ನಟಿ ಪ್ರಣೀತಾರನ್ನು ರಾಯಭಾರಿ ಮಾಡೋದಾಗಿ ಲಕ್ಷಾಂತರ ರೂ. ವಂಚನೆ

By Kannadaprabha NewsFirst Published Oct 13, 2020, 8:13 AM IST
Highlights

ರಿಯಲ್ ಎಸ್ಟೇಟ್‌ ಕಂಪನಿಗೆ ಮೋಸ, ದೂರು ದಾಖಲು| ಮೋಸ ಹೋದ ವಸಂತ ನಗರದ ಎಸ್‌ವಿ ಗ್ರೂಪ್‌ ಆ್ಯಂಡ್‌ ಡೆವಲಪರ್ಸ್‌ ಕಂಪನಿಯ ವ್ಯವಸ್ಥಾಪಕ ಅಮರನಾಥ್‌ ರೆಡ್ಡಿ| 13.5 ಲಕ್ಷ ಹಣ ಕಳೆದುಕೊಂಡ ಅಮರನಾಥ್‌ ರೆಡ್ಡಿ| 

ಬೆಂಗಳೂರು(ಅ.13): ರಿಯಲ್‌ ಎಸ್ಟೇಟ್‌ ಕಂಪನಿಯೊಂದಕ್ಕೆ ಕನ್ನಡ ಚಲನಚಿತ್ರ ರಂಗ ಖ್ಯಾತ ನಟಿ ಪ್ರಣೀತಾ ಸುಭಾಷ್‌ ಅವರನ್ನು ರಾಯಭಾರಿಯಾಗಿಸುವುದಾಗಿ ನಂಬಿಸಿ ಕಿಡಿಗೇಡಿಗಳು 13.5 ಲಕ್ಷ ವಂಚಿಸಿರುವ ಘಟನೆ ನಡೆದಿದೆ.

ವಸಂತ ನಗರದ ಎಸ್‌ವಿ ಗ್ರೂಪ್‌ ಆ್ಯಂಡ್‌ ಡೆವಲಪರ್ಸ್‌ ಕಂಪನಿಯ ವ್ಯವಸ್ಥಾಪಕ ಅಮರನಾಥ್‌ ರೆಡ್ಡಿ ಮೋಸ ಹೋಗಿದ್ದು, ಈ ಕೃತ್ಯ ಸಂಬಂಧ ಚೆನ್ನೈ ಮೂಲದ ಮೊಹಮ್ಮದ್‌ ಜುನಾಯತ್‌ ಹಾಗೂ ವರ್ಷಾ ಸೇರಿದಂತೆ ಇತರರ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆರೆಯಿಂದ ಕಷ್ಟಕ್ಕೊಳಗಾದ ಉಡುಪಿ ನೇಕಾರರ ನೆರವಿಗೆ ಪ್ರಣೀತಾ ಸುಭಾಷ್‌

ಕೆಲ ದಿನಗಳ ಹಿಂದೆ ತನ್ನ ಕಂಪನಿ ಪ್ರಚಾರಕ್ಕೆ ಚಲನಚಿತ್ರ ನಟಿಯರನ್ನು ರಾಯಭಾರಿಯಾಗಿ ಮಾಡಿಕೊಳ್ಳಲು ಎಸ್‌ವಿ ಗ್ರೂಪ್‌ನ ಅಮರನಾಥ್‌ ರೆಡ್ಡಿ ಯೋಜಿಸಿದ್ದರು. ಆಗ ತಮ್ಮ ಸ್ನೇಹಿತ ಪ್ರಶಾಂತ್‌ ಮೂಲಕ ಅವರಿಗೆ ಜುನಾಯತ್‌ ಪರಿಚಯವಾಗಿದೆ. ಆ ವೇಳೆ ರೆಡ್ಡಿ ಅವರಿಗೆ ತನಗೆ ನಟಿ ಪ್ರಣೀತಾ ಮ್ಯಾನೇಜರ್‌ ಜತೆ ಸ್ನೇಹವಿದೆ ಎಂದು ಆತ ಹೇಳಿದ್ದ. ಈ ಮಾತು ನಂಬಿದ ಅವರು, ತಮ್ಮ ಕಂಪನಿಗೆ ಪ್ರಣೀತಾ ಅವರನ್ನು ರಾಯಭಾರಿ ಮಾಡಿಸುವಂತೆ ಕೋರಿದ್ದರು. ಇದಕ್ಕಾಗಿ ಚೆನ್ನೈನಿಂದ ಬೆಂಗಳೂರಿಗೆ ಬರುವ ಸಲುವಾಗಿ ಜುನಾಯತ್‌ ಮತ್ತು ವರ್ಷಾ ವಿಮಾನ ಪಯಣದ ಖರ್ಚು ವೆಚ್ಚ ಭರಿಸಿದ್ದರು.

ಅ.6ರಂದು ನಗರಕ್ಕೆ ಬಂದಿದ್ದ ಆರೋಪಿಗಳನ್ನು ಖಾಸಗಿ ಹೋಟೆಲ್‌ವೊಂದರಲ್ಲಿ ರೆಡ್ಡಿ ಭೇಟಿಯಾಗಿದ್ದರು. ಆಗ ವರ್ಷಾಳನ್ನು ಪ್ರಣೀತಾ ಅವರ ಮ್ಯಾನೇಜರ್‌ ಎಂದು ಜುನಾಯತ್‌ ಪರಿಚಯಿಸಿದ್ದ. ಈ ವೇಳೆ ವರ್ಷಾ, ನೀವು ಹಣ ಕೊಟ್ಟರೆ 20 ನಿಮಿಷದೊಳಗೆ ಒಪ್ಪಂದ ಕಾಗದ ಪತ್ರಗಳನ್ನು ಸಿದ್ಧಪಡಿಸುತ್ತೇನೆ ಎಂದಿದ್ದಳು. ಈ ಮಾತಿಗೆ ಸಮ್ಮತಿಸಿದ ರೆಡ್ಡಿ ಅವರು, ಕೂಡಲೇ ಆರೋಪಿಗಳಿಗೆ 13.50 ಲಕ್ಷ ನೀಡಿದ್ದರು. ಹಣ ಪಡೆದ ಬಳಿಕ ಅವರು ಮತ್ತೆ ಸಂಪರ್ಕಕ್ಕೆ ಸಿಗದೆ ತಪ್ಪಿಸಿಕೊಂಡಿದ್ದಾರೆ. ಕೊನೆಗೆ ರೆಡ್ಡಿ ಅವರಿಗೆ ಮೋಸ ಹೋಗಿರುವುದು ಅರವಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
 

click me!