ಮನೆಯ ಕೀ ಬಳಸಿ ಲಕ್ಷಾಂತರ ರೂ. ಚಿನ್ನಾಭರಣ ದೋಚಿದಾತ ಅರೆಸ್ಟ್!

By Suvarna NewsFirst Published Apr 3, 2023, 7:54 PM IST
Highlights

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣಾವ್ಯಾಪ್ತಿಯ ಮನೆಯೊಂದರಲ್ಲಿ ಚಿನ್ನಾಭರಣ ದರೋಡೆ ಮಾಡಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಚಿಕ್ಕಮಗಳೂರು (ಏ.3): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣಾವ್ಯಾಪ್ತಿಯ ಮನೆಯೊಂದರಲ್ಲಿ ಚಿನ್ನಾಭರಣ ದರೋಡೆ ಮಾಡಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಬಣಕಲ್ ವಿಲೇಜ್ ಎಂಬಲ್ಲಿ ಲಕ್ಷ್ಮಣ ಎನ್ನುವವರ ಮನೆಯಲ್ಲಿ ಮನೆಯ ಬೀಗ ತೆರೆದು ಬೀರುವಿನಲ್ಲಿ ಇಟ್ಟಿದ್ದ ಚಿನ್ನವನ್ನು ಕಳ್ಳತನ ಮಾಡಲಾಗಿತ್ತು. ಸುಮಾರು ಮೂರುವರೆ ಲಕ್ಷ ಬೆಲೆಯ ಬಂಗಾರದ ಒಡವೆಗಳನ್ನು ದೋಚಲಾಗಿತ್ತು. ಈ ಬಗ್ಗೆ ಇದೇ ಮಾರ್ಚ್ 23ರಂದು ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮನೆಯ ಕೀ ಬಳಸಿ‌‌ ದರೋಡೆ ! 
ಕಳ್ಳತನವಾದ ಮನೆಯವರು ಮನೆಯಿಂದ ಹೊರಹೋಗುವಾಗ ಮನೆಯ ಮುಂಭಾಗದ ಹೂವಿನ ಕುಂಡದಲ್ಲಿ ಬೀಗದ ಕೀಯನ್ನು ಇಟ್ಟು ಹೋಗುತ್ತಿದ್ದರು. ಅದೇ ಕೀ ಬಳಸಿ ಮನೆಯ ಒಳಗೆ ಹೋಗಿ ಬೀರುವಿನಲ್ಲಿದ್ದ ಚಿನ್ನಾಭರಣವನ್ನು ದೋಚಿಕೊಂಡು ಹೋಗಿದ್ದರು. ಕಳ್ಳತನ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾದ ಪೊಲೀಸರು ಒಂದು ವಾರದಲ್ಲಿಯೇ ದರೋಡೆ ಕೋರನನ್ನು ಹೆಡೆಮುರಿ ಕಟ್ಟಿದ್ದಾರೆ.

Latest Videos

ಹಿಂಬದಿಯಿಂದ ಬಂದು ಗುದ್ದಿದ ಕಾರು: ಶಾಲೆಗೆ ಹೊರಟಿದ್ದ ತಂದೆ -ಮಗಳು ಸಾವು

ಎಸ್ಟೇಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ:
ಬಣಕಲ್ ಸುಭಾಷ್ ನಗರ ಎಂಬಲ್ಲಿ ವಾಸವಾಗಿದ್ದ ಯಲ್ಲೋಜಿರಾವ್ ಆಲಿಯಾಸ್ ಚೇತನ್ ಎಂಬಾತ ಈ ದರೋಡೆ ಕೃತ್ಯ ನಡೆಸಿರುವುದು ಕಂಡುಬಂದಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ. ಯಲ್ಲೋಜಿರಾವ್ ಮೂಲತಃ ಭದ್ರಾವತಿ ತಾಲ್ಲೂಕಿನ ಬರಂದೂರು ಗ್ರಾಮದವನು ಎಂದು ತಿಳಿದುಬಂದಿದ್ದು ಬಣಕಲ್ ಸಮೀಪದ ಹೆಗ್ಗುಡ್ಲು ಗ್ರಾಮದ ಎಸ್ಟೇಟ್ ವೊಂದರಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಈತ ಇದೇ ಮನೆಯಲ್ಲಿ ಎರಡು ಬಾರಿ ದರೋಡೆ ಮಾಡಿದ್ದ ಎಂದು ತಿಳಿದುಬಂದಿದೆ.

ಕಾಂಗ್ರೆಸ್ಸಿಗರಿಂದ ಜಯ ಮೃತ್ಯುಂಜಯ ಸ್ವಾಮೀಜಿಗೆ ಬೆದರಿಕೆ: ಭದ್ರತೆ ಕೊಡಲು ಸಿಎಂ ಆದೇಶ

ಈತ ದರೋಡೆ ಮಾಡುವ ಮುನ್ನ ಆ ಮನೆಯವರ ಚಲನವಲನಗಳನ್ನು ಗಮನಿಸುತ್ತಿದ್ದ ಎಂದು ತಿಳಿದುಬಂದಿದ್ದು, ಅವರು ಮನೆಯಿಂದ ಹೊರಹೋಗುವಾಗ ಬೀಗದ ಕೀಯನ್ನು ಹೂವಿನ ಕುಂಡದಲ್ಲಿ ಇಟ್ಟು ಹೋಗುತ್ತಿದ್ದನ್ನು ತಿಳಿದುಕೊಂಡು ಸಲೀಸಾಗಿ ಮನೆಯೊಳಗೆ ನುಸುಳಿ ಚಿನ್ನಾಭರಣ ದೋಚಿದ್ದ ಎಂದು ತಿಳಿದುಬಂದಿದೆ. ಕಾರ್ಯಾಚರಣೆಯಲ್ಲಿ ಮೂಡಿಗೆರೆ ಸರ್ಕಲ್ ಇನ್ಸ್ ಪೆಕ್ಟರ್ ಸೋಮೇಗೌಡ, ಬಣಕಲ್ ಠಾಣಾಧಿಕಾರಿ ಜಂಬೂರಾಜ್ ಮಹಾಜನ್, ತನಿಖಾ ಪಿಎಸೈ ರನ್ನಗೌಡ ಪಾಟೀಲ್, ಸಿಬ್ಬಂದಿಗಳಾದ ಗಿರೀಶ್, ಮನುಕುಮಾರ್, ಪ್ರದೀಪ್ ಗವಹಿಸಿದ್ದರು.ದರೋಡೆ ಪ್ರಕರಣದಲ್ಲಿ ಶೀರ್ಘವಾಗಿ ಆರೋಪಿಯನ್ನು ಬಂಧಿಸಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

click me!