Koppal News: ವಿದ್ಯಾರ್ಥಿನಿ ಹೆಸರು ಶಾಲಾ ಗೋಡೆಗೆ ಅಶ್ಲೀಲವಾಗಿ ಬರೆದು ವಿಕೃತಿ

By Kannadaprabha NewsFirst Published Dec 30, 2022, 3:13 PM IST
Highlights

ವಿದ್ಯಾರ್ಥಿನಿಯೊರ್ವಳ ಹೆಸರು ಬಳಸಿ ಶಾಲೆಯ ಗೋಡೆಯ ಮೇಲೆ ಅಶ್ಲೀಲವಾಗಿ ಬರೆದು ವಿಕೃತಿ ಮೆರೆದ ಘಟನೆ ಪಟ್ಟಣದ ಕೆಪಿಎಸ್‌ ಹಾಗೂ ಚನ್ನಶ್ರೀರುದ್ರ ಪಿಯು ಕಾಲೇಜಿನಲ್ಲಿ ನಡೆದಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕನಕಗಿರಿ (ಡಿ.30) : ವಿದ್ಯಾರ್ಥಿನಿಯೊರ್ವಳ ಹೆಸರು ಬಳಸಿ ಶಾಲೆಯ ಗೋಡೆಯ ಮೇಲೆ ಅಶ್ಲೀಲವಾಗಿ ಬರೆದು ವಿಕೃತಿ ಮೆರೆದ ಘಟನೆ ಪಟ್ಟಣದ ಕೆಪಿಎಸ್‌ ಹಾಗೂ ಚನ್ನಶ್ರೀರುದ್ರ ಪಿಯು ಕಾಲೇಜಿನಲ್ಲಿ ನಡೆದಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕಳೆದೆರಡು ತಿಂಗಳ ಹಿಂದೆ ಪಟ್ಟಣದ ಅದೇ ವಿದ್ಯಾರ್ಥಿನಿಯನ್ನು ಗುರಿಯಾಗಿಸಿಕೊಂಡು ಅಶ್ಲೀಲ ಬರಹ ಹಾಗೂ ಚಿತ್ರಗಳನ್ನು ಬಿಡಿಸಿ ವಿಕೃತಿ ಮೆರೆದ ಕಿಡಿಗೇಡಿಗಳು ಶಾಲೆಯ ಪೂರಕ ವಾತಾವರಣವನ್ನು ಹಾಳು ಮಾಡಿದ್ದರು. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಶಯಾಸ್ಪದ ಯುವಕರನ್ನು ಠಾಣೆಗೆ ಕರೆದು ವಿಚಾರಿಸಿರುವ ಪೊಲೀಸರು 2022ರ ಅ. 20ರಂದು ಎಫ್‌ಐಆರ್‌ ದಾಖಲಿಸಿದ್ದರು.

ವಿದ್ಯಾರ್ಥಿಗಳು ಬರುವ ಮೊದಲೇ ಕುಡಿದು ಮಲಗಿದ್ದ ಸರ್ಕಾರಿ ಶಾಲಾ ಶಿಕ್ಷಕ ಅಮಾನತ್ತು

ಡಿ. 28ರ ರಾತ್ರಿ ಸಮಯದಲ್ಲಿ ಅದೇ ವಿದ್ಯಾರ್ಥಿನಿಯ ಹೆಸರು ಬಳಸಿರುವ ಕಿಡಿಗೇಡಿಗಳು ಪಟ್ಟಣದ ಕೆಪಿಎಸ್‌ ಹಾಗೂ ಚನ್ನಶ್ರೀರುದ್ರ ಪಿಯು ಕಾಲೇಜಿನ ಸಾಲು ಕೊಠಡಿಗಳಿಗೆ ಅಶ್ಲೀಲವಾಗಿ ಬರೆದಿದ್ದಾರೆ. ವಿನಾಕಾರಣ ವಿದ್ಯಾರ್ಥಿನಿಯ ಹೆಸರು ಬಳಸಿ ಅಶ್ಲೀಲ ಬರವಣಿಗೆಗೆ ಕುಟುಂಬ ವರ್ಗಕ್ಕೆ ನೋವುಂಟಾಗಿದೆ. ಸುದ್ದಿ ತಿಳಿದ ಪೊಲೀಸ್‌ ಸಿಬ್ಬಂದಿ ಶಾಲೆಗೆ ದಿಢೀರ್‌ ಭೇಟಿ ನೀಡಿ, ಅಶ್ಲೀಲ ಬರವಣಿಗೆಯನ್ನು ಅಳಿಸುವಂತೆ ಸೂಚಿಸಿದ್ದರಿಂದ ಶಾಲೆಯ ಆಡಳಿತ ಮಂಡಳಿ ಬಣ್ಣದಿಂದ ಅಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 354(ಎ) ಹಾಗೂ 294 ರಡಿ ಕೇಸ್‌ ದಾಖಲಾಗಿದೆ.

ಕನಕಗಿರಿ ಪಟ್ಟಣದ ಕೆಪಿಎಸ್‌, ಚನ್ನಶ್ರೀರುದ್ರ ಪಿಯು ಕಾಲೇಜಿನ ಸಾಲು ಕೊಠಡಿಗಳಿಗೆ ವಿದ್ಯಾರ್ಥಿನಿಯೊರ್ವಳ ಹೆಸರು ಬಳಸಿ ಅಶ್ಲೀಲ ಬರವಣಿಗೆಯ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ. ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು.

ಜಗದೀಶ, ಪಿಐ ಕನಕಗಿರಿ

ವಿದ್ಯಾರ್ಥಿನಿಯೊರ್ವಳನ್ನು ಟಾರ್ಗೆಟ್‌ ಮಾಡಿರುವ ಕಿಡಿಗೇಡಿಗಳು ಪದೇ ಪದೇ ಶಾಲೆಯ ಗೋಡೆಯ ಮೇಲೆ ಅಶ್ಲೀಲವಾಗಿ ಬರೆಯುವುದಲ್ಲದೇ ಅಸಹ್ಯ ಚಿತ್ರಗಳನ್ನು ಬಿಡಿಸುತ್ತಿದ್ದು, ಶಾಲೆಯ ವಾತಾವರಣ ಹದಗೆಡುತ್ತಿದೆ. ಇಂತಹ ಘಟನೆಗಳಿಂದ ನನಗೂ, ಶಿಕ್ಷಕರಿಗೂ ಕೆಲಸ ಮಾಡಲು ತೊಂದರೆಯಾಗುತ್ತಿದೆ. ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಸಿಸಿ ಟಿವಿ ಅಳವಡಿಸಲಾಗುವುದು. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಗಿದೆ.

ಜಗದೀಶ ಹಾದಿಮನಿ, ಕೆಪಿಎಸ್‌ ಮುಖ್ಯೋಪಾಧ್ಯಾಯ

click me!