ಮಂಗಳೂರು: ಅಧಿಕ ಸಿಮ್‌ ಕಾರ್ಡ್‌ ಖರೀದಿ ಘಟನೆ ಇಡಿ ತನಿಖೆಗೆ ಸಿದ್ಧತೆ

By Kannadaprabha NewsFirst Published Feb 16, 2024, 8:48 AM IST
Highlights

ಹಲವು ಸಿಮ್‌ಗಳನ್ನು ಹೊಂದಿರುವುದು ಸಾಮಾನ್ಯವಾಗಿ ಹವಾಲಾ ಜಾಲದ ನಿರ್ವಹಣೆಗಾಗಿ ಇರುವುದು ಸಾಮಾನ್ಯ. ಹಾಗಾಗಿ ಇಲ್ಲಿ ಯಾವ ಕಾರಣಕ್ಕಾಗಿ ಆರೋಪಿಗಳು ಸಿಮ್‌ ಅಧಿಕ ಸಂಖ್ಯೆಯಲ್ಲಿ ಇರಿಸಿಕೊಂಡಿದ್ದರು ಎನ್ನುವ ನಿಟ್ಟಿನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತನಿಖೆ ನಡೆಸುವ ಸಾಧ್ಯತೆ ಇದೆ. 

ಮಂಗಳೂರು(ಫೆ.16):  ಬೆಳ್ತಂಗಡಿ ತಾಲೂಕಿನಲ್ಲಿ ಕುಟುಂಬದ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ 42 ಸಿಮ್‌ ಕಾರ್ಡ್‌ ಖರೀದಿಸಿದ ಘಟನೆಯಲ್ಲಿ ಐವರನ್ನು ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗೆ ಕೇಂದ್ರ ಜಾರಿ ನಿರ್ದೇಶನಾಲಯ (ಇಡಿ) ಮುಂದಾಗಿದೆ.

ಸಿಮ್‌ ಕಾರ್ಡ್‌ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾಮದ ಅಕ್ಬರ್‌ ಅಲಿ (24), ಬೆಳ್ತಂಗಡಿಯ ಸಂಜಯನಗರದ ಮಹಮ್ಮದ್‌ ಮುಸ್ತಾಫಾ (22), ನೆರಿಯ ಗುಂಪುಕಲ್ಲುವಿನ ರಮೀಝ್‌ (20), ಪಡಂಗಡಿ ಗ್ರಾಮದ ಬದ್ಯಾರು ನಿವಾಸಿ ಮಹಮ್ಮದ್‌ ಸಾದಿಕ್‌ (27) ಮತ್ತು ಓರ್ವ ಅಪ್ರಾಪ್ತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು.

ಮಂಗಳೂರು: ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ!

ಆರೋಪಿಗಳ ಮೇಲೆ ದಾಖಲಾದ ಮೋಸ ವಂಚನೆ ಅಥವಾ ನಿಗೂಢ ಕಾರ್ಯಸಾಧನೆ ಮಾಡುವ ಪ್ರಕರಣದ ಜತೆಗೆ ವಿದೇಶಿ ಕರೆನ್ಸಿ ದಂಧೆಯಲ್ಲಿ ಐವರು ಶಾಮೀಲಾಗಿರುವ ಸಾಧ್ಯತೆ ಕುರಿತಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ವಿದೇಶಿ ನಂಟಿನ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಪತ್ರವನ್ನೂ ಬರೆದಿದ್ದರು. ಅದರಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಮಿಸಿ, ಐವರು ಆರೋಪಿಗಳನ್ನು ಕರೆಸಿ ವಿಚಾರಣೆ ನಡೆಸಿ, ಮಾಹಿತಿ ಕಲೆಹಾಕಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

ಹವಾಲಾ ಜಾಲಕ್ಕೆ ಬಳಕೆ?:

ಹಲವು ಸಿಮ್‌ಗಳನ್ನು ಹೊಂದಿರುವುದು ಸಾಮಾನ್ಯವಾಗಿ ಹವಾಲಾ ಜಾಲದ ನಿರ್ವಹಣೆಗಾಗಿ ಇರುವುದು ಸಾಮಾನ್ಯ. ಹಾಗಾಗಿ ಇಲ್ಲಿ ಯಾವ ಕಾರಣಕ್ಕಾಗಿ ಆರೋಪಿಗಳು ಸಿಮ್‌ ಅಧಿಕ ಸಂಖ್ಯೆಯಲ್ಲಿ ಇರಿಸಿಕೊಂಡಿದ್ದರು ಎನ್ನುವ ನಿಟ್ಟಿನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

click me!