
ಲಖನೌ(ಜೂ.04): ಹುಡುಗನಿಗೆ 23 ವರ್ಷ, ಹುಡುಗಿಗೆ 20 ವರ್ಷ. ಮನೆಯವರು, ಹಿರಿಯರು ಮಾತುಕತೆ ಬಳಿಕ ಮದುವೆ ನಿಶ್ಚಯವಾಗಿತ್ತು. ಕಳೆದೆರಡು ತಿಂಗಳಿನಿಂದ ಮದುವೆಗೆ ಎಲ್ಲಾ ತಯಾರಿ ನಡೆಸಲಾಗಿತ್ತು. ಮದುವೆ ದಿನ ಎಲ್ಲಾ ತಯಾರಿಗಳೊಂದಿಗೆ ಮದುವೆ ಕಾರ್ಯಕ್ರಮ ಸಂಭ್ರಮದಿಂದ ನಡೆದಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ಈ ನವದಂಪತಿಗಳ ಸಂಭ್ರಮದ ಕ್ಷಣ ಹೆಚ್ಚು ಹೊತ್ತು ಇರಲಿಲ್ಲ. ಮದುವೆಯಾದ ಅದೇ ದಿನ ರಾತ್ರಿ ನವದಂಪತಿಗೆ ಹೃದಯಾಘಾತವಾಗಿದೆ. ಪರಿಣಾಮ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಸಂಭ್ರಮದ ಮನೆಯಲ್ಲಿ ಇದೀಗ ಸ್ಮಶಾನ ಮೌನ ಆವರಿಸಿದೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ.
23 ವರ್ಷದ ಪ್ರತಾಪ್ ಯಾದವ್ ಹಾಗೂ 20 ವರ್ಷದ ಪುಷ್ಪಾ ಮದುವೆ ಮೇ.30 ರಂದು ನಡೆದಿತ್ತು. ವಧು ವರರ ಮನೆಯಲ್ಲಿ ಎಪ್ರಿಲ್ ತಿಂಗಳಿನಿಂದಲೇ ತಯಾರಿ ನಡೆಸಲಾಗಿತ್ತು. ಸರಳ ಹಾಗೂ ಸಂಭ್ರಮದಿಂದ ಮದುವೆ ನಡೆದಿತ್ತು. ಇಬ್ಬರ ಮನೆಯವರಿಗೂ ಸಂತಸ ಕ್ಷಣವಾಗಿತ್ತು. ಮದುವೆ ಮುಗಿಸಿದ ಬಳಿಕ ಮನೆಯಲ್ಲಿ ನವದಂಪತಿಗೆ ಸತ್ಕಾರ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.
ಕೆಎಸ್ಆರ್ಟಿಸಿ ಬಸ್ ಓಡಿಸುತ್ತಲೇ ಚಾಲಕ ಸಾವು: ಮುಂದಾಗಿದ್ದೇ ರೋಚಕ
ಈ ಕಾರ್ಯಕ್ರಮಕ್ಕೆ ಆಗಮಿಸಿದ ಸ್ಥಳೀಯರು ನವ ದಂಪತಿಗೆ ಶುಭಕೋರಿದ್ದರು. ಭರ್ಜರಿ ಭೋಜನ ಎಲ್ಲವನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಊಟ ಮುಗಿಸಿದ ನವ ದಂಪತಿಗಳು ಕೋಣೆ ಪ್ರವೇಶಿಸಿದ್ದಾರೆ. ಇತ್ತ ಕುಟುಂಬಸ್ಥರು ಬಾಕಿ ಉಳಿದ ಕೆಲಸದಲ್ಲಿ ಮಗ್ನರಾಗಿದ್ದಾರೆ. ಇತ್ತ ನವ ದಂಪತಿಗಳ ಮೊದಲ ರಾತ್ರಿಗೂ ಮೊದಲೇ ಇಬ್ಬರಿಗೂ ಹೃದಯಾಘಾತವಾಗಿದೆ. ತೀವ್ರ ಹೃದಯಾಘಾತಕ್ಕೆ ಕೆಲವೇ ಕ್ಷಣಗಳ ಅಂತರದಲ್ಲಿ ಇಬ್ಬರ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಇತ್ತ ಕುಟುಂಬಸ್ಥರು ನಿದ್ರೆಗೆ ಜಾರಿದ್ದಾರೆ. ಮರುದಿನ ಎಲ್ಲರೂ ಎದ್ದರೂ ನವದಂಪತಿಗಳು ಎದ್ದೇ ಇಲ್ಲ. ಗಂಟೆ 8 ಕಳೆದರೂ ನವದಂಪತಿಗಳ ಸುಳಿವಿಲ್ಲ. ಕರೆದರೂ, ಬಾಗಿಲು ತಟ್ಟಿದರೂ ಸುಳಿವಿಲ್ಲ. ಅನುಮಾನಗೊಂಡ ಕುಟುಂಬಸ್ಥರು ಬಾಗಿಲು ಜೋರಾಗಿ ಬಡಿದಿದ್ದಾರೆ. ಆದರೂ ಪತ್ತೆ ಇಲ್ಲ. ಹೀಗಾಗಿ ಬಾಗಿಲು ಮುರಿದು ಒಳ ಪ್ರವೇಶಿಸಿದರೆ ಇಬ್ಬರು ಶವವಾಗಿದ್ದಾರೆ.
ಸಾವಿನಲ್ಲೂ ಒಂದಾದ ದಂಪತಿ: ಪತ್ನಿ ಸಾವಿನ ಸುದ್ದಿಕೇಳಿ ಹೃದಯಾಘಾತವಾಗಿ ಗಂಡನೂ ಸಾವು
ಆಘಾತಗೊಂಡ ಕುಟುಂಬಸ್ಥರಿಗೆ ದಿಕ್ಕೆ ತೋಚಿಲ್ಲ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ಕಳುಹಿಸಿದ್ದರು. ಇದೀಗ ಈ ವರದಿ ಬಂದಿದೆ. ಇಬ್ಬರಿಗೆ ಕೆಲವೇ ಅಂತರದಲ್ಲಿ ಹೃದಯಾಘಾತವಾಗಿದೆ. ತೀವ್ರ ಹೃದಯಾಘಾತದಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಖಚಿತವಾಗಿದೆ.
ಸಂಭ್ರಮದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ. ಮದುವೆಯಾದ ದಿನವೇ ಇಬ್ಬರು ಜೊತೆಯಾಗಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇಬ್ಬರ ಕುಟಂಬಸ್ಥರು ಅಂತ್ಯಕ್ರಿಯೆ ನೇರವೇರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ