ಬೆಂಗಳೂರಿನಲ್ಲಿ ಭಯೋತ್ಪಾದನೆ ಸಂಚು: ಜೆಎಂಬಿ ಉಗ್ರ ಅರೆಸ್ಟ್

By Suvarna NewsFirst Published Dec 17, 2019, 7:22 AM IST
Highlights

ಬೆಂಗಳೂರು ಭಯೋತ್ಪದನೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರನೋರ್ವನನ್ನು ಬಂಧಿಸಲಾಗಿದೆ. NIA ಉಗ್ರನನ್ನು ಬಂಧಿಸಿದೆ.

ಕೋಲ್ಕತಾ [ಡಿ.17]: 2018ರಲ್ಲಿ ಬೆಂಗಳೂರಲ್ಲಿ ಪತ್ತೆಯಾಗಿದ್ದ ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಸಂಘಟನೆಗೆ ಸೇರಿದ ಉಗ್ರನೊಬ್ಬನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸೋಮವಾರ ಪಶ್ಚಿಮ ಬಂಗಾಳದ ರಘುನಾಥ್‌ಗಂಜ್‌ ಎಂಬಲ್ಲಿ ಬಂಧಿಸಿದೆ. ಬಂಧಿತನನ್ನು ಮೊಸಾರಫ್‌ ಹೊಸ್ಸೇನ್‌ (22) ಅಲಿಯಾಸ್‌ ಹೊಸ್ಸೇನ್‌ ಎಂದು ಗುರುತಿಸಲಾಗಿದೆ.

ಬಂಧಿತನನ್ನು ಮಂಗಳವಾರ ಕೋಲ್ಕತಾದ ವಿಶೇಷ ಎನ್‌ಐಎ ಕೋರ್ಟ್‌ಗೆ ಹಾಜರುಪಡಿಸಲಾಗುವುದು. ಬಳಿಕ ಆತನನ್ನು ಬೆಂಗಳೂರಿಗೆ ಕರೆದೊಯ್ಯಲು ಟ್ರಾನ್ಸಿಟ್‌ ವಾರಂಟ್‌ ಪಡೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಖಚಿತ ಮಾಹಿತಿ ಮೇರೆಗೆ ಮುರ್ಷಿದಾಬಾದ್‌ ಜಿಲ್ಲೆಯ ರಘುನಾಥ್‌ಗಂಜ್‌ನ ಮನೆಯೊಂದರ ಮೇಲೆ ದಾಳಿ ನಡೆಸಿದ ಎನ್‌ಐಎ ತಂಡ, ಹೊಸ್ಸೇನ್‌ನನ್ನು ಬಂಧಿಸಿದೆ.

ಪ್ರಕರಣ ಹಿನ್ನೆಲೆ: 2018ರಲ್ಲಿ ಬೆಂಗಳೂರಿನ ಹೊರವಲಯದ ಚಿಕ್ಕಬಾಣಾವರ ಮನೆಯೊಂದರ ಮೇಲೆ ದಾಳಿ ನಡೆಸಿದ ವೇಳೆ ಸುಧಾರಿತ ಗ್ರೆನೇಡ್‌ಗಳು, ಫ್ಯಾಬ್ರಿಕೇಟೆಡ್‌ ಗ್ರೆನೇಡ್‌ ಕ್ಯಾಪ್‌ಗಳು, ಸುಧಾರಿತ ಸ್ಫೋಟಕ ಸಾಧನಗಳು(ಐಇಡಿ) ಸಕ್ರ್ಯೂಟ್‌ಗಳು, ಒಂದು ಪಿಸ್ತೂಲ್‌, ಶಂಕಿತ ಸ್ಫೋಟಕ ಪುಡಿ ಹಾಗೂ ಇನ್ನಿತರ ಸ್ಫೋಟಕಗಳು ಪತ್ತೆಯಾಗಿದ್ದವು. ವಿಸ್ತೃತ ತನಿಖೆ ವೇಳೆ ಬಾಂಗ್ಲಾದೇಶ ಮೂಲದ ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾದೇಶ್‌ ಎಂಬ ಸಂಘಟನೆ ಗುಪ್ತವಾಗಿ ಕಾರ್ಯಚರಣೆ ನಡೆಸುತ್ತಿದ್ದದ್ದು ಬೆಳಕಿಗೆ ಬಂದಿತ್ತು.

ಈ ತಂಡದ ಭಾಗವಾಗಿದ್ದ ಮೊಸಾರಫ್‌ 2018ರ ಮಾರ್ಚಲ್ಲಿ ಬೆಂಗಳೂರಿಗೆ ಬಂದು ಭಾರತಾದ್ಯಂತ ಸ್ಫೋಟ ನಡೆಸಲು ಸಂಚು ರೂಪಿಸಿದ್ದ. ಈತನ ಜೊತೆಗೆ ಆಸಿಫ್‌ ಇಕ್ಬಾಲ್‌, ಜಹೀದುಲ್‌ ಇಸ್ಲಾಂ, ಕಾದೂರ್‌ ಕಾಝಿ, ಹಬೀಬುರ್‌ ರೆಹಮಾನ್‌, ಅದಿಲ್‌ ಶೇಕ್‌, ನಜೀರ್‌ ಶೇಕ್‌ ಉಗ್ರ ಕೃತ್ಯದಲ್ಲಿ ಕೈಜೋಡಿಸಿದ್ದು. ವಿಧ್ವಂಸಕ ಕೃತ್ಯಕ್ಕಾಗಿ ಹಣ ಸಂಗ್ರಹಿಸಲು ಈ ತಂಡ 2018ರ ಮಾರ್ಚ್ -ಏಪ್ರಿಲ್‌ ಅವಧಿಯಲ್ಲಿ ಎರಡು ದರೋಡೆ ಕೃತ್ಯಗಳನ್ನೂ ನಡೆಸಿತ್ತು.

ಡಿಸೆಂಬರ್ 17ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!