ಲಾರಿ ಬೈಕ್ ಡಿಕ್ಕಿ: ಬೈಕ್‌ ಸವಾರ ಸಾವು

By Web DeskFirst Published May 31, 2020, 9:53 AM IST
Highlights

ಸಾಗರದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಸಾಗರ: ತಾಲೂಕಿನ ಹರಡಿಕೆ ಗ್ರಾಮದ ಬಳಿ ಲಾರಿ ಮತ್ತು ಬೈಕ್‌ ನಡುವೆ ಡಿಕ್ಕಿ ಸಂಭವಿಸಿ ಬೈಕ್‌ ಸವಾರ ಮೃತಪಟ್ಟಘಟನೆ ಶುಕ್ರವಾರ ರಾತ್ರಿ ನಡೆದಿದೆ. ಸಾಗರದ ಮಂಕೋಡ್‌ ವಾಸಿ ಗಣೇಶ್‌ ಆಚಾರ್‌ (48) ಮೃತಪಟ್ಟವರು. ಗಣೇಶ್‌ ಆಚಾರ್‌ ತಮ್ಮ ಪತ್ನಿ ಜೊತೆ ಹೋಗುತ್ತಿದ್ದಾಗ ಹರಡಿಕೆ ಶಾಲೆ ಬಳಿ ವೇಗವಾಗಿ ಬಂದ ಲಾರಿಯೊಂದು ಗುದ್ದಿದೆ. ಲಾರಿ ಗುದ್ದಿದ ರಭಸಕ್ಕೆ ಗಣೇಶ್‌ ಆಚಾರ್‌ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾಗೂ ಅವರ ಪತ್ನಿ ದೀಪಾ ಸಹ ಗಾಯಗೊಂಡಿದ್ದಾರೆ.

108 ವಾಹನ ಮೂಲಕ ಇಬ್ಬರನ್ನೂ ಸಾಗರ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಇಬ್ಬರನ್ನೂ ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಗಣೇಶ್‌ ಆಚಾರ್‌ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದರು. ಪತ್ನಿ ದೀಪಾ ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ.

ಸಾಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

ಇದೇ ಸಂದರ್ಭದಲ್ಲಿ ಗಣೇಶ್‌ ಆಚಾರ್‌ಗೆ ಡಿಕ್ಕಿ ಹೊಡೆದ ಲಾರಿ ಪರ್ವೀಜ್ ಎಂಬುವವರ ಬೈಕ್‌ಗೆ ಸಹ ಡಿಕ್ಕಿ ಹೊಡೆದಿದೆ. ಸಾಗರದ ರಾಮನಗರ ನಿವಾಸಿ ಪರ್ವೀಜ್ ಮತ್ತು ಇಮ್ತಿಯಾಜ್‌ ಬೈಕ್‌ನಲ್ಲಿ ಹರಿದ್ರಾವತಿಯಿಂದ ಗಾರೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಅದೇ ಲಾರಿ ಡಿಕ್ಕಿ ಹೊಡೆದಿದ್ದು ಪರ್ವೀಜ್ ಮತ್ತು ಇಮ್ತಿಯಾಜ್‌ ಗಾಯಗೊಂಡಿದ್ದಾರೆ. ಗಾಯಾಳುಗಳು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕೆ ಸಂಬಂಧಪಟ್ಟಂತೆ ಲಾರಿ ಚಾಲಕನ ವಿರುದ್ದ ಪರ್ವೀಜ್ ಮತ್ತು ಗಣೇಶ್‌ ಆಚಾರ್‌ ಪುತ್ರ ಮೋಹನ್‌ ಜಿ. ಗ್ರಾಮಾಂತರ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದಾರೆ.

ಪಿಕಪ್‌ ವಾಹನ ಪಲ್ಟಿ: ಚಾಲಕ ಸ್ಥಳದಲ್ಲೇ ಸಾವು

ಸಾಗರ: ತಾಲೂಕಿನ ಬಿ.ಎಚ್‌.ರಸ್ತೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಅನಾನಸ್‌ ತುಂಬಿದ ಪಿಕಪ್‌ ವಾಹನ ಪಲ್ಟಿಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೆ ಮೃತಪಟ್ಟಘಟನೆ ಶುಕ್ರವಾರ ನಡೆದಿದೆ.

ಮೃತನನ್ನು ಹಾಸನದ ಪುನೀತ್‌ (25) ಎಂದು ಗುರುತಿಸಲಾಗಿದೆ. ಪುನೀತ್‌ ಅನಾನಸ್‌ ಲೋಡ್‌ಗಾಗಿ ಶುಕ್ರವಾರ ಬೆಳಗ್ಗೆ ತನ್ನ ಪಿಕಪ್‌ ವಾಹನದಲ್ಲಿ ಅದರಂತೆ ಗ್ರಾಮಕ್ಕೆ ಬಂದಿದ್ದನು. ಸಂಜೆ ಅನಾನಸ್‌ ಲೋಡ್‌ ಮಾಡಿಕೊಂಡು ಹಾಸನಕ್ಕೆ ಹೋಗುತ್ತಿದ್ದಾಗ ಐಗಿನಬೈಲ್‌ ಗ್ರಾಮದ ಬಳಿ ನಿಯಂತ್ರಣ ತಪ್ಪಿ ಪಿಕಪ್‌ ವಾಹನ ಪಲ್ಟಿಹೊಡೆದಿದ್ದು, ಪುನೀತ್‌ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ. ಪಿಕಪ್‌ ವಾಹನದಲ್ಲಿದ್ದ ಮತ್ತೊಬ್ಬ ಉದಯಕುಮಾರ್‌ ಗಂಭೀರವಾಗಿ ಗಾಯಗೊಂಡಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!