ಸಾಲದ ಕಿರುಕುಳಕ್ಕೆ ಬೇಸತ್ತು ತುಂಗಭದ್ರಾ ಕಾಲುವೆಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಪತ್ರಕರ್ತ

Published : Dec 25, 2022, 11:26 AM IST
ಸಾಲದ ಕಿರುಕುಳಕ್ಕೆ ಬೇಸತ್ತು ತುಂಗಭದ್ರಾ ಕಾಲುವೆಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ  ಪತ್ರಕರ್ತ

ಸಾರಾಂಶ

 ದಿನಪತ್ರಿಕೆಯೊಂದರ ವರದಿಗಾರರೊಬ್ಬರು ಸಾಲಗಾರರ ಕಿರುಕುಳದಿಂದ ಬೇಸತ್ತು ತುಂಗಭದ್ರಾ ಕಾಲುವೆಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ವಿವೇಕಾನಂದ ಕಾಲನಿಯ ಪತ್ರಕರ್ತ ಬಂಡೆರಾವ್‌ ಮುಖ್ತೇದಾರ್‌ ಎನ್ನುವವರು ದಾಸನಾಳ ಬಳಿ ಇರುವ ತುಂಗಭದ್ರಾ ನಾಲೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಗಂಗಾವತಿ (ಡಿ.25) : ಇಲ್ಲಿಯ ದಿನಪತ್ರಿಕೆಯೊಂದರ ವರದಿಗಾರ ಸಾಲಗಾರರ ಕಿರುಕುಳದಿಂದ ಬೇಸತ್ತು ತುಂಗಭದ್ರಾ ಕಾಲುವೆಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಇಲ್ಲಿಯ ವಿವೇಕಾನಂದ ಕಾಲನಿಯ ಪತ್ರಕರ್ತ ಬಂಡೆರಾವ್‌ ಮುಖ್ತೇದಾರ್‌ ಎನ್ನುವವರು ದಾಸನಾಳ ಬಳಿ ಇರುವ ತುಂಗಭದ್ರಾ ನಾಲೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮಕ್ಕಳ ಶಿಕ್ಷಣ ಹಾಗೂ ಇತರ ಕಾರಣಕ್ಕಾಗಿ ಹಲವು ತಿಂಗಳ ಹಿಂದೆ ಸ್ಥಳೀಯ ಕೆಲವರಲ್ಲಿ ಲಕ್ಷಾಂತರ ರು. ಸಾಲ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಸಾಲ ನೀಡಿದವರು ಕಿರುಕುಳ ನೀಡುತ್ತಿದ್ದರು ಎಂದು ಬಂಡೆರಾವ್‌ ನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಒಂದು ವಾರದ ಹಿಂದೆ ಮನೆ ಬಿಟ್ಟು ಹೋಗಿದ್ದರು. ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಶನಿವಾರ ಬೆಳಗ್ಗೆ ಕೆಲವು ಪತ್ರಕರ್ತರು ಹಾಗೂ ಸಂಬಂಧಿಕರಿಗೆ ವಾಟ್ಸ್‌ಆ್ಯಪ್‌ ಸಂದೇಶ ರವಾನಿಸಿದ್ದರು. ಎಚ್ಚೆತ್ತುಕೊಂಡ ಪತ್ರಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಹೊಸ ವರ್ಷದಲ್ಲಿ ಸಾಲಮುಕ್ತರಾಗಲು ಬಯಸಿದ್ದೀರಾ? ಹಾಗಾದ್ರೆ ಈ 5 ಟಿಪ್ಸ್ ಪಾಲಿಸಿ

ಮಾಹಿತಿಯಲ್ಲಿ ಏನಿತ್ತು?:

ತಾನು ದಾಸನಾಳ ತುಂಗಭದ್ರಾ ನದಿ ಸೇತುವೆ ಬಳಿ ಬೆಳಗ್ಗೆ 11ರಿಂದ 12 ಗಂಟೆಯೊಳಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಂಡೆರಾವ್‌ ಸಂದೇಶದಲ್ಲಿ ತಿಳಿಸಿದ್ದರು. ಸಾಲಗಾರರು ಕಿರುಕುಳ ತಾಳಲಾರದೆ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಹೇಳಿದ್ದರು. ಇದು ನನ್ನ ಎಲ್ಲ ಆತ್ಮೀಯರಿಗೆ ಮತ್ತು ಬಂಧುಗಳಿಗೆ ಕೊನೆಯ ನಮಸ್ಕಾರಗಳು ಎಂದು ಹೇಳಿದ್ದರು.

ಪೊಲೀಸರಿಂದ ರಕ್ಷಣೆ:

ಪತ್ರಕರ್ತರಿಂದ ಮಾಹಿತಿ ಪಡೆದ ನಗರ ಪೊಲೀಸ್‌ ಠಾಣೆಯ ಪಿಐ ವೆಂಕಟಸ್ವಾಮಿ ಸಿಬ್ಬಂದಿಯೊಂದಿಗೆ ದಾಸನಾಳ ಸೇತುವೆಯ ತುಂಗಭದ್ರಾ ಕಾಲುವೆ ಬಳಿ ದೌಡಾಯಿಸಿದರು. ಬಂಡೆರಾವ್‌ ಅವರಿಗೆ ಹುಡುಕಾಟ ನಡೆಸಿದರು. ದಾಸನಾಳ ಸೇತುವೆಯಿಂದ ವಾಣಿಭದ್ರೇಶ್ವರ ಮಾರ್ಗದ ಕಾಲುವೆಯ ಬಳಿ ಇದ್ದ ಪತ್ರಕರ್ತ ಬಂಡೆರಾವ್‌ ಅವರು ಪೊಲೀಸ್‌ ಜೀಪ್‌ ನೋಡಿ ಕಾಲುವೆಗೆ ಜಿಗಿದಿದ್ದಾರೆ. ಅದನ್ನು ಗಮನಿಸಿದ ಪೊಲೀಸ್‌ ಜೀಪ್‌ ಚಾಲಕ ನಿಂಗಪ್ಪ ಎಂ. ಹೆಬ್ಬಾಳ ಪೊಲೀಸ್‌ ವಸ್ತ್ರ ಕಳಚಿ ಕಾಲುವೆಗೆ ಜಿಗಿದು ಬಂಡೆರಾವ್‌ ಅವರನ್ನು ರಕ್ಷಣೆ ಮಾಡಿ ದಡಕ್ಕೆ ಸೇರಿಸಿದ್ದಾರೆ. ಸ್ಥಳೀಯರು ಸಹ ದಡಕ್ಕೆ ತರಲು ಸಹಕರಿಸಿದರು. ಕಾಲುವೆಯಲ್ಲಿ ಅಧಿಕ ನೀರು ಕುಡಿದಿದ್ದರು. ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಚೇತರಿಸಿಕೊಂಡರು. ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಯಸ್‌ ಬ್ಯಾಂಕ್‌ನ 48000 ಕೋಟಿ ಮೌಲ್ಯದ ಸಾಲ ವರ್ಗ

ಬಹುಮಾನ ಘೋಷಣೆ

ಪತ್ರಕರ್ತ ಬಂಡೆರಾವ್‌ ಅವರನ್ನು ರಕ್ಷಣೆ ಮಾಡಿದ ಪೊಲೀಸರ ತಂಡಕ್ಕೆ ಎಸ್‌ಪಿ ಅರುಣಾಂಗ್ಷು ಗಿರಿ ಬಹುಮಾನ ಘೋಷಣೆ ಮಾಡಿದ್ದಾರೆ. ನಗರ ಪೊಲೀಸ್‌ ಇನ್‌ಸ್ಪೆಕ್ಟರ್‌ ವೆಂಕಟಸ್ವಾಮಿ ನೇತೃತ್ವದಲ್ಲಿ ಸಿ.ಎಚ್‌.ಸಿ. ಮರಿಶಾಂತಗೌಡ, ನಿಂಗಪ್ಪ, ಚಿರಂಜಿವಿ ಅವರು ಕಾಲುವೆ ಬಳಿ ಹೋಗಿ ಬಂಡೆರಾವ್‌ ಅವರನ್ನು ಪತ್ತೆ ಹಚ್ಚಿದ್ದಾರೆ. ಜೀಪ್‌ ಚಾಲಕ ನಿಂಗಪ್ಪ ಅವರು ಕಾಲುವೆಗೆ ಜಿಗಿದು ನೀರಿನಲ್ಲಿ ಮುಳುಗೇಳುತ್ತಿದ್ದ ಬಂಡೆರಾವ್‌ ಅವರನ್ನು ರಕ್ಷಿಸಿದ್ದಾರೆ. ಅವರ ಕರ್ತವ್ಯಪ್ರಜ್ಞೆಗೆ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಶ್ಲಾಘಿಸಿ, ಬಹುಮಾನ ಘೋಷಿಸಿದ್ದಾರೆ. ಅಲ್ಲದೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ದುಡುಕಿ ಆತ್ಮಹತ್ಯೆಯಂತಹ ಕೆಲಸಕ್ಕೆ ಕೈ ಹಾಕಿ, ತಮ್ಮ ಅಮೂಲ್ಯವಾದ ಜೀವ ಕಳೆದುಕೊಳ್ಳಬಾರದು. ತಮ್ಮನ್ನು ನಂಬಿದವರನ್ನು ಅನಾಥರನ್ನಾಗಿ ಮಾಡಿ ತೊಂದರೆಗೆ ತಳ್ಳಬಾರದು ಎಂದು ಮನವಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ