ಬೆಂಗಳೂರು: ಏರ್‌ಪೋರ್ಟ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಟ್ಯಾಕ್ಸಿ ಚಾಲಕ

By Kannadaprabha NewsFirst Published Mar 31, 2021, 9:06 AM IST
Highlights

ಕಾರೊಳಗೆ ಕುಳಿತುಕೊಂಡು ಆತ್ಮಹತ್ಯೆ ಯತ್ನ| ಆರ್ಥಿಕ ನಷ್ಟದಿಂದ ಬೇಸತ್ತು ಪ್ರತಾಪ್‌ ಕೃತ್ಯ| ಗಾಯಾಳು ಸ್ಥಿತಿ ಗಂಭೀರ| ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗ ನಡೆದ ಘಟನೆ| 

ಬೆಂಗಳೂರು/ದೇವನಹಳ್ಳಿ(ಮಾ.31): ನಷ್ಟದಲ್ಲಿ ಟ್ಯಾಕ್ಸಿ ಚಾಲನೆ ಮಾಡುತ್ತಿದ್ದರಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ ಚಾಲಕನೊಬ್ಬ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

"

ರಾಮನಗರ ಮೂಲದ ಪ್ರತಾಪ್‌ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಗಾಯಾಳು ಸ್ಥಿತಿ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಘಟನೆ ಖಂಡಿಸಿ ನೂರಾರು ಏರ್‌ಪೋರ್ಟ್‌ ಟ್ಯಾಕ್ಸಿ ಚಾಲಕರು ವಿಮಾನ ನಿಲ್ದಾಣ ಹೊರಗೆ ರಾತ್ರಿವರೆಗೆ ಪ್ರತಿಭಟನೆ ನಡೆಸಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು.

ಪ್ರತಾಪ್‌ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಗೆ (ಕೆಎಸ್‌ಟಿಡಿಸಿ) ಗುತ್ತಿಗೆ ಅಡಿಯಲ್ಲಿ ಟ್ಯಾಕ್ಸಿ ಚಾಲನೆ ಮಾಡುತ್ತಿದ್ದರು. ಓಲಾ ಮತ್ತು ಊಬರ್‌ ಸಂಸ್ಥೆಗಳು ಕಿಲೋ ಮೀಟರ್‌ಗೆ ಕಡಿಮೆ ಹಣ ಪಡೆದು ಚಾಲಕರಿಗೆ ಡ್ಯೂಟಿ ನೀಡುತ್ತಿವೆ. ಇದರಿಂದ ಇತರೆ ಟ್ಯಾಕ್ಸಿ ಚಾಲಕರಿಗೆ ತೊಂದರೆಯಾಗಿದ್ದು, ಡ್ಯೂಟಿಗಳು ಸಿಗುತ್ತಿಲ್ಲ. ಜೀವನ ನಿರ್ವಹಣೆ ಕಷ್ಟವಾಗಿದ್ದು, ಬೇಸತ್ತಿದ್ದ ಪ್ರತಾಪ್‌ ಮಂಗಳವಾರ ಸಂಜೆ ವಿಮಾನ ನಿಲ್ದಾಣದ ಹೊರಗೆ ಟ್ಸಾಕ್ಸಿ ನಿಲುಗಡೆ ಮಾಡುವ ಸ್ಥಳದಲ್ಲಿಯೇ ಕಾರಿನೊಳಗೆ ಕುಳಿತು ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಪರಿಣಾಮ ಕಾರಿಗೂ ಬೆಂಕಿ ತಗುಲಿತ್ತು. ಕೂಡಲೇ ಇತರೆ ಕಾರು ಚಾಲಕರು ಬೆಂಕಿ ನಂದಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಶಾಲೆಯಲ್ಲಾದ ಘಟನೆಯಿಂದ ನೊಂದು 10 ನೇ ತರಗತಿ ಬಾಲಕ ಸೂಸೈಡ್

‘ಓಲಾ, ಊಬರ್‌ನಿಂದ ಕಡಿಮೆ ದರಕ್ಕೆ ಸೇವೆ; ನಮಗೆ ಸಂಕಷ್ಟ’

ಘಟನೆಯನ್ನು ಖಂಡಿಸಿ ನೂರಾರು ಟ್ಯಾಕ್ಸಿ ಚಾಲಕರು ಸ್ಥಳದಲ್ಲಿ ಸೇರಿ ಪ್ರತಿಭಟನೆ ನಡೆಸಿದರು. ವಿಮಾನ ನಿಲ್ದಾಣದ ಹೊರಗೆ ತಡರಾತ್ರಿವರೆಗೆ ಪ್ರತಿಭಟನೆ ನಡೆದಿದ್ದು, ಪೊಲೀಸರು ಎಷ್ಟುಮನವಿ ಮಾಡಿದರೂ ಚಾಲಕರು ಪ್ರತಿಭಟನೆಯನ್ನು ಹಿಂಪಡೆಯಲಿಲ್ಲ.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಏರ್‌ಪೋರ್ಟ್‌ ಕಾರು ಚಾಲಕರ ಸಂಘದ ಕಾರ್ಯದರ್ಶಿ ನೀಲಕಂಠಪ್ಪ, ಘಟನೆಗೆ ಓಲಾ ಮತ್ತು ಊಬರ್‌ ಕಾರುಗಳಲ್ಲಿ ಕಡಿಮೆ ಬಾಡಿಗೆ ಇರುವುದೇ ಪ್ರಮುಖ ಕಾರಣ ಎಂದು ಆರೋಪಿಸಿದರು. ಈಗಾಗಲೇ ರಾಜ್ಯ ಸರ್ಕಾರ ಏರ್‌ಪೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರುಗಳಿಗೆ ಒಂದು ಕಿ.ಮೀ.ಗೆ .24 ದರ ನಿಗದಿ ಮಾಡಿದೆ. ಈ ಓಲಾ ಮತ್ತು ಓಬರ್‌ ಸಂಸ್ಥೆಗಳು ಒಂದು ಕಿ.ಮೀ.ಗೆ ಹತ್ತು ರುಪಾಯಿ ದರ ನಿಗದಿ ಮಾಡಿವೆ. ಇದರಿಂದ ಕೆಎಸ್‌ಟಿಡಿಸಿ ಕಾರು ಚಾಲಕರಿಗೆ ಡ್ಯೂಟಿ ಸಿಗುತ್ತಿಲ್ಲ. ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಚಾಲಕರು ಕಾರಿನ ಇಎಂಐ ಕಟ್ಟಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ವಿಮಾನ ನಿಲ್ದಾಣದಲ್ಲಿರುವ ಎಲ್ಲ ಟ್ಯಾಕ್ಸಿಗಳಿಗೆ ಒಂದೇ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
 

click me!