ಅರೆಸ್ಟ್‌ ಮಾಡ್ತಿದ್ದಾರೆಂದು ಎಸ್‌ಐ ಕಿವಿ ಕಚ್ಚಿದ ಕುಡುಕ: ಆಸ್ಪತ್ರೆಗೆ ದಾಖಲಾದ ಪೊಲೀಸ್‌..!

By BK AshwinFirst Published Feb 4, 2023, 8:16 PM IST
Highlights

ಬಳಿಕ, ಆತನನ್ನು ಸ್ಥಳದಿಂದ ವಶಕ್ಕೆ ಪಡೆದಿದ್ದು, ಪೊಲೀಸ್ ಠಾಣೆಗೆ ಕರೆದೊಯ್ಯುವಾಗ ಎಸ್‌ಐ (SI) ವಾಹನದ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಕೋಪದಿಂದ ರೋಡ್ರಿಗಸ್, ತನ್ನ ಮುಂದೆ ಕೂತಿದ್ದ ಎಸ್‌ಐ ವಿಷ್ಣು ಪ್ರಸಾದ್ ಅವರ ಬಲ ಕಿವಿಯನ್ನು ಕಚ್ಚಿ ಗಾಯಗೊಳಿಸಿದ್ದಾನೆ.

ಕಾಸರಗೋಡು, ಕೇರಳ (ಫೆಬ್ರವರಿ 4, 2023): ಬೈಕ್‌ ಅಪಘಾತ ಮಾಡಿದ ಆರೋಪಿ ಪೊಲೀಸ್ ವಾಹನದಲ್ಲಿ ಕರೆದೊಯ್ಯುತ್ತಿದ್ದ ವೇಳೆ, ತನ್ನನ್ನು ಬಂಧಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಸಬ್ ಇನ್ಸ್‌ಪೆಕ್ಟರ್‌ನ ಬಲ ಕಿವಿಯನ್ನು ಕಚ್ಚಿದ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಶನಿವಾರ ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಗುರುವಾರ ರಾತ್ರಿ ನಡೆದ ಈ ಅನಿರೀಕ್ಷಿತ ದಾಳಿಯಲ್ಲಿ ಕಾಸರಗೋಡಿನ ಟೌನ್ ಪೊಲೀಸ್ ಠಾಣೆಯ ಎಸ್‌ಐ ವಿಷ್ಣು ಪ್ರಸಾದ್ ಗಾಯಗೊಂಡಿದ್ದು, ತಕ್ಷಣ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಆರೋಪಿ ಸ್ಟೇನಿ ರೋಡ್ರಿಗಸ್ ಬೈಕ್ ಅಪಘಾತ (Bike Accident) ಮಾಡಿದ್ದು, ಈ ವೇಳೆ ಆತ ಪಾನಮತ್ತ ಸ್ಥಿತಿಯಲ್ಲಿದ್ದ (Drunk State) ಎಂದು ತಿಳಿದುಬಂದಿದೆ. ಅಲ್ಲದೆ, ಅಪಘಾತದ ಸ್ಥಳದಲ್ಲಿ ಆತ ಗಲಾಟೆ ಮಾಡಿದ್ದಾನೆ.  ಈ ಹಿನ್ನೆಲೆ ಸ್ಥಳದಲ್ಲಿ (Place) ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು, ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ಆರೋಪಿಯನ್ನು ಪೊಲೀಸ್ ಠಾಣೆಗೆ (Police Station) ಕರೆದೊಯ್ಯಲು ನಿರ್ಧರಿಸಿದರು. ಬಳಿಕ, ಆತನನ್ನು ಸ್ಥಳದಿಂದ ವಶಕ್ಕೆ ಪಡೆದಿದ್ದು, ಪೊಲೀಸ್ ಠಾಣೆಗೆ ಕರೆದೊಯ್ಯುವಾಗ ಎಸ್‌ಐ (SI) ವಾಹನದ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಕೋಪದಿಂದ ಸ್ಟೇನಿ ರೋಡ್ರಿಗಸ್, ತನ್ನ ಮುಂದೆ ಕೂತಿದ್ದ ಎಸ್‌ಐ ವಿಷ್ಣು ಪ್ರಸಾದ್ ಅವರ ಬಲ ಕಿವಿಯನ್ನು ಕಚ್ಚಿ ಗಾಯಗೊಳಿಸಿದ್ದಾನೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಪುಂಡರ ಹಾವಳಿ: ಕುಡಿದ ಮತ್ತಿನಲ್ಲಿ ಯುವಕನಿಗೆ ಥಳಿತ

ನಂತರ, ಸಮೀಪದ ಆಸ್ಪತ್ರೆಗೆ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನಂತರ ಎಸ್‌ಐ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಮತ್ತು ನಂತರ ಆರೋಪಿ ವಿರುದ್ಧ ಕೇಸ್‌ ದಾಖಲಿಸಲಾಗಿದೆ ಎಂದು ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮಧ್ಯೆ, ಆರೋಪಿ ಇದೇ ರೀತಿಯಲ್ಲಿ ಕುಡಿದು ಈ ಹಿಂದೆಯೂ ಗಲಾಟೆ ಮಾಡಿದ್ದ ಎಂಬುದು ಸಹ ಪೊಲೀಸರ ಬೆಳಕಿಗೆ ಬಂದಿದೆ. 

ಕಳೆದ ವರ್ಷ, ಮಹಾರಾಷ್ಟ್ರದ ನಾಗ್ಪುರದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯಲ್ಲಿ ಆರೋಪಿಯನ್ನು ವಿಡಿಯೋ ಚಿತ್ರೀಕರಣ ಮಾಡುವುದನ್ನು ತಡೆಯಲು ಅಧಿಕಾರಿ ಪ್ರಯತ್ನಿಸಿದ ನಂತರ ಪೊಲೀಸ್‌ ಅಧಿಕಾರಿಯನ್ನು ಕಚ್ಚಿದ್ದ ಇದೇ ರೀತಿಯ ಪ್ರಕರಣ ವರದಿಯಾಗಿತ್ತು. ಸೆಪ್ಟೆಂಬರ್ 2022 ರಲ್ಲಿ ಉಮ್ರೆದ್ ತಾಲೂಕಿನ ಮಕರಧೋಕ್ಡಾ ಪೊಲೀಸ್ ಪೋಸ್ಟ್‌ನಲ್ಲಿ ಈ ಘಟನೆ ಸಂಭವಿಸಿತ್ತು. ನಂತರ ಆತ ತನ್ನ ದ್ವಿಚಕ್ರ ವಾಹನದಲ್ಲಿ ಸ್ಥಳದಿಂದ ಪರಾರಿಯಾಗಿದ್ದ ಎಂದೂ ತಿಳಿದುಬಂದಿತ್ತು.

ಇದನ್ನೂ ಓದಿ: ಕುಡುಕ ಗಂಡನಿಂದ ಪತ್ನಿ ಮತ್ತು ಇಬ್ಬರು ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ: ಇಬ್ಬರು ಸಾವು

click me!