SBI ಗೆ ₹899.35 ಕೋಟಿ ವಂಚನೆ: ದೀಪಕ್‌ ಕೇಬಲ್ಸ್‌ ಎಂಡಿ ಬಂಧನ

Kannadaprabha News   | Kannada Prabha
Published : Jun 05, 2026, 07:21 AM IST
ED Arrested Deepak cable MD K Venkateshwar rao for Bank fraud SBI

ಸಾರಾಂಶ

ಎಸ್‌ಬಿಐ ನೇತೃತ್ವದ ಬ್ಯಾಂಕ್‌ ಒಕ್ಕೂಟಕ್ಕೆ 899.35 ಕೋಟಿ ರು. ವಂಚಿಸಿದ ಆರೋಪದ ಮೇಲೆ ದೀಪಕ್‌ ಕೇಬಲ್ಸ್‌ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ವೆಂಕಟೇಶ್ವರ ರಾವ್‌ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿದೆ. 

ಇ.ಡಿ. ಬೇಟೆ - ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಸೆರೆ । 10 ದಿನ ಇ.ಡಿ.ಕಸ್ಟಡಿಗೆ

ಬೆಂಗಳೂರು (ಜೂ.5): ಎಸ್‌ಬಿಐ(SBI) ನೇತೃತ್ವದ ಒಕ್ಕೂಟದ ಬ್ಯಾಂಕ್‌ಗಳಿಗೆ 899.35 ಕೋಟಿ ರು.ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ದೀಪಕ್‌ ಕೇಬಲ್ಸ್‌ ಇಂಡಿಯಾ ಲಿಮಿಟೆಡ್‌(Deepak Cables India Limited)ನ ವ್ಯವಸ್ಥಾಪಕ ನಿರ್ದೇಶಕ ಕೆ.ವೆಂಕಟೇಶ್ವರ ರಾವ್‌(K Venkateshwar Rao) ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ಜಾರಿ ನಿರ್ದೇಶನಾಲಯ(ED) ಬಂಧಿಸಿದೆ.

ಬಂಧನದ ಬಳಿಕ ಇ.ಡಿ.ಅಧಿಕಾರಿಗಳು ಕೆ.ವೆಂಕಟೇಶ್ವರ ರಾವ್‌ ಅವರನ್ನು ನಗರದ ಇ.ಡಿ.ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ, ಹೆಚ್ಚಿನ ವಿಚಾರಣೆ ಸಂಬಂಧ ಆರೋಪಿಯನ್ನು ವಶಕ್ಕೆ ನೀಡುವಂತೆ ಇ.ಡಿ.ಅಧಿಕಾರಿಗಳು ಮಾಡಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಆರೋಪಿಯನ್ನು 10 ದಿನಗಳ ಕಾಲ ಇ.ಡಿ.ವಶಕ್ಕೆ ನೀಡಿತು.

ಎಸ್‌ಬಿಐ ನೇತೃತ್ವದ ಒಕ್ಕೂಟದ ಬ್ಯಾಂಕ್‌ಗಳಿಂದ 899.35 ಕೋಟಿ ರು.ಸಾಲ ಪಡೆದು ಬಳಿಕ ಆ ಹಣವನ್ನು ಅಕ್ರಮವಾಗಿ ಬೇರೆ ಕಡೆಗೆ ವರ್ಗಾಯಿಸಿಕೊಂಡು ವಂಚಿಸಿದ ಆರೋಪದಡಿ ರಾವ್‌ ಹಾಗೂ ಇತರರ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿತ್ತು. ಇದರ ಆಧಾರದ ಮೇಲೆ ಇ.ಡಿ.ತನಿಖೆ ಆರಂಭಿಸಿತ್ತು.

ನಕಲಿ ದಾಖಲೆ ಸಲ್ಲಿಸಿ ಸಾಲ:

ಆರೋಪಿಗಳು ಸಾಲ ಪಡೆಯುವಾಗ ನಕಲಿ ಕಾರ್ಪೊರೇಟ್‌ ಗ್ಯಾರಂಟಿಗಳನ್ನು ನೀಡಲು ಹಲವು ಸಂಸ್ಥೆಗಳನ್ನು ಬಳಸಿಕೊಂಡಿದ್ದಾರೆ. ಬ್ಯಾಂಕ್‌ಗಳಿಂದ ಹೆಚ್ಚಿನ ಸಾಲ ಪಡೆಯುವ ಉದ್ದೇಶದಿಂದ ನಕಲಿ ವಹಿವಾಟು ನಡೆಸಿದ್ದಾರೆ. ಅಸ್ತಿತ್ವದಲ್ಲಿರುವ ಸಾಲಗಳನ್ನು ಮುಚ್ಚಿಟ್ಟು ನಕಲಿ ದಾಖಲೆಗಳನ್ನು ಸೃಷ್ಟಿಸಿ ಹೆಚ್ಚಿನ ಸಾಲ ಪಡೆದಿದ್ದಾರೆ. ಆರೋಪಿ ಕೆ.ವೆಂಕಟೇಶ್ವರ ರಾವ್‌ ನಿಯಂತ್ರಣದಲ್ಲಿರುವ ಹಲವು ಸಂಸ್ಥೆಗಳಿಗೆ ಈ ಸಾಲವನ್ನು ಅಕ್ರಮವಾಗಿ ವರ್ಗಾಯಿಸಿರುವುದು ಇ.ಡಿ. ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ಇ.ಡಿ.ಅಧಿಕಾರಿಗಳು ಮೇ 21 ಮತ್ತು 29ರಂದು ದೀಪಕ್‌ ಕೇಬಲ್ಸ್‌ ಇಂಡಿಯಾ ಲಿಮಿಟೆಡ್‌ ಕಂಪನಿ, ನಿರ್ದೇಶಕರ ನಿವಾಸ, ಕಚೇರಿ ಸೇರಿದಂತೆ ಸಂಬಂಧಿತ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ 1.27 ಕೋಟಿ ರು.ಮೌಲ್ಯದ ಚಿನ್ನಾಭರಣ ಹಾಗೂ ನಗದು ಜಪ್ತಿ ಮಾಡಿದ್ದರು. ಅಲ್ಲದೆ, ಕಂಪನಿಯ ವಿವಿಧ ಬ್ಯಾಂಕ್‌ ಖಾತೆಗಳಲ್ಲಿದ್ದ 18 ಕೋಟಿ ರು.ಸ್ಥಗಿತಗೊಳಿಸಿದ್ದರು. ಇದೀಗ ಆರೋಪಿ ಕೆ.ವೆಂಕಟೇಶ್ವರ ರಾವ್‌ ಅವರನ್ನು ಬಂಧಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವನ್ಯಜೀವಿ ಬೇಟೆಯ ವೀಡಿಯೋ ವೈರಲ್: ಐವರನ್ನು ಬಂಧಿಸಿದ್ಯಾಕೆ ಅರಣ್ಯ ಇಲಾಖೆ!
Ballari: ರಸ್ತೆ ಕಾಮಗಾರಿ ಗುಂಡಿಗೆ ಬೈಕ್ ಬಿದ್ದು ನರ್ಸ್ ಸಾವು: ಪತಿ ಗಂಭೀರ, ನಿರ್ಲಕ್ಷ್ಯ ಆರೋಪ