ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಸಾಲ ತೀರಿಸಲಾಗದೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮತ್ತೊಂದು ಘಟನೆಯಲ್ಲಿ, ಕೆ.ಆರ್.ಪೇಟೆಯಲ್ಲಿ ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆದಿದ್ದು, ಎಎಸ್ಐ ಗಾಯಗೊಂಡಿದ್ದಾರೆ.
ಪಾಂಡವಪುರ (ಮಾ.22): ತಾತ ಮತ್ತು ಅಪ್ಪ ಮಾಡಿದ ಸಾಲ ತೀರಿಸಲಾಗದೆ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ ನಡೆದಿದೆ.
ಎಲ್.ಆರ್.ಶಂಕರನಾರಾಯಣ್ (೨೩) ಆತ್ಮಹತ್ಯೆ ಮಾಡಿಕೊಂಡ ಯುವಕ. ವ್ಯವಸಾಯ, ಮನೆ ನಿರ್ಮಾಣ ಮತ್ತು ಸಂಸಾರ ನಿರ್ವಹಣೆಗೆ ತಾತ ಮತ್ತು ಅಪ್ಪ ಕಾವೇರಿ ಗ್ರಾಮೀಣ ಬ್ಯಾಂಕ್ನಲ್ಲಿ ೫೦ ಸಾವಿರ ರು., ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘದಲ್ಲಿ ೫೦ ಸಾವಿರ ರು. ಸಾಲ ಮಾಡಿದ್ದರಲ್ಲದೇ, ಖಾಸಗಿಯಾಗಿ ೮ ಲಕ್ಷ ರು. ಸಾಲ ಪಡೆದಿದ್ದರು. ತಾತ ಮತ್ತು ಅಪ್ಪ ನಿಧನಾನಂತರ ಕುಟುಂಬ ನಿರ್ವಹಣೆಯ ಹೊಣೆ ಹೊತ್ತಿದ್ದ ಶಂಕರ್ನಾರಾಯಣ್ಗೆ ಸಾಲಗಾರರ ಕಾಟ ಹೆಚ್ಚಾಯಿತು. ಸಾಲ ತೀರಿಸಲಾಗದೆ ಜಿಗುಪಪ್ಸೆಗೊಂಡಿದ್ದನು. ಇದರಿಂದ ಮನನೊಂದು ವಿಷ ಸೇವಿಸಿ ಸಾವು-ಬದುಕಿನ ನಡುವೆ ಸೆಣಸುತ್ತಿದ್ದನು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹನ್ನೊಂದು ದಿನದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಜೀವದ ಗೆಳೆಯ ಅಂತಾ ಒಟ್ಟಿಗೆ ಕುಡಿದ್ರೆ ಜೀವಕ್ಕೇ ಕುತ್ತು ಎಚ್ಚರ, ಈ ಸ್ಟೋರಿ ಒಮ್ಮೆ ಓದಿ!
ಪೊಲೀಸ್ ವಾಹನಕ್ಕೆ ಕಲ್ಲೇಟು; ಎಎಸ್ಐಗೆ ಗಾಯ
ಕೆ.ಆರ್.ಪೇಟೆ: ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ವ್ಯಕ್ತಿಯೊಬ್ಬರನ್ನು ಕರೆತರುತ್ತಿದ್ದ ಸಮಯದಲ್ಲಿ ಮೋಟಾರ್ ಬೈಕ್ನಲ್ಲಿ ಬಂದ ಗುಂಪೊಂದು ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದು, ಎಎಸ್ಐವೊಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಐಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಎಎಸ್ಐ ಎಚ್.ಸುಬ್ಬಯ್ಯ ಗಾಯಗೊಂಡವರು. ಐಪನಹಳ್ಳಿ ಗ್ರಾಮದಲ್ಲಿ ಗಲಾಟೆಯಾಗುತ್ತಿರುವ ಮಾಹಿತಿ ಮೇರೆಗೆ ೧೧೨ ಪೊಲೀಸ್ ವಾಹನದಲ್ಲಿ ಸಿಬ್ಬಂದಿಯೊಂದಿಗೆ ತೆರಳಿದೆವು. ಗ್ರಾಮದ ಸ್ವಾಮಿ ಅಲಿಯಾಸ್ ಪೂಜಾರಿ ಸ್ವಾಮಿ ಅವರ ಮನೆ ಎದುರು ಹೆಚ್ಚು ಜನರು ಸೇರಿದ್ದರು. ಅಲ್ಲಿಂದ ಸ್ವಾಮಿ ಅವರನ್ನು ಕರೆದುಕೊಂಡು ಗ್ರಾಮದ ಹೊರವಲಯದಲ್ಲಿರುವ ಜೈನಹಳ್ಳಿ ಗ್ರಾಮದ ತಿರುವಿನ ಬಳಿ ಬರುತ್ತಿದ್ದೆವು.
ಈ ಸಮಯದಲ್ಲಿ ವಾಹನವನ್ನು ಹಿಂಬಾಲಿಸಿಕೊಂಡು ಬಂದ ಗುಂಪೊಂದು ಪೊಲೀಸ್ ವಾಹನದ ಹಿಂಬದಿ ಗ್ಲಾಸಿಗೆ ಕಲ್ಲಿನಿಂದ ಹೊಡೆದು ಜಖಂಗೊಳಿಸಿದರು. ಮತ್ತೆರಡು ಬಾರಿ ವಾಹನದ ಹಿಂಬದಿಗೆ ಕಲ್ಲಿನಿಂದ ಹೊಡೆದಿದ್ದು ಈ ಸಮಯದಲ್ಲಿ ಎಎಸ್ಐ ಸುಬ್ಬಯ್ಯ ಅವರಿಗೆ ಗಾಯಗಳಾದವು.
ನಂತರ ಕಾರನ್ನು ನಿಲ್ಲಿಸಿ ಕೆಳಗಿಳಿದಾಗ ಆರೋಪಿಗಳು ಬೈಕ್ ಸಮೇತ ಹೊರಟುಹೋದರು. ಆರೋಪಿಗಳ ಕುರಿತು ವಿಚಾರಿಸಿದಾಗ ಗ್ರಾಮದ ಸಿ.ಪ್ರಜ್ವಲ್, ಆರ್.ಪ್ರಜ್ವಲ್ ಎಂದು ತಿಳಿದುಬಂದಿದ್ದು, ಇನ್ನೊಬ್ಬನ ಹೆಸರು ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ.