
ರಾಯಚೂರು(ಜ. 03) ಈಗಿನ ಕಾಲದಲ್ಲಿ ಯಾರಿನ್ನ ನಂಬಬೇಕೋ ಯಾರಿನ್ನ ನಂಬಬಾರದೋ ಗೊತ್ತೇ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ತಾಜಾ ಉದಾಹರಣೆಯೇ ಈ ಘಟನೆ ಅಂದರೆ ತಪ್ಪಾಗಲಾರದು. ಬಿಲ್ ಕಟ್ಟಲು ಬ್ಯಾಂಕ್ ಖಾತೆ ಮಾಹಿತಿ ಪಡೆದು ಹೋಟೆಲ್ ಮಾಲೀಕನಿಗೆ ವಂಚಿಸಿದ ಘಟನೆ ರಾಯಚೂರು ಜಿಲ್ಲೆ ದೇವಸೂಗುರಿನಲ್ಲಿ ನಡೆದಿದೆ.
ಜಿಲ್ಲೆಯ ದೇವಸೂಗುರಿನ ರವಿತೇಜ್ ಟಿಫೀನ್ ಸೆಂಟರ್ಗೆ ಕರೆ ಮಾಡಿದ ಅಪರಿಚಿತರು ಶಕ್ತಿನಗರ ಸಿಐಎಸ್ ಎಫ್ನ ಸಿಬ್ಬಂದಿ ಅಂತ ಹೇಳಿಕೊಂಡು ಟಿಫಿನ್ ಆರ್ಡರ್ ಮಾಡಿದ್ದರು. 30 ಜನರಿಗೆ ಟಿಫಿನ್ ಪಾರ್ಸಲ್ ಬೇಕಿದ್ದು, ಸಿದ್ಧ ಮಾಡಲು ಹೋಟೆಲ್ ಮಾಲೀಕ ಸಿದ್ದಲಿಂಗಪ್ಪ ಕೋರಿ ಅವರಿಗೆ ಹೇಳಿದ್ದಾರೆ. ಆ ಬಳಿಕ ಖದೀಮರು ಮೋಸ ಮಾಡಿದ್ದಾರೆ.
ಪೊಲೀಸರ ಜೀಪನ್ನೇ ಕದ್ದೊಯ್ದ ಚಿಕ್ಕಮಗಳೂರಿನ ಚಾಲಾಕಿ ಕಳ್ಳ
ಟಿಫಿನ್ ಸಿದ್ಧವಾದ ಬಳಿಕ ಸಿದ್ದಲಿಂಗಪ್ಪ ಕೋರಿ ಅವರು ಆರೋಪಿಗಳಿಗೆ ಕರೆ ಮಾಡಿದ್ದರು. ಈ ವೇಳೆ ಆರೋಪಿಗಳು, ನಿಮ್ಮ ಬ್ಯಾಂಕ್ ಖಾತೆ ನಂಬರ್ ಕೊಡಿ, ಅದಕ್ಕೆ ಹಣ ಹಾಕುತ್ತೇವೆ. ನಂತರ ನಮ್ಮ ಹುಡುಗನನ್ನು ಕಳಿಸಿಕೊಡುತ್ತೇವೆ. ಅವನ ಕೈಯಲ್ಲಿ ಟಿಫೀನ್ ಕೊಟ್ಟು ಕಳುಹಿಸಿ ಎಂದು ಹೇಳಿದ್ದಾರೆ ಅವರ ಮಾತನ್ನು ನಂಬಿದ ಹೋಟೆಲ್ ಮಾಲೀಕ ತಮ್ಮ ಬ್ಯಾಂಕ್ ಖಾತೆ ಸಂಖ್ಯೆ ಕೊಟ್ಟಿದ್ದಾರೆ.
ಬ್ಯಾಂಕ್ ಖಾತೆಯ ಜೊತೆಗೆ ಎಟಿಎಂ ಕಾರ್ಡಿನ 14 ಸಂಖ್ಯೆ ಮತ್ತು ಸಿವಿವಿ ನಂಬರ್ ಅನ್ನು ಸಹ ಕೊಡಿ. ಎಟಿಎಂ ಕಾರ್ಡ್ ನ ಎರಡೂ ಸೈಡ್ ಫೋಟೋ ತೆಗೆದು ಹಾಕಿ ಎಂದು ಆರೋಪಿಗಳು ಹೋಟೆಲ್ ಮಾಲೀಕರಿಗೆ ಹೇಳಿದ್ದಾರೆ. ಅದರಂತೆ ಸಿದ್ದಲಿಂಗಪ್ಪ ಫೋಟೋ ಕಳುಹಿಸಿದ್ದಾರೆ ಅಷ್ಟೇ ಅಲ್ಲದೆ ಸ್ವಲ್ಪ ಸಮಯದ ಬಳಿಕ ತಮ್ಮ ಮೊಬೈಲ್ಗೆ ಬಂದ ಓಟಿಪಿಯನ್ನ ಹೇಳಿದ್ದಾರೆ. ಈ ಮೂಲಕ ಆರೋಪಿಗಳು 90 ಸಾವಿರ ರೂಪಾಯಿ ಹಣವನ್ನು ದೋಚಿದ್ದಾರೆ.
ಪಾರ್ಸಲ್ ತೆಗೆದುಕೊಂಡು ಹೋಗಲು ಯಾರೂ ಬಾರದ ಹಿನ್ನೆಲೆ ಸಿದ್ದಲಿಂಗಪ್ಪ ಅವರು ಅನುಮಾನ ವ್ಯಕ್ತಪಡಿಸಿ ಬ್ಯಾಂಕ್ ಅಕೌಂಟ್ ಪರಿಶೀಲಿಸಿದ್ದಾರೆ. ಆಗ ತಾನು ಮೋಸ ಹೋಗಿರುವುದು ಅವರ ಗಮನಕ್ಕೆ ಬಂದಿದೆ. ಹೋಟೆಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ್ದ ಜಾಹೀರಾತಿನಲ್ಲಿ ಸಿದ್ದಲಿಂಗಪ್ಪ ಅವರ ಮೊಬೈಲ್ ಸಂಖ್ಯೆ ಪಡೆದು ವಂಚಕರು ಮೋಸ ಮಾಡಿದ್ದಾರೆ. ಹಣ ಕಳೆದುಕೊಂಡಿರುವ ಸಿದ್ದಲಿಂಗಪ್ಪ ರಾಯಚೂರಿನ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ