
ರಾಯಚೂರು, (ನ.8): ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮೂರು ತಿಂಗಳ ಗರ್ಭಿಣಿಯಾಗಿರುವ ಆಘಾತಕಾರಿ ಘಟನೆ ನಡೆದಿದ್ದು, ಈ ಪ್ರಕರಣ ಸಂಬಂಧ ಮಸ್ಕಿ ಪೊಲೀಸರ ತನಿಖೆ ವೇಳೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ.
ವೈದ್ಯಕೀಯ ಪರೀಕ್ಷೆಯಲ್ಲಿ ಗರ್ಭಧಾರಣೆ ದೃಢಪಡಿಸಿದ ಬಳಿಕ ಸಂತ್ರಸ್ತೆಗೆ ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಗರ್ಭಪಾತ ನಡೆದಿದ್ದು, ಆರೋಪಿ ಶಿವಮೂರ್ತಿ ಅವರ ಮೇಲೆ ಬಲವಂತದ ದೈಹಿಕ ಸಂಪರ್ಕ ಮತ್ತು ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪ್ರಕರಣ ಸಂಬಂಧ ಮಸ್ಕಿ ಪೊಲೀಸರು ತೀವ್ರವಾಗಿ ತನಿಖೆ ನಡೆಸುತ್ತಿದ್ದು ಈ ವೇಳೆ ಬಾಲಕಿ ಗರ್ಭಿಣಿಯಾಗಿರುವ ವಿಷಯ ಬೆಳಕಿಗೆ ಬಂದಿದೆ. ನಂತರ ಸಂತ್ರಸ್ತೆಯ ಆರೋಗ್ಯಕ್ಕಾಗಿ ರಿಮ್ಸ್ ಆಸ್ಪತ್ರೆಯಲ್ಲಿ ಗರ್ಭಪಾತ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಭ್ರೂಣದ ಸ್ಯಾಂಪಲ್ ಮತ್ತು ಆರೋಪಿ ಶಿವಮೂರ್ತಿ ಅವರ ಡಿಎನ್ಎ ಟೆಸ್ಟ್ಗಾಗಿ ರಿಮ್ಸ್ ಆಸ್ಪತ್ರೆಗೆ ಅಧಿಕೃತ ಮನವಿ ಸಲ್ಲಿಸಿದ್ದಾರೆ. ಇದಲ್ಲದೆ, ಗರ್ಭಪಾತಕ್ಕೆ ಆರೋಪಿ ಟ್ಯಾಬ್ಲೆಟ್ ನೀಡಿದ್ದಾರೆ ಎಂಬ ಆರೋಪದ ಬಗ್ಗೆ ವೈದ್ಯಕೀಯ ಅಭಿಪ್ರಾಯ ಪಡೆಯಲು ಸಂಬಂಧಿತ ಸ್ಯಾಂಪಲ್ಗಳನ್ನು ಲ್ಯಾಬ್ಗೆ ಕಳುಹಿಸಲಾಗಿದೆ. ಆರೋಪಿಯ ಸ್ಯಾಂಪಲ್ ಮುಂದಿನ ದಿನಗಳಲ್ಲಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದಲ್ಲಿ ಆರೋಪಿ ಶಿವಮೂರ್ತಿ ಸಂತ್ರಸ್ತೆಯ ತಂದೆಯ ಚಿಕನ್ ಅಂಗಡಿಯಲ್ಲಿ ಮಾಂಸ ಖರೀದಿಸಿ, ಫೋನ್ ಪೇ ಮೂಲಕ ಹಣ ಪಾವತಿಸಿದ್ದಾನೆ. ಈ ಸಂದರ್ಭದಲ್ಲಿ ಫೋನ್ಪೇಯಿಂದ ಸೇವ್ ಮಾಂಡಿಕೊಂಡ ಮೊಬೈಲ್ನಂಬರ್ಗೆ ಕರೆ ಮಾಡಿ ಬಾಲಕಿಯೊಂದಿಗೆ ಸಂಪರ್ಕ ಸಾಧಿಸಿ, ಲವ್ವಿಡವ್ವಿ ಶುರುವಾಗಿದೆ.
ಸಖಿ ಒನ್ ಕೇಂದ್ರದ ಕಾನೂನು ಸಲಹೆಗಾರ್ತಿ ಸುವರ್ಣ ಅವರ ಹೇಳಿಕೆಯ ಪ್ರಕಾರ, ಆರೋಪಿ ಬಾಲಕಿಯನ್ನು ಪುಸಲಾಯಿಸಿ ಮದುವೆಯಾಗುವುದಾಗಿ ನಂಬಿಸಿ ಗಂಗಾವತಿ ಹುಲಿಗೆಮ್ಮ ದೇವಸ್ಥಾನಕ್ಕೆ ಕರೆದೊಯ್ದು, ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದಾನೆ. ಸದ್ಯ ಸಂತ್ರಸ್ತೆ ಚೇತರಿಸಿಕೊಳ್ಳುತ್ತಿದ್ದು, ಪೋಷಕರಿಂದ ಇನ್ನಷ್ಟು ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ.
ರಿಮ್ಸ್ ವೈದ್ಯರು ಹೇಳೋದೇನು?:
ರಿಮ್ಸ್ ಆಸ್ಪತ್ರೆಯ ವೈದ್ಯೆ ಡಾ. ದೀಪಶ್ರೀ ಪಾಟೀಲ್ ಅವರು ಈ ಪ್ರಕರಣದ ಬಗ್ಗೆ ಮಾತನಾಡಿದ್ದು, ಸಂತ್ರಸ್ತ ಬಾಲಕಿಗೆ ಆಗಲೇ ರಕ್ತಸ್ರಾವ ಆಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆ ನೀಡಿದ ನಂತರ ಗರ್ಭಪಾತ ಸಂಭವಿಸಿದೆ. ಆರೋಪಿಯಿಂದ ನೀಡಲಾದ ಮಾತ್ರೆಯಿಂದ ಗರ್ಭಪಾತಕ್ಕೆ ಕಾರಣವಾಯಿತೇ ಎಂಬ ಶಂಕೆಯನ್ನು ತನಿಖೆಗೆ ಒಳಪಡಿಸಲಾಗಿದ್ದು, ಗರ್ಭಕೋಶ ಸಂಬಂಧಿತ ಸ್ಯಾಂಪಲ್ಗಳು ಸೇರಿದಂತೆ ಎಲ್ಲಾ ನಮೂನೆಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಪ್ರಕರಣದ ತನಿಖೆ ಚುರುಕುಗೊಳಿಸಿದ ಮಸ್ಕಿ ಪೊಲೀಸರು:
ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಆರೋಪಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಸಾರ್ವಜನಿಕರಲ್ಲಿ ಈ ಘಟನೆಯಿಂದ ಆತಂಕ ಮತ್ತು ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ