ಬೆಂಗಳೂರು (ಜ.7) : ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಹಾಗೂ ಕೊಳವೆಬಾವಿ ಕೊರೆಯುವುದರಲ್ಲಿ ಅಕ್ರಮದ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಚುರುಕುಗೊಳಿಸಿದ್ದು, ಕೊಳವೆ ಬಾವಿ ಕೊರೆದಿರುವ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ.
ಕಳೆದ 2016-17 ಮತ್ತು 2017-18ನೇ ಸಾಲಿನಲ್ಲಿ 9,588 ಕೊಳವೆಬಾವಿ ಕೊರೆಯುವುದು ಮತ್ತು 976 ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ 969 ಕೋಟಿ ರು. ವೆಚ್ಚ ಮಾಡಲಾಗಿತ್ತು. ನಿಗದಿಯಷ್ಟುಕೊಳವೆಬಾವಿ ಕೊರೆಯದಿರುವುದು ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆಯಲ್ಲಿ ಅಕ್ರಮ ಆಗಿದೆ ಎಂದು ಆರೋಪಿಸಿ ಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಎಸಿಬಿಗೆ ದೂರು ನೀಡಿದ್ದರು. ನಂತರ ಆ ದೂರು ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಗೊಂಡಿತ್ತು. ಆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದೆ.
Bengaluru: ದಾಸರಹಳ್ಳಿ ವ್ಯಾಪ್ತಿ ಫ್ಲೆಕ್ಸ್, ಬ್ಯಾನರ್ ಹಾವಳಿ; ಹೆಚ್ಚುತ್ತಿವೆ ಅಪಘಾತ!
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಳವೆ ಬಾವಿ ಕೊರೆದಿರುವ ಸ್ಥಳ, ವೆಚ್ಚ ಸೇರಿ ಸಂಪೂರ್ಣ ವಿವರ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಸಂಬಂಧಿಸಿದ ವಿವರವನ್ನು ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಜಾರಿ ನಿರ್ದೇಶನಾಲಯ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ಸಂಗ್ರಹಿಸಿ ನೀಡುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಪ್ರಧಾನ ಎಂಜಿನಿಯರ್ ಪ್ರಹ್ಲಾದ್ಗೆ ಸೂಚಿಸಿದ್ದರು. ಅದರಂತೆ ಎಲ್ಲ ವಾರ್ಡ್ಗಳ ಎಂಜಿನಿಯರ್ಗಳಿಂದ ಮಾಹಿತಿ ಸಂಗ್ರಹಿಸಿ, ದಾಖಲೆ ಸಹಿತ ಜಾರಿ ನಿರ್ದೇಶನಾಲಯಕ್ಕೆ ಪ್ರಹ್ಲಾದ್ ಅವರು ವರದಿ ಸಲ್ಲಿಸಲಾಗಿತ್ತು. ಆ ಮಾಹಿತಿಯನ್ನಾಧರಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇದೀಗ ಸ್ಥಳ ಪರಿಶೀಲನೆ ಆರಂಭಿಸಿದ್ದಾರೆ.
ಆರ್ಆರ್ ನಗರದ ವ್ಯಾಪ್ತಿ ಪರಿಶೀಲನೆ
ರಾಜ ರಾಜೇಶ್ವ ನಗರ(Rajarajeshwarinagar) ವಲಯ ವ್ಯಾಪ್ತಿಯ ಹಲವು ಸ್ಥಳಗಳಿಗೆ ಭೇಟಿ ನೀಡಿ ಇಡಿ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಈ ವೇಳೆ ಅಕ್ರಮಕ್ಕೆ ಸಂಬಂಧಿಸಿದ ಹಲವು ವಿಷಯಗಳು ಪತ್ತೆಯಾಗಿದ್ದು, ಕೊಳವೆ ಬಾವಿ ಕೊರೆಯಲಾಗಿದೆ ಎಂದು ಹೇಳಲಾದ ಸ್ಥಳಗಳಲ್ಲಿ ಕೊಳವೆಬಾವಿ ಇಲ್ಲದಿರುವುದು ತಿಳಿದುಬಂದಿದೆ. ಅಲ್ಲದೆ, 700 ಅಡಿಗೂ ಹೆಚ್ಚಿನ ಆಳದ ಕೊಳವೆಬಾವಿ ಕೊರೆಯಲಾಗಿದೆ ಎಂದು ವರದಿಯಲ್ಲಿ ನೀಡಲಾಗಿದ್ದರೂ, ಸ್ಥಳ ಪರಿಶೀಲನೆ ನಡೆಸಿದಾಗಿ ಕೊಳವೆಬಾವಿಗಳ ಆಳ 150 ಅಡಿಯೂ ದಾಟದಿರುವುದನ್ನು ಪತ್ತೆ ಮಾಡಲಾಗಿದೆ.
900 ಕೋಟಿ ಅಕ್ರಮ: ಬಿಬಿಎಂಪಿ ಅಧಿಕಾರಿಗಳಿಗೆ ಇಡಿ ತನಿಖೆ ಬಿಸಿ
ಜಾರಿ ನಿರ್ದೇಶನಾಲಯ ತನ್ನ ತನಿಖೆಯನ್ನು ಚುರುಕುಗೊಳಿಸುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ಮತ್ತು ಮಾಜಿ ಸದಸ್ಯರಿಗೆ ನಡುಕ ಶುರುವಾಗಿದೆ. ಸ್ಥಳ ಪರಿಶೀಲನೆ ಆರಂಭಿಸಿದ ಒಂದೆರಡು ದಿನಗಳಲ್ಲಿಯೇ ಅಕ್ರಮ ದೃಢಪಡಿಸುವ ಕುರಿತ ವಿಷಯಗಳು ಪತ್ತೆಯಾಗಿವೆ. ಅದರ ಜತೆಗೆ ಜಾರಿ ನಿರ್ದೇಶನಾಲಯದಿಂದ ಕೆಲ ಅಧಿಕಾರಿಗಳನ್ನು ಪದೇಪದೆ ವಿಚಾರಣೆಗೊಳಪಡಿಸಲಾಗುತ್ತಿದೆ. ಅದರ ಜತೆಗೆ ಕೆಲ ಮಾಜಿ ಸದಸ್ಯರನ್ನೂ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.