
ನವದೆಹಲಿ (ನ.27): ಗಲಾಟೆಯ ವೇಳೆ ಸಿಟ್ಟಿನಿಂದ ಗಂಡನ ಕಿವಿಯನ್ನು ಪತ್ನಿಯೊಬ್ಬಳು ಕಚ್ಚಿ ತುಂಡು ಮಾಡಿದ ಘಟನೆ ದೆಹಲಿಯ ಸುಲ್ತಾನ್ಪುರಿ ಪ್ರದೇಶದಲ್ಲಿ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಲಾಟೆಯ ವೇಳೆ ಆಕೆ ಕಚ್ಚಿದ್ದರಿಂದ ನನ್ನ ಬಲಕಿವಿಯ ಮೇಲ್ಭಾಗ ಸಂಪೂರ್ಣವಾಗಿ ತುಂಡಾಗಿತ್ತು. ಇದರಿಂದಾಗಿ ಶಸ್ತ್ರಚಿಕಿತ್ಸೆಗೂ ಒಳಗಾಗಬೇಕಾಯಿತು ಎಂದು 45 ವರ್ಷದ ವ್ಯಕ್ತಿ ದೂರು ದಾಖಲಿಸುವ ವೇಳೆ ತಿಳಿಸಿದ್ದಾರೆ. ಸಂಪೂರ್ಣವಾಗಿ ಚಿಕಿತ್ಸೆ ಪಡೆದುಕೊಂಡ ಬಳಿಕ ಪತ್ನಿಯ ವಿರುದ್ಧ ಈತ ದೂರು ದಾಖಲು ಮಾಡಿದ್ದಾನೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 324 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳಿಂದ ಗಾಯವನ್ನು ಉಂಟುಮಾಡುವುದು) ಅಡಿಯಲ್ಲಿ ಮಹಿಳೆಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಈ ವಿಷಯದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ನವೆಂಬರ್ 20 ರಂದು ಬೆಳಿಗ್ಗೆ 9.20 ರ ಸುಮಾರಿಗೆ ನಾನು ನನ್ನ ಮನೆಯ ಹೊರಗೆ ಕಸ ಎಸೆಯಲು ಹೋಗಿದ್ದೆ. ಈ ವೇಳೆ ಪತ್ನಿಗೆ ಮನೆಯನ್ನು ಸ್ವಚ್ಛಗೊಳಿಸಲು ಹೇಳಿದೆ. ನಾನು ಮನೆಗೆ ಹಿಂದಿರುಗಿದ ಕೂಡಲೇ ನನ್ನ ಹೆಂಡತಿ ಬೇಡದ ವಿಷಯಕ್ಕೆ ನನ್ನೊಂದಿಗೆ ಜಗಳವಾಡಲು ಪ್ರಾರಂಭಿಸಿದಳು" ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ. ಮಕ್ಕಳೊಂದಿಗೆ ಪ್ರತ್ಯೇಕವಾಗಿ ಇರಲು ಮನೆಯನ್ನು ಮಾರಿ ತನಗೆ ಪಾಲು ನೀಡುವಂತೆ ಪತ್ನಿ ಪದೇ ಪದೇ ಪೀಡಿಸುತ್ತಿದ್ದಳು ಎಂದು ದೂರುದಾರ ಪೊಲೀಸರಿಗೆ ತಿಳಿಸಿದ್ದಾನೆ.
"ನಾನು ಅವಳಿಗೆ ವಿಷಯವನ್ನು ಅರ್ಥ ಮಾಡಿಸಲು ಪ್ರಯತ್ನಿಸಿದೆ, ಆದರೆ ಮಾತಿನ ಚಕಮಕಿ ನಡೆಯಿತು, ಅವಳು ನನ್ನನ್ನು ಹೊಡೆಯಲು ಪ್ರಯತ್ನಿಸಿದಳು, ಆದರೆ ನಾನು ಅವಳನ್ನು ಈ ಹಂತದಲ್ಲಿ ತಳ್ಳಿದೆ. ನಾನು ಮನೆಯಿಂದ ಹೊರಗೆ ಹೋಗುತ್ತಿದ್ದಾಗ ಅವಳು ನನ್ನನ್ನು ಹಿಂಬದಿಯಿಂದ ಹಿಡಿದು ಕೋಪದಿಂದ ನನ್ನ ಬಲ ಕಿವಿಯನ್ನು ಕಚ್ಚಿದ್ದಳು. ಇದರಿಂದ ನನ್ನ ಕಿವಿಯ ಮೇಲಿನ ಭಾಗವು ತುಂಡಾಯಿತು ಎಂದು ಹೇಳಿದ್ದಾರೆ. ಆ ಬಳಿಕ ನನ್ನ ಮಗ ನನ್ನನ್ನು ಮಂಗೋಲ್ಪುರಿಯ ಸಂಜಯ್ ಗಾಂಧಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದ, ರೋಹಿಣಿಯಲ್ಲಿರುವ ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು ಎಂಧು ಆತ ತಿಳಿಸಿದ್ದಾನೆ.
ತಾತನ ಅಂತ್ಯಕ್ರಿಯೆಗೆ ಹೊರಟಿದ್ದ ಮೊಮ್ಮಗ ಬೈಕ್ ಅಪಘಾತದಲ್ಲಿ ದುರ್ಮರಣ ಇದೆಂಥ ದುರ್ವಿಧಿ!
ನವೆಂಬರ್ 20 ರಂದು ನಡೆದ ಘಟನೆಯ ಬಗ್ಗೆ ಆಸ್ಪತ್ರೆಯಿಂದ ಮಾಹಿತಿ ಪಡೆದಿದ್ದು, ಈ ಬಗ್ಗೆ ತನಿಖೆ ನಡೆಸಲು ತಂಡವನ್ನು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ಥ ವ್ಯಕ್ತಿ ಅಸ್ವಸ್ಥರಾಗಿದ್ದ ಕಾರಣಕ್ಕೆ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ, ಹೇಳಿಕೆ ನೀಡಲು ಠಾಣೆಗೆ ಬರುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ನವೆಂಬರ್ 22ರಂದು ಪೊಲೀಸರಿಗೆ ಬಂದು ಲಿಖಿತ ದೂರು ನೀಡಿದ್ದು, ನಾವು ದಾಖಲಿಸಿಕೊಂಡಿದ್ದೇವೆ. ಈ ವಿಷಯದ ಬಗ್ಗೆ ಎಫ್ಐಆರ್ ಮತ್ತು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಷ್ಟ್ರೀಯ ರನ್ನಿಂಗ್ ರೇಸ್ ಸೋಲು; ಪುತ್ತೂರಿನ ವಿದ್ಯಾರ್ಥಿನಿ ಆತ್ಮಹತ್ಯೆ !
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ