿಡಿದು ದರೋಡೆಗೆ ಹೊಂಚು ಹಾಕಿ ಕುಳಿತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ. ಇವರಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಕುಖ್ಯಾತ ರೌಡಿ ಕೇಬಲ್‌ ಕಿಟ್ಟಿಯ ಸಹಚರರಾಗಿದ್ದು, ಈ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕೆಲ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳು ಜಾಮೀನು ಪಡೆದು ಹೊರಬಂದು ಅಪರಾಧ ಕತ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಕೆಂಗೇರಿ ಕರಗ ನೋಡಿಕೊಂಡು ಒಬ್ಬಂಟಿಯಾಗಿ ಅಂಡರ್‌ ಪಾಸ್‌ನಲ್ಲಿ ಹೋಗುವವರನ್ನು ಅಡ್ಡಗಟ್ಟಿದರೋಡೆ ಮಾಡಲು ಹೊಂಚು ಹಾಕಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!