ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ದರೋಡೆಗೆ ಯತ್ನ

By Kannadaprabha NewsFirst Published Aug 29, 2020, 7:57 AM IST
Highlights

ಎಲೆಕ್ಟ್ರಾನಿಕ್‌ಸಿಟಿ ಪೊಲೀಸ್‌ ಠಾಣಾ ವ್ಯಾಪ್ತಿ ಘಟನೆ| ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಾಲೀಕನ ಮೇಲೆ ಹಲ್ಲೆ ನಡೆಸಿ, ದರೋಡೆಗೆ ಯತ್ನ| ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ವಶಕ್ಕೆ ಪಡೆದು ಪರಿಶೀಲನೆ| 

ಬೆಂಗಳೂರು(ಆ.29): ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು ಸಿನಿಮೀಯ ಶೈಲಿಯಲ್ಲಿ ಮಾಲೀಕನ ಮೇಲೆ ಹಲ್ಲೆ ನಡೆಸಿ, ದರೋಡೆಗೆ ಯತ್ನಿರುವ ಘಟನೆ ಎಲೆಕ್ಟ್ರಾನಿಕ್‌ಸಿಟಿ ಪೊಲೀಸ್‌ ಠಾಣಾ ವ್ಯಾಪ್ತಿ ನಡೆದಿದೆ. ಮಲಸಂದ್ರದ ನಿವಾಸಿ ವೆಂಕಟೇಶ್‌ (27) ಹಲ್ಲೆಗೊಳಗಾದ ಮನೆ ಮಾಲೀಕ.

ಆ.20ರಂದು ರಾತ್ರಿ 8 ಗಂಟೆ ಸುಮಾರಿಗೆ ಬಾಡಿಗೆಗೆ ಮನೆ ಬೇಕೆಂದು ಮೂವರು ಅಪರಿಚಿತರು ವೆಂಕಟೇಶ್‌ರ ಮನೆಯ ಬಳಿ ಬಂದಿದ್ದು, ಈ ವೇಳೆ ಮನೆ ತೋರಿಸಲು ವೆಂಕಟೇಶ್‌ ಅವರನ್ನು ಒಳಗೆ ಕೂಗಿದ್ದಾರೆ. ಈ ವೇಳೆ ಏಕಾಏಕಿ ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು ಹಿಂಬದಿಯಿಂದ ವೆಂಕಟೇಶ್‌ರನ್ನು ಬಿಗಿಯಾಗಿ ಹಿಡಿದು ಮನಬಂದಂತೆ ಥಳಿಸಿದ್ದಾರೆ.

ಲಾಕ್‌ಡೌನ್‌ನಿಂದ ಸಂಕಷ್ಟ: ಮನೆ ಮಾಲೀಕಳನ್ನೇ ಹತ್ಯೆಗೈದು ದರೋಡೆ ಮಾಡಿದ್ದ ದಂಪತಿ!

ಈ ವೇಳೆ ಓರ್ವ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಚೀರಾಡದಂತೆ ಅವರ ಬಾಯಿಗೆ ಬಟ್ಟೆಕಟ್ಟಿ, ಬಾಗಿಲು ಹಾಕಿದ್ದಾರೆ. ಮನೆಯಲ್ಲಿರುವ ಹಣ ಮತ್ತು ಚಿನ್ನಾಭರಣ ಕೊಡು ಇಲ್ಲದಿದ್ದರೆ ಹತ್ಯೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಕೊನೆಗೆ ಧೈರ್ಯ ಮಾಡಿದ ವೆಂಕಟೇಶ್‌ ಆರೋಪಿಗಳಿಂದ ತಪ್ಪಿಸಿಕೊಂಡು ಬಾಗಿಲು ತೆಗೆದು ಹೊರಗೆ ಓಡಿ ಬಂದಿದ್ದಾರೆ. ಇದರಿಂದ ಹೆದರಿದ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ರಸ್ತೆಯಲ್ಲಿನ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್

"

click me!