
ಕೊಪ್ಪಳ (ಮೇ 28): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಕೇರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ರಸ್ತೆಯಲ್ಲಿ ಹೋಗುವಾಗ ಕಾರಿನ ಟೈರ್ ಸ್ಪೋಟಗೊಂಡು ಲಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 6 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಕಳೆದೊಂದು ವಾರದಿಂದ ರಾಜ್ಯಾದ್ಯಂತ ಭೀಕರ ಅಪಘಾತಗಳು ಸಂಭವಿಸುತ್ತಿವೆ. ಅದರಲ್ಲಿ ಬಸ್, ಕಾರು, ಲಾರಿ, ಬೈಕ್ಗಳು ಸೇರಿ ಬಹುತೇಕ ವಾಹನಗಳು ನಜ್ಜುಗುಜ್ಜಾಗಿ ಪ್ರಾಣಹಾನಿ ಸಂಭವಿಸುವ ಪ್ರಕರಣಗಳೇ ಹೆಚ್ಚಾಗತ್ತಿವೆ. ಇಂದ ಸಂಜೆ ಕೊಪ್ಪಳದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟವರನ್ನು ರಾಜಪ್ಪ ಬನಗೋಡಿ, ರಾಘವೇಂದ್ರ, ಅಕ್ಷಯ, ಶಿವಶರಣ, ಜಯಶ್ರೀ, ರಾಖಿ, ರಶ್ಮಿಕಾ ಎಂದು ಗುರುತಿಸಲಾಗಿದೆ. ವಿಜಯಪುರಿಂದ ಬೆಂಗಳೂರಿಗೆ ಇಂಡಿಕಾ ಕಾರಿನಲ್ಲಿ ಹೋಗುವಾಗ ಕುಷ್ಟಗಿ ಹೆದ್ದಾರಿಯಲ್ಲಿ ಕಾರಿನ ಟೈರ್ ಸ್ಪೋಟಗೊಂಡಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಮುಂದೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಎಲ್ಲರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ದೇಹಗಳು ಕೂಡ ನಜ್ಜುಗುಜ್ಜಾಗಿ ಮೈಯಲ್ಲಿನ ಮೂಳೆಗಳೆಲ್ಲ ಪುಡಿ- ಪುಡಿಯಾಗಿವೆ.
Bengaluru- ಕಣ್ಣಮುಂದೆಯೇ ಕೆರೆಯಲ್ಲಿ ಮುಳುಗಿದ ಸ್ನೇಹಿತ
ಡಿವೈಡರ್ ದಾಟಿಹೋಗಿ ಗುದ್ದಿದ ಕಾರು: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಕೇರಿ ಬಳಿ ಘಟನೆ ನಡೆದಿದೆ. ಕಾರಿನಲ್ಲಿದ್ದ ಆರು ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇಂಡಿಕಾ ಕಾರ್ ನ ಟೈರ್ ಸ್ಪೋಟಗೊಂಡ ಹಿನ್ನಲೆಯಲ್ಲಿ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆಗ ಕಾರು ನಿಯಂತ್ರಣ ತಪ್ಪಿ ರಸ್ತೆಯ ಇನ್ನೊಂದು ಬದಿಗೆ ಎಗರಿದ ಕಾರು ಎದುರಗಡೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಇನ್ನು ಕಾರಿನಲ್ಲಿ ಮೃತದೇಹಗಳು ನಜ್ಜುಗುಜ್ಜಾಗಿದ್ದು, ಅವುಗಳನ್ನು ಹೊರಗಡೆ ತೆಗೆಯಲು ಹರಸಾಹಸ ಪೊಲೀಸರು ಹಾಗೂ ಸ್ಥಳೀಯರು ಹರಸಾಹಸಪಡುತ್ತಿದ್ದಾರೆ. ಈ ಘಟನೆಯು ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ: ಕೊಪ್ಪಳ ಜಿಲ್ಲೆಯ ಕುಷ್ಟಗಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಎಳೆಯ ಮಕ್ಕಳು ಸೇರಿದಂತೆ 6 ಮಂದಿ ಸಾವಿಗೀಡಾದ ಸುದ್ದಿ ತಿಳಿದು ಎದೆ ನಲುಗಿತು. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಮೃತ ದುರ್ದೈವಿಗಳ ಕುಟುಂಬಕ್ಕೆ ಸರ್ಕಾರದಿಂದ ತಲಾ ರೂ. 2 ಲಕ್ಷ ಪರಿಹಾರ ನೀಡಲಾಗುವುದು. ಅತಿಯಾದ ವೇಗ, ಅಜಾಗರೂಕತೆಗಳೆ ಇಂಥ ಅಪಘಾತಗಳಿಗೆ ಕಾರಣ, ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ, ಸುರಕ್ಷಿತವಾಗಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಧರ್ಮಸ್ಥಳ- ಸುಬ್ರಹ್ಮಣ್ಯಕ್ಕೆ ಹೋಗುವವರೇ ಎಚ್ಚರ: ರಸ್ತೆಯಲ್ಲಿಯೇ ಕಾಡಾನೆಗಳ ದಾಳಿ
ವಿಜಯಪುರದ ಇಬ್ಬರು, ಮಹಾರಾಷ್ಟ್ರದ ನಾಲ್ವರು ಸಾವು: ಕುಷ್ಟಗಿ ಬಳಿ ಅಪಘಾತ ಪ್ರಕರಣದ ಹಿನ್ನೆಲೆಯಲ್ಲಿ ವಿಜಪುರ ಪೊಲೀಸರು ಮಾಹಿತಿ ಕಲೆಹಾಕಿದ್ದು, ಎಲ್ಲರೂ ಇಂಡಿ ತಾಲೂಕಿಮ ಶಿರನಾಳ ಗ್ರಾಮದವರು ಎಂದು ಗುರುತಿಸಲಾಗಿದೆ. ರಾಜಪ್ಪ ಬನಸೋಡೆ ನಂದ್ಯಾಳ ಗ್ರಾಮದವನಾಗಿದ್ದಾನೆ. ಅಕ್ಷಯ ಇಂಡಿ ತಾಲೂಕಿನ ಶಿರನಾಳ ಗ್ರಾಮದವರು. ಉಳಿದಂತೆ ರಾಘವೇಂದ್ರ ಕಾಂಬಳೆ, ಜಯಶ್ರೀ ರಾಘವೇಂದ್ರ, ರಾಖಿ (4) ರಶ್ಮಿಕಾ (2) ಮಹಾರಾಷ್ಟ್ರದ ಲವಗಿ ಗ್ರಾಮದವರು ಎಂದು ಗರುತಿಸಲಾಗಿದೆ. ಪ್ರತಿ ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ.
ಕಾರು ಬೈಕ್ ನಡುವೆ ನಡೆದ ಲೈವ್ ಅಪಘಾತ: ಕೊಡಗು (ಮೇ 28): ಮಡಿಕೇರಿಯ ಕಾರ್ಯಪ್ಪ ವೃತ್ತದ ಸಮೀಪ ಲೈವ್ ವೀಡಿಯೋ ವೇಳೆ ಭೀಕರ ಅಪಘಾತ ಸಂಭವಿಸಿದ್ದು, ನೋಡ ನೋಡುತ್ತಿದ್ದಂತೆ ಬೈಕ್ ಸವಾರನೊಬ್ಬ ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. ಈ ಘಟನೆಯಲ್ಲಿ 2ನೇ ಮೊಣ್ಣಂಗೇರಿಯ ಧನಂಜಯ (36) ಸಾವನ್ನಪ್ಪಿದ್ದಾರೆ. ಬೈಕಿನಲ್ಲಿದ್ದ 2ನೇ ಮೊಣ್ಣಂಗೇರಿಯ ಧನಂಜಯ ಅವರು ಕಾರಿಗೆ ಡಿಕ್ಕೆ ಹೊಡೆದಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಕಜಾರಿನಲ್ಲಿ ಹೋಗುವಾಗ ಚಾಲಕನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ವೀಡಿಯೋ ಮಾಡುತ್ತಿದ್ದರು. ಆಗ ಮಡಿಕೇರಿ ನಗರದಿಂದ ಚೈನ್ ಗೇಟ್ ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದ ಧನಂಜಯ ಏಕಾಏಕಿ ಕಾರಿಗೆ ಬಂದು ಗುದ್ದಿದ್ದಾರೆ. ಇನ್ನು ಘಟನೆ ಬೆನ್ನಲ್ಲೇ ತೀವ್ರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆ ಕುರಿತಂತೆ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ