
ಗಂಗಾವತಿ (ಜೂ.09): ಸಮೀಪದ ಕನಕಗಿರಿ ಪಟ್ಟಣದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಹಿಳೆಯ (40) ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆಸಿ ನಂತರ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಕನಕಗಿರಿಯ 5ನೇ ವಾರ್ಡಿನ ಸಂಗನಗೌಡ ತಾವರಗೇರಾ ಎನ್ನುವರ ನಿರ್ಮಾಣ ಹಂತದ ಕಟ್ಟದಲ್ಲಿ ಈ ಘಟನೆ ನಡೆದಿದೆ. ರಾತ್ರಿ ಸರಿಯಾಗಿ 9.30 ಕ್ಕೆ ಈ ಘಟನೆ ನಡೆದಿದ್ದು, ಬೆಂಕಿ ಬೃಹತ್ ಪ್ರಮಾಣದಲ್ಲಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ವೀಕ್ಷಿಸಿದಾಗ ಮಹಿಳೆಯನ್ನು ಹಸಿರು ಮ್ಯಾಟ್ನಿಂದ ಸುತ್ತಿ ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದು ಕಂಡು ಬಂದಿದೆ.
ಗ್ಯಾಂಗ್ ರೇ*ಪ್ ಶಂಕೆ
ಕನಕಗಿರಿಯ 5ನೇ ವಾರ್ಡಿನಲ್ಲಿ ನಡೆದಿರುವ ಘಟನೆ ಗ್ಯಾಂಗ್ ರೇ*ಪ್ ಆಗಿರಬಹುದೆಂದು ಶಂಕಿಸಿದ್ದಾರೆ. ಮಹಿಳೆ ಕಟ್ಟಡದ ಕೊಠಡಿಯೊಂದರ ಮೂಲೆಯ ಬಳಿ ಚಪ್ಪಲಿ ಬಿಡಲಾಗಿದ್ದು, ಹಸಿರು ಮ್ಯಾಟ್ ಹಾಸಿರುವುದರ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ. ಈ ಕೃತ್ಯ ಇಬ್ಬರು ದುಷ್ಕ್ರರ್ಮಿಗಳು ಎಸಗಿರಬಹುದೆಂದು ಶಂಕಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಮ್ ಎಲ್ ಅರಸಿದ್ದಿ, ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಕಳೆದ ವರ್ಷ ಗಂಗಾವತಿ ತಾಲೂಕಿನ ಸಾಣಾಪುರ ಬಳಿ ವಿದೇಶಿ ಮಹಿಳೆ ಮೇಲೆ ಅತ್ಯಾ*ಚಾರ, ಕೊಲೆ ಪ್ರಕರಣ ಮತ್ತು ಬಿಜೆಪಿ ಮುಖಂಡ ಕೊಲೆ ಪ್ರಕರಣ ಹಸಿರಿರುವಾಗಲೆ ಕಳೆದ ಒಂದು ವಾರದ ಹಿಂದೆ ಶರಣಬಸವೇಶ್ವರ ಕ್ಯಾಂಪಿನಲ್ಲಿ ವೃದ್ದೆಯ ಅನುಮಾನಸ್ಪದ ಸಾವು, ಅಯೋದ್ಯೆಯಲ್ಲಿ ತಂದೆ ಮಗಳ ಕೊಲೆ ಪ್ರಕರಣ ಮಾಸುವ ಮುನ್ನವೆ ಮತ್ತೆ ಕನಕಗಿರಿಯಲ್ಲಿ ಗ್ಯಾಂಗ್ ರೇಪ್ ಆಗಿರುವುದರಿಂದ ಜಿಲ್ಲೆಯ ಜನತೆ ತಲ್ಲಣಗೊಂಡಿದ್ದಾರೆ. ಅಹಿತಕರ ಘಟನೆಗಳಿಂದ ಭಯಭೀತರಾಗಿರುವ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎನ್ನುವ ಕೂಗು ಕೇಳಿ ಬರುತ್ತದೆ. ಇನ್ನಾದರು ಪೊಲೀಸ್ ಇಲಾಖೆ ಮುನ್ನಚ್ಚರಿಕೆ ವಹಿಸಿ ಮಹಿಳೆಯರಿಗೆ ರಕ್ಷಣೆ ನೀಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ