ರಾಯಚೂರಿನ ಹೋಟೆಲ್ನಲ್ಲಿ ಚಿಕನ್ ಬಿರಿಯಾನಿ ತಿಂದ ಇಬ್ಬರು, ಮಾಲೀಕನಿಗೆ ಮಕ್ಕಳಾಡುವ ನಕಲಿ 500 ರೂಪಾಯಿ ನೋಟು ನೀಡಿ ವಂಚಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ರಾಯಚೂರು (ಮಾ.21): ಹೋಟೆಲ್ವೊಂದರಲ್ಲಿ ಚಿಕನ್ ಬಿರಿಯಾನಿ ತಿಂದ ಇಬ್ಬರು ವ್ಯಕ್ತಿಗಳು ಮಾಲೀಕನಿಗೆ ಮಕ್ಕಳಾಡುವ (ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ) ₹500ರ ನಕಲಿ ನೋಟ್ ಕೊಟ್ಟು ಬಿಲ್ ಪಾವತಿಸಿ ವಂಚಿಸಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ ಹಾಗೂ ರಮೇಶ್ ಬಂಧಿತ ಆರೋಪಿಗಳು. ಇಬ್ಬರು ಆರೋಪಿಗಳು ನಗರದ ಬಿರಿಯಾನಿ ಹೋಟೆಲ್ನಲ್ಲಿ ಚಿಕನ್ ಬಿರಿಯಾನಿ ತಿಂದು ‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದಿಸಿದ್ದ ₹500ರ ನಕಲಿ ನೋಟನ್ನು ನೀಡಿ ಬಿಲ್ ಪಾವತಿಸಿದ್ದಾರೆ. ಇದಾದ ಸ್ವಲ್ಪ ಹೊತ್ತಿನ ಬಳಿಕ ಹೋಟೆಲ್ ಮಾಲೀಕನಿಗೆ ಅನುಮಾನ ಬಂದು ನೋಟನ್ನು ಪರಿಶೀಲನೆ ನಡೆಸಿದಾಗ ನೋಟು ನಕಲಿಯದ್ದು ಎಂಬುದು ಬಯಲಾಗಿದೆ. ಈ ಸಂಬಂಧ ಹೋಟೆಲ್ ಮಾಲೀಕ ನೀಡಿದ ದೂರಿನ ಮೇರೆಗೆ ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಕಲಿ ನೋಟು ಕೊಟ್ಟು ಬಿರಿಯಾನಿ ತಿಂದಿದ್ದ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: Karnataka Heatwave news: ರಾಯಚೂರಿನಲ್ಲಿ ಮತ್ತೆ ದಾಖಲೆಯ ತಾಪಮಾನ, ರಾಜ್ಯದಲ್ಲೇ ಅತಿ ಹೆಚ್ಚು!
ಇತ್ತೀಚೆಗೆ ರಾಯಚೂರು ಜಿಲ್ಲೆಯಲ್ಲಿ ಖೋಟಾ ನೋಟು ಜಾಲ ಪತ್ತೆಯಾದ ಬೆನ್ನಲ್ಲೇ ಮತ್ತೊಂದು ನಕಲಿ ನೋಟಿನ ಪ್ರಕರಣ ಜರುಗಿರುವುದು ವ್ಯಾಪಾರಸ್ಥರು, ಜನರಲ್ಲಿ ಆತಂಕ ಮೂಡಿಸಿದೆ.