ದರ್ಶನ್‌ಗೆ ₹40 ಲಕ್ಷ ನೀಡಿದ್ದ ಮೋಹನ್‌, ನಿರ್ದೇಶಕ ಮಿಲನ ಪ್ರಕಾಶ್‌ ವಿಚಾರಣೆ: ರೇಣುಕಾಸ್ವಾಮಿ ಪ್ರಕರಣದಲ್ಲಿ ಇಬ್ಬರಿಗೂ ಗ್ರಿಲ್‌

By Kannadaprabha NewsFirst Published Jul 6, 2024, 6:03 AM IST
Highlights

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಹಾಗೂ ಮಾಜಿ ಉಪ ಮೇಯರ್‌ ಮೋಹನ್ ರಾಜ್‌ ಮತ್ತು ಚಿತ್ರ ನಿರ್ದೇಶಕ ಮಿಲನ ಪ್ರಕಾಶ್‌ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. 

ಬೆಂಗಳೂರು (ಜು.06): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಹಾಗೂ ಮಾಜಿ ಉಪ ಮೇಯರ್‌ ಮೋಹನ್ ರಾಜ್‌ ಮತ್ತು ಚಿತ್ರ ನಿರ್ದೇಶಕ ಮಿಲನ ಪ್ರಕಾಶ್‌ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ನೋಟಿಸ್‌ ಹಿನ್ನೆಲೆಯಲ್ಲಿ ವಿಜಯನಗರ ಉಪವಿಭಾಗದ ಎಸಿಪಿ ಕಚೇರಿಯಲ್ಲಿ ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್‌ ಕುಮಾರ್‌ ಎದುರು ಈ ಇಬ್ಬರು ವಿಚಾರಣೆಗೆ ಹಾಜರಾಗಿದ್ದರು. ಸುಮಾರು ಮೂರು ತಾಸು ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಪ್ರಕರಣ ಸಂಬಂಧ ಹಲವು ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಲಾಗಿದೆ.

ಪ್ರಕರಣದ ತನಿಖೆ ವೇಳೆ ಪೊಲೀಸರು ಆರೋಪಿ ನಟ ದರ್ಶನ್‌ ಬಳಿ 40 ಲಕ್ಷ ರು. ನಗದು ಜಪ್ತಿ ಮಾಡಿದ್ದರು. ವಿಚಾರಣೆ ವೇಳೆ ಈ ಹಣವನ್ನು ಮಾಜಿ ಉಪಮೇಯರ್‌ ಮೋಹನ್‌ ರಾಜ್‌ ಬಳಿ ಪಡೆದಿದ್ದಾಗಿ ದರ್ಶನ್‌ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿ ಮೋಹನ್‌ ರಾಜ್‌ಗೆ ನೋಟಿಸ್‌ ನೀಡಿದ್ದರು. ಅದರಂತೆ ವಿಚಾರಣೆಗೆ ಹಾಜರಾಗಿದ್ದ ಮೋಹನ್‌ ರಾಜ್‌ ಅವರಿಗೆ ದರ್ಶನ್‌ ಹಣ ಪಡೆದ ಉದ್ದೇಶ, ಈ ಹಣದ ಮೂಲ, ರೇಣುಕಾಸ್ವಾಮಿ ಕೊಲೆ ಬಗ್ಗೆ ಮಾಹಿತಿ ಇತ್ತೇ ಇತ್ಯಾದಿ ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿದ್ದಾರೆ.

Latest Videos

ಅಂಥ ತಂದೆಯ ಮುಖವನ್ನು ಆ ಮಗು ನೋಡದಿರುವುದೇ ಒಳ್ಳೆಯದು: ದರ್ಶನ್‌ ಸರ್ ನನ್ನ Inspiration ಎಂದ ತನಿಷಾ ಕುಪ್ಪಂಡ!

ನಿರ್ದೇಶಕನ ವಿಚಾರಣೆ: ರೇಣುಕಾಸ್ವಾಮಿ ಕೊಲೆ ಬಳಿಕ ನಟ ದರ್ಶನ್‌ ಮೈಸೂರಿನಲ್ಲಿ ನಡೆಯುತ್ತಿದ್ದ ಡೆವಿಲ್‌ ಚಿತ್ರದ ಚಿತ್ರೀಕರಣಕ್ಕೆ ತೆರಳಿದ್ದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚಿತ್ರ ನಿರ್ದೇಶಕ ಮಿಲನ ಪ್ರಕಾಶ್‌ ಅವರಿಗೆ ನೋಟಿಸ್‌ ಜಾರಿ ಮಾಡಿ ತನಿಖಾಧಿಕಾರಿ ವಿಚಾರಣೆ ಮಾಡಿದ್ದಾರೆ. ಅಂದು ಮೈಸೂರಿನಲ್ಲಿ ಡೆವಿಲ್‌ ಚಿತ್ರದ ಚಿತ್ರೀಕರಣ ಇತ್ತೇ? ನಟ ದರ್ಶನ್‌ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರೇ ಇತ್ಯಾದಿ ಪ್ರಶ್ನೆಗಳನ್ನು ಮಿಲನ ಪ್ರಕಾಶ್‌ಗೆ ಕೇಳಿ ಹೇಳಿಕೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

click me!