Bengaluru: ಪೊಲೀಸರ ಹೆಸರಿನಲ್ಲಿ ಯುವಕ-ಯುವತಿಯಿಂದ ಹಣ ಸುಲಿದ ಹೋಮ್ ಗಾರ್ಡ್ ಜೈಲಿಗೆ

By Kannadaprabha NewsFirst Published Feb 1, 2023, 7:23 AM IST
Highlights

ಕೆರೆ ದಂಡೆಯಲ್ಲಿ ಕುಳಿತ್ತಿದ್ದ ಹುಡುಗ-ಹುಡುಗಿಗೆ ‘ಅನುಮತಿ ಇಲ್ಲದೆ ಇಲ್ಲಿದ್ದೀರಿ’ ಎಂದು ಬೆದರಿಕೆ ಹಾಕಿ ಪೇಟಿಎಂ ಮೂಲಕ .1 ಸಾವಿರ ವಸೂಲಿ ಮಾಡಿದ ಆರೋಪದ ಮೇರೆಗೆ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬನನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಫೆ.01): ಕೆರೆ ದಂಡೆಯಲ್ಲಿ ಕುಳಿತ್ತಿದ್ದ ಹುಡುಗ-ಹುಡುಗಿಗೆ ‘ಅನುಮತಿ ಇಲ್ಲದೆ ಇಲ್ಲಿದ್ದೀರಿ’ ಎಂದು ಬೆದರಿಕೆ ಹಾಕಿ ಪೇಟಿಎಂ ಮೂಲಕ .1 ಸಾವಿರ ವಸೂಲಿ ಮಾಡಿದ ಆರೋಪದ ಮೇರೆಗೆ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬನನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಐಟಿಐ ಕಾಲೋನಿಯ ಮಂಜುನಾಥ್‌ ರೆಡ್ಡಿ ಬಂಧಿತನಾಗಿದ್ದು, ಎರಡು ದಿನಗಳ ಹಿಂದೆ ಗೆಳೆಯನ ಜತೆ ಕುಂದನಹಳ್ಳಿ ಕೆರೆ ಬಳಿ ವಿಹಾರಕ್ಕೆ ತೆರಳಿದ್ದಾಗ ಆರ್ಷಾ ಲತೀಫ್‌ ಎಂಬುವರಿಗೆ ಬೆದರಿಸಿ ಆರೋಪಿ ಸುಲಿಗೆ ಮಾಡಿದ್ದ. ಈ ಬಗ್ಗೆ ಸಂತ್ರಸ್ತೆ ಟ್ವಿಟರ್‌ನಲ್ಲಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ವೈಟ್‌ಫೀಲ್ಡ್‌ ಡಿಸಿಪಿ ಎಸ್‌.ಗಿರೀಶ್‌ ತಿಳಿಸಿದ್ದಾರೆ.

ಟ್ವಿಟರ್‌ನಲ್ಲೇನಿದೆ?: ‘ನನಗೆ ಬೆಂಗಳೂರಿನ ಭೇಟಿ ವೇಳೆ ಕೆಟ್ಟಅನುಭವವಾಯಿತು. ನನ್ನ ಗೆಳೆಯನ ಜತೆ ಕುಂದನಹಳ್ಳಿ ಕೆರೆ ದಂಡೆಯ ನೆರಳಿನಲ್ಲಿ ಶನಿವಾರ ಕುಳಿತು ಕೆರೆಯ ಪ್ರಾಕೃತಿಕ ಸೊಬಗನ್ನು ವೀಕ್ಷಿಸುತ್ತಿದ್ದೆ. ಆಗ ಅಲ್ಲಿಗೆ ಬಂದ ಪೊಲೀಸ್‌ ಸಿಬ್ಬಂದಿ, ನಮ್ಮ ಫೋಟೋಗಳನ್ನು ಏಕಾಏಕಿ ತೆಗೆದು ಕಿರುಕುಳ ನೀಡಲು ಶುರು ಮಾಡಿದ. ನೀವು ಇಲ್ಲಿ ಕುಳಿತುಕೊಳ್ಳಲು ಯಾರ ಅನುಮತಿ ಪಡೆದಿದ್ದೀರಿ ಎಂದು ಪ್ರಶ್ನಿಸಿದ. 

ತೆರಿಗೆ ವಂಚನೆ ಆರೋಪ: 25ಕ್ಕೂ ಹೆಚ್ಚು ಜ್ಯುವೆಲ್ಲರಿ ಶಾಪ್‌ಗಳಿಗೆ ಐಟಿ ಶಾಕ್‌

ನಮ್ಮ ಅಕ್ಕಪಕ್ಕದ ಕಲ್ಲು ಬೆಂಚುಗಳ ಮೇಲೆ ಕೆಲವು ಸಾರ್ವಜನಿಕರು ಕುಳಿತಿದ್ದರು. ಆದರೆ ಕೇವಲ ನಮ್ಮನ್ನು ಮಾತ್ರ ಆತ ವಿಚಾರಣೆ ನಡೆಸಿದ. ನಮ್ಮ ಕೆಲಸ, ಊರು, ಮನೆ ಹಾಗೂ ಇಲ್ಲಿಗೇಕೆ ಬಂದಿರುವುದು ಹೀಗೆ ಸ್ವವಿವರಗಳನ್ನು ಕೇಳಿದ. ಆಗ ನಾವು ನಿಮ್ಮೊಂದಿಗೆ ಪೊಲೀಸ್‌ ಸ್ಟೇಷನ್‌ಗೆ ಬಂದು ಅನುಮತಿ ಇಲ್ಲದೆ ಕುಳಿತ ಕಾರಣಕ್ಕೆ ದಂಡ ಪಾವತಿಸುವುದಾಗಿ ಹೇಳಿದೆವು’ ಎಂದು ಬೆಂಗಳೂರು ಪೊಲೀಸರಿಗೆ ಟ್ವಿಟರ್‌ನಲ್ಲಿ ಅರ್ಷಾ ಲತೀಫ್‌ ದೂರು ನೀಡಿದ್ದರು.

‘ನಾವು ಮಾಡಿದ ತಪ್ಪೇನು ಎಂದು ಕೇಳಿದ್ದವು. ಆಗ ನೀವು ಅನುಮತಿ ಇಲ್ಲದೆ ಕುಳಿತುಕೊಂಡಿದ್ದೀರಿ ಹಾಗೂ ನೀವು ಸಿಗರೆಟ್‌ ಸೇದಬಹುದು ಎಂದ. ಈ ಮಾತಿಗೆ ನಮ್ಮ ಬಳಿ ಸಿಗರೆಟ್‌ ಇಲ್ಲ. ಇಲ್ಲಿ ಸುಮ್ಮನೆ ಆರಾಮಾಗಿ ಕುಳಿತಿದ್ದೇವೆ ಎಂದು ಹೇಳಿದೆ. ಆದಾಗ್ಯೂ ಆತ ಮತ್ತೆ ವಿಚಾರಣೆ ಮುಂದುವರೆಸಿದ. ನೀವು ಒಟ್ಟಿಗೆ ಕುಳಿತುಕೊಳ್ಳುವಂತಿಲ್ಲ. ಹೀಗೆ ಕುಳಿತುಕೊಳ್ಳಲು ಅನುಮತಿ ಸಹ ಇಲ್ಲ ಎಂದು ದಬಾಯಿಸಿದ. ಕೊನೆಗೆ ನಿಮ್ಮನ್ನು ಠಾಣೆ ಕರೆದುಕೊಂಡು ಹೋಗುತ್ತೇನೆ. ನಿಮ್ಮನ್ನು ಹಿರಿಯ ಅಧಿಕಾರಿಗಳೇ ವಿಚಾರಿಸಿಕೊಳ್ಳುತ್ತಾರೆ ಎಂದ. 

ಅದೆಲ್ಲ ಬೇಡವೆಂದರೆ ಇಲ್ಲೇ ಸೆಟ್ಲ್ ಮಾಡಿಕೊಡಿಕೊಳ್ಳಿ. ನನಗೆ ಸ್ಪಲ್ಪ ಹಿಂದಿ ಬರುತ್ತದೆ. ಆದರೆ ನನ್ನ ಮೇಲಿನ ಹಿರಿಯ ಅಧಿಕಾರಿಗೆ ಕನ್ನಡ ಹೊರತು ಬೇರೆ ಭಾಷೆ ಬರಲ್ಲ ಎಂದ. ಕೊನೆಗೆ ಆತನಿಗೆ 1 ಸಾವಿರ ನೀಡುವಂತೆ ಕೇಳಿದ. ಆಗ ಆತನಿಗೆ ಪೇಟಿಎಂ ಮೂಲಕ ಹಣ ಪಾವತಿಸಿದೆ. ಹಣ ಪಡೆದು ಮರಳುವಾಗ ಆತನ ಬೈಕ್‌ ಫೋಟೋ ತೆಗೆಯಲಾಯಿತು. ಈ ನೈತಿಕ ಪೊಲೀಸ್‌ ಗಿರಿ ಅಂತ್ಯ ಹಾಡಬೇಕು. ಸಾರ್ವಜನಿಕ ಸ್ಥಳದಲ್ಲಿ ಪುರುಷ-ಮಹಿಳೆ ಒಟ್ಟಿಗೆ ಕುಳಿತುಕೊಳ್ಳುವಂತಿಲ್ಲವೇ? ಈ ಲಿಂಗತಾರಮ್ಯ ಏಕೆ ಎಂದು ಅರ್ಷಾ ಲಿತೀಫ್‌ ಪ್ರಶ್ನಿಸಿದ್ದಾರೆ.

ಮೂರೂವರೆ ವರ್ಷದ ಬಾಲಕಿ ರೇಪ್‌, ಹತ್ಯೆ: ತಾಯಿಯ ಪ್ರಿಯತಮನಿಂದಲೇ ಕೃತ್ಯ

ಕೆರೆ ಕಾವಲಿಗೆ ಇದ್ದ ಆರೋಪಿ: ಕುಂದಲಹಳ್ಳಿ ಕೆರೆ ಕಾವಲಿಗೆ ಬಿಬಿಎಂಪಿಯಿಂದ ಮಂಜುನಾಥ್‌ ರೆಡ್ಡಿ ನೇಮಕಗೊಂಡಿದ್ದ. ಕೆರೆ ಬಳಿಗೆ ಬರುವ ಹುಡುಗ-ಹುಡುಗಿಯರಿಗೆ ಬೆದರಿಸಿ ಆತ ಹಣ ಸುಲಿಗೆ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

ನನ್ನ ದೂರಿಗೆ ಸ್ಪಂದಿಸಿ ತ್ವರಿತವಾಗಿ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರಿಗೆ ಧನ್ಯವಾದಗಳು.
-ಅರ್ಷಾ ಲತೀಫ್‌

click me!