
ಮಂಡ್ಯ (ಜೂ.04): ರಸ್ತೆಯಲ್ಲಿ ನಿಧಾನಗತಿಯಲ್ಲಿ ಚಲಿಸುತ್ತಿದ್ದ ಲಾರಿಗೆ ವೇಗವಾಗಿ ಬಂದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಈ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ದುರ್ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಭಾನುವಾರ ಬೆಳಗ್ಗಿನ ಜಾವ ಬೆಂಗಳೂರು- ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರಿನ ನೆಲಮಂಗಲದ ನಾಲ್ವರು ಯುವಕರು ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಲಾರಿ ನಿಧಾನವಾಗಿ ಸಾಗುತ್ತಿತ್ತು. ಇದನ್ನು ಗಮನಿಸದೇ ವೇಗವಾಗಿ ಹೋಗುತ್ತಿದ್ದ ಕಾರು ಹಿಂಬದಿಯಿಂದ ಲಾರಿಗೆ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಅರ್ಧ ಭಾಗ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಇನ್ನು ಇತರೆ ವಾಹನ ಸವಾರರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಪೊಲೀಸರು ಬಂದು ಕಾರಿನಲ್ಲಿದ್ದ ಯುವಕರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ, ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಯುವಕರು ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಇನ್ನು ಕಾರಿನಲ್ಲಿದ್ದ ಮೃತದೇಹವನ್ನು ಪೊಲೀಸರು ಹೊರತೆಗೆದು ನಾಗಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಕುಟುಂಬ ಸಮೇತ ವಿಶ್ವೇಶ್ವರಯ್ಯ ನಾಲೆಗೆ ಬಿದ್ದ ಕಾರು: ಪ್ರಾಣ ಉಳಿದಿದ್ದೇ ದೊಡ್ಡ ಪವಾಡ
ನೆಲಮಂಗಲ ಮೂಲದ ನಾಲ್ವರು ಸಾವು: ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಹೋಗುತ್ತಿದ್ದ ಕಾರು ಮತ್ತು ಲಾರಿಯ ನಡುವೆ ನಾಗಮಂಗಲ ತಾಲೂಕಿನ ತಿರುಮಲಾಪುರ ಗೇಟ್ ಬಳಿ ಘಟನೆ ನಡೆದಿದೆ. ಲಾರಿಗೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ರಭಸಕ್ಕೆ ಕಾರು ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದಿದ್ದು ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನೆಲಮಂಗಲ ಮೂಲದ ಹೇಮಂತ್, ಶರತ್, ನವೀನ್ ಮೃತ ದುರ್ದೈವಿಗಳು ಎಂದು ತಿಳಿದು ಬಂದಿದ್ದು, ಮತ್ತೊಬ್ಬನ ಹೆಸರು ತಿಳಿದುಬಂದಿಲ್ಲ. ಸ್ಥಳಕ್ಕೆ ನಾಗಮಂಗಲ ಡಿವೈಎಸ್ಪಿ, ಸಿಪಿಐ ಹಾಗೂ ಬೆಳ್ಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಾಯಾಳು ಯುವಕರನ್ನು ಯಾರೂ ರಕ್ಷಣೆ ಮಾಡಲಿಲ್ಲ: ಇನ್ನು ದೇಶದಲ್ಲಿ ಬೆಳಗ್ಗಿನ ಜಾವವೇ ನಿದ್ದೆ ಮಂಪರು ಹಾಗೂ ಮುಸುಕಿನ ವಾತಾವರಣ ಹೆಚ್ಚಾಗಿರುವುದರಿಂದ ಈ ವೇಳೆಯೇ ಅತ್ಯಧಿಕ ಅಪಘಾತ ಸಂಭವಿಸುತ್ತವೆ. ಇದೇ ರೀತಿ ಬೆಳ್ಳಂಬೆಳಗ್ಗೆ ನೆಲಮಂಗಲದಿಂದ ಮೈಸೂರಿಗೆ ಹೊರಟಿದ್ದ ಯುವಕರು ಕೂಡ ಬೆಳಗ್ಗಿನ ಜಾವ ನಿಧಾನಗತಿಯಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಗೆ ಕಾರಿನಲ್ಲಿ ಹೋಗಿ ಡಿಕ್ಕಿ ಹೊಡೆದಿದ್ದಾರೆ. ಬೆಳಗ್ಗೆ 5 ಗಂಟೆಗೆ ಘಟನೆ ನಡೆದರೂ ಯುವಕರನ್ನು ರಕ್ಷಣೆ ಮಾಡಲು ಯಾರೊಬ್ಬರೂ ಮುಂದೆ ಬಂದಿಲ್ಲ. ಇನ್ನು ಅಪಘಾತದ ನಂತರ ಲಾರಿ ಚಾಲಕನಾದರೂ ಬಂದು ಯುವಕರ ರಕ್ಷಣೆ ಮಾಡುವುದನ್ನು ಬಿಟ್ಟು ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಅಲ್ಲಿಂದ ಪರಾರಿ ಆಗಿದ್ದಾನೆ. ಇನ್ನು ಬಾಳಿ ಬದುಕಬೇಕಾಗಿದ್ದ ಯುವಕರು ನಡುರಸ್ತೆಯಲ್ಲೇ ಪ್ರಾಣ ಚೆಲ್ಲಿದ್ದಾರೆ.
ಕರೆಂಟ್ ಹೊಡೆದು ಕಂಬದಲ್ಲೇ ಒದ್ದಾಡಿ ಪ್ರಾಣಬಿಟ್ಟ ಜೆಸ್ಕಾಂ ಲೈನ್ಮ್ಯಾನ್!
ಮಂಡ್ಯದ ವಿಸಿ ನಾಲೆಗೆ ಬಿದ್ದ ಕಾರು ನಾಲ್ವರು ಪ್ರಾಣಾಪಾಯದಿಂದ ಪಾರು: ಮಂಡ್ಯ (ಜೂ.04): ಮತ್ತೊಂದೆಡೆ ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜ ಸಾಗರ (ಕೆಆರ್ಎಸ್) ಜಲಾಶಯದಿಂದ ನೀರು ಹರಿಯುವ ನಾಲೆಗಳು ಬಹುತೇಕ ರಸ್ತೆ ಬದಿಯಿದ್ದರೂ ಅವುಗಳಿಗೆ ತಡೆಗೋಡೆ ಅಳವಡಿಸಿಲ್ಲ. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸ್ವಲ್ಪ ಎಡವಟ್ಟಾದರೂ ಕಾವೇರಿ ನಾಲೆಗೆ ಬಿದ್ದು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಭಾನುವಾರ ಕಾರಿನಲ್ಲಿ ಕುಟುಂಬ ಸಮೇತರಾಗಿ ಹೋಗುತ್ತಿದ್ದ ಕ್ರೇಟಾ ಕಾರು ನಿಯಂತ್ರಣ ತಪ್ಪಿ ವಿಶ್ವೇಶ್ವರಯ್ಯ ನಾಲೆಗೆ ಬಿದ್ದಿದೆ. ಕೂಡಲೇ ಸ್ಥಳೀಯರು ಬಂದು ನಾಲೆಗೆ ಬಿದ್ದಿದ್ದ ಕುಟುಂಬ ಸದಸ್ಯರನ್ನು ರಕ್ಷಣೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ