ಗರ್ಲ್‌ಫ್ರೆಂಡ್‌ ಜತೆ ಮಾತನಾಡಿದ್ದಕ್ಕೆ ಹೀಗ್‌ ಮಾಡೋದಾ..!

By Kannadaprabha NewsFirst Published Mar 24, 2021, 7:52 AM IST
Highlights

3 ಲಕ್ಷ ಮೌಲ್ಯದ 103 ಗ್ರಾಂ ಚಿನ್ನ ಜಪ್ತಿ| ಮೂವರ ಬಂಧನ| ಸ್ನೇಹಿತೆ ಮನೆಗೆ ಯುವಕ ಬಂದು ಹೋಗುತ್ತಿರುವುದರಿಂದ ಸಿಟ್ಟಿಗೆದ್ದು ಸೈಫನ್‌ನನ್ನು ಸಹಚರರ ಜತೆ ಬೆದರಿಸಿ ಚಿನ್ನ ಸುಲಿಗೆ ಮಾಡಿದ್ದ ಅರೋಪಿ| 

ಬೆಂಗಳೂರು(ಮಾ.24): ತನ್ನ ಸ್ನೇಹಿತೆ ಜತೆ ಮಾತನಾಡಿದ್ದಕ್ಕೆ ಕೋಪಗೊಂಡು ಚಿನ್ನದ ಮಳಿಗೆ ಕೆಲಸಗಾರನೊಬ್ಬನನ್ನು ಬೆದರಿಸಿ ಸುಲಿಗೆ ಮಾಡಿದ್ದ ಮೂವರು ಕಿಡಿಗೇಡಿಗಳು ಚಂದ್ರಾಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕೆ.ಜಿ.ಹಳ್ಳಿಯ ಪಿಳ್ಳಣ್ಣ ಗಾರ್ಡನ್‌ನ ಬಟ್ಟೆ ವ್ಯಾಪಾರಿ ಜಾಕೀರ್‌ ಹುಸೇನ್‌, ವೆಂಕಟೇಶಪುರದ ಕೋಳಿ ಅಂಗಡಿ ನೌಕರ ಶಾಬಾಜ್‌ ಖಾನ್‌ ಹಾಗೂ ವೆಲ್ಡಿಂಗ್‌ ಶಾಪ್‌ ನೌಕರ ಫಾಜಿಲ್‌ ಬಂಧಿತರಾಗಿದ್ದು, ಆರೋಪಿಗಳಿಂದ 3 ಲಕ್ಷ ಮೌಲ್ಯದ 103.3 ಗ್ರಾಂ ಚಿನ್ನವನ್ನು ಜಪ್ತಿ ಮಾಡಲಾಗಿದೆ.

ಬಟ್ಟೆ ವ್ಯಾಪಾರಿಯಿಂದ 37 ಲಕ್ಷ ರು. ಸುಲಿಗೆ ಮಾಡಿದ್ದವನ ಬಂಧನ

ನರ್ಗತಪೇಟೆ ಹತ್ತಿರದ ಚಿನ್ನದ ಮಳಿಗೆಯಲ್ಲಿ ಪಶ್ಚಿಮ ಬಂಗಾಲದ ಸೈಫನ್‌ ಎಂಬಾತ ಕೆಲಸ ಮಾಡುತ್ತಿದ್ದ. ತಮ್ಮ ರಾಜ್ಯದ ಯುವತಿಯರಿಬ್ಬರ ಜತೆ ಆತನಿಗೆ ಸ್ನೇಹವಿತ್ತು. ಚಂದ್ರಾಲೇಔಟ್‌ ಸಮೀಪದ ಭೈರವೇಶ್ವರ ನಗರದಲ್ಲಿ ಆ ಗೆಳೆತಿಯರು ನೆಲೆಸಿದ್ದರು. ಆದರೆ ಈ ಯುವತಿಯರ ಪೈಕಿ ಒಬ್ಬಾಕೆ ಜತೆ ಆರೋಪಿ ಜಾಕೀರ್‌ಗೆ ಗೆಳೆತನ ಬೆಳೆದಿತ್ತು. ತನ್ನ ಸ್ನೇಹಿತೆ ಮನೆಗೆ ಸೈಫನ್‌ ಬಂದು ಹೋಗುತ್ತಿರುವುದರಿಂದ ಸಿಟ್ಟಿಗೆದ್ದು ಸೈಫನ್‌ನನ್ನು ಸಹಚರರ ಜತೆ ಬೆದರಿಸಿ ಚಿನ್ನ ಸುಲಿಗೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ರಾಜ್ಯ ಪಶ್ಚಿಮ ಬಂಗಾಳಕ್ಕೆ ಮತ ಹಾಕಲು ಸೈಫನ್‌ ಹಾಗೂ ಆತನ ಗೆಳೆಯತಿಯರು ತೆರಳಲು ನಿರ್ಧರಿಸಿದ್ದರು. ಮಾ.13ರಂದು ಗ್ರಾಹಕರಿಗೆ ಮಳಿಗೆಯಲ್ಲಿದ್ದ ಆಭರಣವನ್ನು ತೋರಿಸಲು ಹೊರಟಿದ್ದ ಸೈಫನ್‌, ಮಾರ್ಗ ಮಧ್ಯೆಯೇ ಸ್ನೇಹಿತೆಯರ ಮನೆಗೆ ಹೋಗಿದ್ದ. ಆಗ ಮನೆಗೆ ಬಂದಿದ್ದ ಜಾಕೀರ್‌, ಸೈಫನ್‌ ಜತೆ ಜಗಳ ಮಾಡಿ ತನ್ನ ಗೆಳತಿ ಜತೆ ಯಾಕೆ ಮಾತನಾಡುತ್ತೀಯಾ ಎಂದು ಪ್ರಶ್ನಿಸಿ ಗಲಾಟೆ ಮಾಡಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಸೈಫನ್‌ ಬಳಿಯಿದ್ದ ಆಭರಣಗಳನ್ನು ಆರೋಪಿಗಳು ದೋಚಿಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

click me!