
ಕುಂದಾಪುರ (ಡಿ.21): ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನಕಲಿ ವೆಬ್ಸೈಟ್ ನ್ನು ರೂಪಿಸಿ ವಂಚಿಸುತಿದ್ದ ರಾಜಸ್ಥಾನ ರಾಜ್ಯದ ತಿಜಾರಿ ಜಿಲ್ಲೆಯ ಆರೋಪಿ ನಾಸೀರ್ ಹುಸೇನ್ (21) ಎಂಬಾತನನ್ನು ಬಂಧಿಸಲಾಗಿದೆ.
ಈತ ತನ್ನ ನಕಲಿ ವೆಬ್ಸೈಟ್ ಮೂಲಕ ದೇವಸ್ಥಾನಕ್ಕೆ ಆಗಮಿಸುವ ದೂರದ ಊರಿನ ಭಕ್ತಾದಿಗಳಿಂದ ಆನ್ಲೈನ್ನಲ್ಲಿ ಮುಂಗಡವಾಗಿ ರೂಮ್ ಬುಕ್ಕಿಂಗ್ ಮಾಡಿಸುವುದಾಗಿ ಹೇಳಿ ಹಣ ಪಡೆದು, ನಕಲಿ ರಶೀದಿ ನೀಡಿ ವಂಚಿಸುತಿದ್ದ. ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯವರು ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದು ಮುಜರಾಯಿ ಇಲಾಖೆ ದೇವಸ್ಥಾನಕ್ಕೆ ಸಂಬಂಧಿಸಿದ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದಾಖಲಾದ ಪ್ರಕರಣವಾಗಿದ್ದರಿಂದ, ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ ಬಿ., ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ ಎ. ಕಾಯ್ಕಿಣಿ ಹಾಗೂ ಕೊಲ್ಲೂರು ಉಪನಿರೀಕ್ಷಕ ವಿನಯ ಎಂ. ಕೋರ್ಲಹಳ್ಳಿ ನೇತೃತ್ವದ ತಂಡವನ್ನು ರಚಿಸಲಾಗಿತ್ತು.
ತನಿಖೆಯಿಂದ ನಾಸೀರ್ ಹುಸೇನ್ ಆರೋಪಿ ಎಂದು ಪತ್ತೆಯಾಗಿದ್ದು, ಶುಕ್ರವಾರ ಆತನನ್ನು ರಾಜಸ್ಥಾನದ ದಾಖಾಪುರಿ ಎಂಬಲ್ಲಿಂದ ಬಂಧಿಸಿ, ಆತ ಬಳಸುತ್ತಿದ್ದ ಲ್ಯಾಪ್ಟಾಪ್ ವಶಪಡಿಸಿಕೊಳ್ಳಲಾಗಿದೆ ಮತ್ತು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ