ಮುರುಘಾ ಮಠ ಶ್ರೀಗಳಿಂದ ಲೈಂಗಿಕ ದೌರ್ಜನ್ಯ; ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು

By Sharath SharmaFirst Published Aug 27, 2022, 11:59 AM IST
Highlights

Muruga Mutt Shri sexual harassment: ಮುರುಘಾ ಮಠದ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಾಗಿದ್ದು, ಮಠದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ನಿರಂತರ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಒಡನಾಡಿ ಸಂಸ್ಥೆ ದೂರು ದಾಖಲಿಸಿದೆ,

ಚಿತ್ರದುರ್ಗ: ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ರಾಜ್ಯದ ಪ್ರತಿಷ್ಠಿತ ಮಠವೊಂದರಲ್ಲಿ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಶರಣರಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಚಿತ್ರದುರ್ಗದ ಮುರುಘಾ ಮಠದ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಶ್ರೀಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಶ್ರೀಗಳ ಲೈಂಗಿಕ ಕಿರುಕುಳದಿಂದ‌ ಬೇಸತ್ತ ಮಕ್ಕಳು ರಾಜಧಾನಿ ಬೆಂಗಳೂರಿಗೆ ಬಂದು ಅಲ್ಲಿ ದೂರು ದಾಖಲಿಸಲು ಪ್ರಯತ್ನ ಮಾಡಿದ್ದಾರೆ. ಅದು ಸಾಧ್ಯವಾಗದಿದ್ದಾಗ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು‌ ಮುಂದಾಗಿದ್ದರು. ಆದರೆ ಒಬ್ಬರು ಆಟೋ ಚಾಲಕ ಅವರಿಗೆ ಸಹಾಯ ಮಾಡಿ, ಮೈಸೂರಿನ ಒಡನಾಡಿ ಸಂಸ್ಥೆ ಮೂಲಕ ಇದೀಗ ದೂರು ದಾಖಲಿಸಿದ್ದಾರೆ.

ಒಡನಾಡಿ ಸಂಸ್ಥೆಯ ಬಳಿ ಹೋಗಿ ನ್ಯಾಯ ಸಿಗುತ್ತದೆ ಎಂದು ಆಟೋ ಚಾಲಕರು ಕಳುಹಿಸಿಕೊಟ್ಟರು ಎಂದು ಒಡನಾಡಿ ಸಂಸ್ಥೆ ಮಾಹಿತಿ ನೀಡಿದೆ. ಆ ಇಬ್ಬರು ಮಕ್ಕಳ ಜೊತೆ ಆಪ್ತ ಸಮಾಲೋಚನೆ ಮಾಡಲಾಗಿದೆ. ಸ್ವಾಮೀಜಿಯವರ ಕಿರುಕುಳವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟರು ಎಂದು ಸಂಸ್ಥೆ ಹೇಳಿದೆ. ತಕ್ಷಣ ನಾವು ಮಕ್ಕಳ ಹಕ್ಕುಗಳ ರಕ್ಷಣಾ ಕೇಂದ್ರದವರಿಗೆ ವಿಚಾರ ತಲುಪಿಸಿದೆವು. ಅವರೂ ಸಹ ಕೌನ್ಸಿಲಿಂಗ್ ಮಾಡಿದ್ದಾರೆ. ಮಕ್ಕಳ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದೆನಿಸಿದ ನಂತರ‌ ನಿನ್ನೆ ರಾತ್ರಿ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ ಎಂದು ಒಡನಾಡಿ ಸಂಸ್ಥೆ ಹೇಳಿದೆ. 

ಇದನ್ನೂ ಓದಿ: ಅಪ್ರಾಪ್ತೆ ಸ್ನೇಹಿತೆ ಮೇಲೆ ಸಾಮೂಹಿಕ ಅತ್ಯಾಚಾರ, ನೋಡಿ ಖುಷಿ ಪಟ್ಟ ಮಹಿಳೆ!

ಶಿವಮೂರ್ತಿ ಶರಣರು ಸೇರಿ ಐವರ ವಿರುದ್ದ ದೂರು ದಾಖಲಾಗಿದೆ. ಉಳಿದ ನಾಲ್ವರು ಲೈಂಗಿಕ ದೌರ್ಜನ್ಯ ವೆಸಗಲು ಸ್ವಾಮೀಜಿಗೆ ಸಹಾಯ ಮಾಡುತ್ತಿದ್ದರು. ನಮ್ಮ‌ ಬಳಿ ದೂರು ಬರುತ್ತಿದ್ದಂತೆ, ಬಹಳಷ್ಟು ಒತ್ತಡಗಳು ಬಂದಿವೆ. ನಾವು ಅದಾವುದನ್ನೂ ಲೆಕ್ಕಿಸದೆ ಮಕ್ಕಳಿಗೆ ನ್ಯಾಯ ಒದಗಿಸಲಷ್ಟೇ ಹೆಜ್ಜೆ ಇಟ್ಟಿದ್ದೇವೆ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸುತ್ತಿದ್ದೇವೆ. ಈ ಪ್ರಕರಣ ಗಂಭೀರ ಸ್ವರೂಪದ್ದಾಗಿರುವ ಕಾರಣ ನ್ಯಾಯಾಧೀಶರ ಮೂಲಕವೇ ತನಿಖೆ ಆಗಬೇಕು. ಸ್ವಾಮೀಜಿಯವರಿಗೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅತ್ಯಂತ ಪ್ರಭಾವಿಗಳಾಗಿದ್ದಾರೆ. ಮಕ್ಕಳು ಅಷ್ಟು ದೂರದಿಂದ ಇಲ್ಲಿಗೆ ಬಂದಿರೋದೆ‌ ನ್ಯಾಯ ಸಿಗುತ್ತೆ ಎಂಬ ಭರವಸೆಯಿಂದ. ಈ ಕಾರಣಕ್ಕಾಗಿ ಮಕ್ಕಳ ಜೊತೆ ನಾವಿದ್ದೇವೆ ಎಂದು ಒಡನಾಡಿ ಸಂಸ್ಥೆ ತಿಳಿಸಿದೆ. 

ಮಕ್ಕಳಿಗೆ ನ್ಯಾಯ ಸಿಗಬೇಕಾದರೆ ನ್ಯಾಯಾಂಗ ತನಿಖೆಯೇ ಆಗಬೇಕು. ಪ್ರಸ್ತುತ ಸೇವೆಯಲ್ಲಿರುವ ನ್ಯಾಯಾಧೀಶರ ನೇತೃತ್ವದಲ್ಲೇ ತನಿಖೆ ನಡೆಸಿದಲ್ಲಿ ಮಾತ್ರ ಸತ್ಯಾಂಶ ಹೊರ ಬರುತ್ತದೆ ಮತ್ತು ಮಕ್ಕಳಿಗೆ ನ್ಯಾಯ ಸಿಗುತ್ತದೆ ಎಂದು ಒಡನಾಡಿ ಮುಖ್ಯಸ್ಥ ಪರಶು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: ಕೆಲಸ ಕೊಡಿಸುವುದಾಗಿ ಕರೆತಂದು ವೇಶ್ಯಾವಾಟಿಕೆಗೆ ತಳ್ಳಿದ ಪ್ರಿಯಕರ, ನಂತರ ಗ್ಯಾಂಗ್‌ರೇಪ್‌

ಶರಣರ ಮೇಲಿನ ಆರೋಪವೇನು?:
ಮುರುಗಾ ಶರಣರಿಗೆ ಒಂದು ಹೆಣ್ಣು ಮಗುವನ್ನು ಹಣ್ಣು ಹಂಪಲು ನೀಡಲು ಅವರ ಕೋಣೆಗೆ ಕಳಿಸಲಾಗುತ್ತಿತ್ತು. ಅಲ್ಲಿ ಶರಣರು ಇಷ್ಟವಿಲ್ಲ ಎಂದು ಹೇಳಿದರೂ ಹುಡುಗಿಯರ ಖಾಸಗಿ ಭಾಗಗಳನ್ನು ಮುಟ್ಟುತ್ತಿದ್ದರು. ಅದಾದ ನಂತರ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದರು. ವಿದ್ಯಾರ್ಥಿನಿಯರಿಗೆ ಸ್ನಾನದ ಕೋಣೆಗೆ ಹೋಗಿ ಸ್ನಾನ ಮಾಡಿ ಹೋಗುವಂತೆ ಹೇಳುತ್ತಿದ್ದರು ಎಂದು ಆರೋಪಿಸಲಾಗಿದೆ. ಪ್ರತಿನಿತ್ಯ ಒಂದು ಹುಡುಗಿಯನ್ನು ಆಪ್ತ ಸಹಾಯಕರು ಕರೆದುಕೊಂಡು ಹೋಗಿ ಶರಣರ ಜೊತೆ ಕೋಣೆಯಲ್ಲಿ ಕೂಡಿ ಹಾಕುತ್ತಿದ್ದರು. ಹಲವಾರು ಬಾರಿ ಈ ರೀತಿ ನಡೆದ ನಂತರ ಅದರ ವಿಡಿಯೋಗಳನ್ನು ಕೂಡ ಮಾಡಲಾಗಿದೆ, ಎನ್ನಲಾಗುತ್ತಿದೆ.

click me!