ಸುಟ್ಟುಕರಕಲಾದ ಮೃತದೇಹ ಮರಣೋತ್ತರ ಪರೀಕ್ಷೆ ಬೆನ್ನಲ್ಲೇ ಸತ್ಯ ವ್ಯಕ್ತಿಯಿಂದ ಬಂತು ಕರೆ!

By Suvarna NewsFirst Published Jan 28, 2024, 3:39 PM IST
Highlights

ನಾಪತ್ತೆಯಾಗಿದ್ದ ವ್ಯಾಪಾರಿಯ ಸುಟ್ಟು ಕರಕಲಾದ ದೇಹ ಜಮೀನಿನಲ್ಲಿ ಪತ್ತೆಯಾಗಿತ್ತು. ಪೊಲೀಸರು ಆಗಮಿಸಿದರು, ಕುಟುಂಬಸ್ಥರು ಆಗಮಿಸಿದರು. ಕರಕಲಾದ ಮೃತದೇಹ ಪಕ್ಕದಲ್ಲಿ ಸಿಕ್ಕ ವಸ್ತುಗಳಿಂದ ಇದು ನಾಪತ್ತೆಯಾದ ವ್ಯಾಪರಿಯ ಶವ ಅನ್ನೋದು ಕುಟುಂಬಸ್ಥರಿಗೆ ಖಚಿತವಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ನಡೆದ ಕೆಲವೇ ಗಂಟೆಗಳಲ್ಲಿ ಸತ್ತ ವ್ಯಕ್ತಿಯೆ ಕರೆ ಮಾಡಿದ ಘಟನೆ ನಡೆದಿದೆ. 

ಗೋದಾವರಿ(ಜ.28) ಜಮೀನಿನಲ್ಲಿ ಸುಟ್ಟು ಕರಕಲಾದ ಮೃತದೇಹ ಪತ್ತೆಯಾಗಿತ್ತು. ದೇಹದ ಪಕ್ಕದಲ್ಲೇ ಚಪ್ಪಲಿ, ಇತರ ಕೆಲ ವಸ್ತುಗಳ ಮೂಲಕ ಇದು ಬೇಳೆ ಕಾಳು ವ್ಯಾಪಾರಿಯ ಮೃತದೇಹ ಅನ್ನೋ ಅನುಮಾನ ದೃಢವಾಗಿತ್ತು. ಇತ್ತ ರಾತ್ರಿಯಿಂದ ವ್ಯಾಪಾರಿ ಕೂಡ ನಾಪತ್ತೆಯಾಗಿದ್ದ. ಮರಣೋತ್ತರ ಪರೀಕ್ಷೆಗೆ ಪೊಲೀಸರು ವ್ಯವಸ್ಥೆ ಮಾಡಿದ್ದರು. ಇತ್ತ ಕುಟುಂಬಸ್ಥರು ತೀವ್ರ ಆಘಾತದಲ್ಲಿರುವಾಗಲೇ ಕರೆಯೊಂದು ಬಂದಿದೆ. ಯಾರು ಸತ್ತಿದ್ದಾನೆ ಎಂದು ಅಳುತ್ತಿದ್ದ ಕುಟುಂಬಸ್ಥರಿಗೆ ಆಘಾತ, ಕಾರಣ ಸತ್ತ ವ್ಯಕ್ತಿಯೇ ಕರೆ ಮಾಡಿದ ಅಚ್ಚರಿ ಘಟನೆ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. 

ರಂಗಂಪೇಟೆ ಮಂಡಲ ಪಂಚಾಯತ್ ವ್ಯಾಪ್ತಿಯಲ್ಲಿ ರೈತ ಹಾಗೂ ಬೇಳೆ ಕಾಳು ವ್ಯಾಪಾರಿಯಾಗಿ ಕೆತಮಲ್ಲ ಪೂಸಯ್ಯ ತನ್ನ ವ್ಯಾಪಾರದ ಮೂಲಕ ಲಕ್ಷಾಂತರ ರೂಪಾಯಿ ವ್ಯವಾಹರ ಮಾಡುತ್ತಿದ್ದ. ಆದರೆ ಜನವರಿ 25ರ ರಾತ್ರಿಯಿಂದ ಪೂಸಯ್ಯ ನಾಪತ್ತೆಯಾಗಿದ್ದ. ಕುಟುಂಬಸ್ಥರು ಕರೆ ಮಾಡಿದ್ದಾರೆ, ಕುಟುಂಬಸ್ಥರನ್ನು ವಿಚಾರಿಸಿದ್ದಾರೆ, ಆಪ್ತರು, ಗೆಳೆಯರು ಎಲ್ಲರನ್ನೂ ವಿಚಾರಿಸಿದರೂ ಪತ್ತೆ ಇಲ್ಲ. ಇತ್ತ ಪೊಲೀಸರಿಗೆ ಸುಟ್ಟು ಕರಕಲಾದ ಮೃತದೇಹ ಜಮೀನಿನಲ್ಲಿ ಪತ್ತೆಯಾಗಿದೆ ಅನ್ನೋ ಮಾಹಿತಿ ಬಂದಿದೆ.

ರಸ್ತೆ ಗುಂಡಿಯಲ್ಲಿ ಬಿದ್ದು ಸಾಗಿದ ಆ್ಯಂಬುಲೆನ್ಸ್‌ನಲ್ಲಿ ಪವಾಡ, ಒಳಗಿದ್ದ ಮೃತದೇಹಕ್ಕೆ ಬಂತು ಜೀವ!

ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸುಟ್ಟು ಕರಕಲಾದ ಮೃತದೇಹ ಪರಿಶೀಲನೆ ನಡೆಸಿದ್ದಾರೆ. ಸಂಪೂರ್ಣ ಸ್ಥಳವನ್ನು ಸುತ್ತುವರೆದು, ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮೃತದೇಹ ಪಕ್ಕದಲ್ಲಿ ಚಪ್ಪಲಿ, ಕೆಲ ವಸ್ತುಗಳು ಪತ್ತೆಯಾಗಿದೆ. ಇದು ನಾಪತ್ತೆಯಾಗಿರುವ ಕೆತಮಲ್ಲ ಪೂಸಯ್ಯ ವಸ್ತುಗಳು ಅನ್ನೋದನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪೂಸಯ್ಯ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ

ಸ್ಥಳಕ್ಕೆ ದೌಡಾಯಿಸಿದ ಕುಟುಂಬಸ್ಥರು, ಸಿಕ್ಕ ವಸ್ತುಗಳು, ಚಪ್ಪಲಿಯನ್ನು ಗುರುತಿಸಿದ್ದಾರೆ. ಇದು ಪೂಸಯ್ಯ ವಸ್ತುಗಳು ಎಂದು ಖಚಿತಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇತ್ತ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಆಕ್ರಂದನ ಮುಗಿಲು ಮುಟ್ಟಿದೆ. ಇದರ ನಡುವೆ ಅನಾಮಿಕ ನಂಬರ್‌ನಿಂದ ಕರೆಯೊಂದು ಬಂದಿದೆ. ಕರೆ ಸ್ವೀಕರಿಸಿದ ಕುಟುಂಬಸ್ಥರಿಗೆ ಆಘಾತವಾಗಿದೆ. ಕಾರಣ ಯಾವ ವ್ಯಕ್ತಿ ಸತ್ತಿದ್ದಾನೆ ಎಂದು ಅಳುತ್ತಿದ್ದರೋ ಅದೇ ವ್ಯಕ್ತಿ ಕರೆ ಮಾಡಿ ನನ್ನನ್ನು ರಕ್ಷಿಸಿ ಎಂದು ಬೇಡಿಕೊಂಡಿದ್ದಾರೆ. 

 

ಅಂತ್ಯಸಂಸ್ಕಾರ ನಡೆದ ನಾಲ್ಕೇ ದಿನಕ್ಕೆ ಮರುಜನ್ಮ, ಮನೆಗೆ ಮರಳಿ ಪತ್ನಿ ಜೊತೆ ಮರು ಮದುವೆ!

ವಿಳಾಸ ಪಡೆದ ಕುಟುಂಬಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಇತ್ತ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಕೆತಮಲ್ಲ ಪೂಸಯ್ಯನ ರಕ್ಷಿಸಿದ್ದಾರೆ. ಬಳಿಕ ಚಿಕಿತ್ಸೆ ಕೊಡಿಸಿದ್ದಾರೆ. ಪೂಸಯ್ಯ ನಡದೆ ಘಟನೆಯ್ನು ಪೊಲೀಸರಿಗೆ ವಿವರಿಸಿದ್ದಾನೆ. ರಾತ್ರಿ ವೇಳೆ ಜಮೀನಿನ ಕಡೆ ತೆರಳಿದಾಗ ಯುವಕರ ಗುಂಪೊಂದು ವ್ಯಕ್ತಿಯನ್ನು ಥಳಿಸುತ್ತಿದ್ದರು. ತಕ್ಷಣವೇ ಮಧ್ಯಪ್ರವೇಶ ಮಾಡಿದ ಪೂಸಯ್ಯನ ಹಿಡಿದೂ ಥಳಿಸಿದ್ದಾರೆ. ಬಳಿಕ ಪೂಸಯ್ಯನ ಕೈಕಾಲು ಕಟ್ಟಿದ್ದಾರೆ. ಇತ್ತ ಥಳಿಸುತ್ತಿದ್ದ ವ್ಯಕ್ತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಇದನ್ನು ಕಣ್ಣಾರೆ ಕಂಡಿದ್ದ ಪೂಸಯ್ಯನ ಆಟೋದಲ್ಲಿ ಹಾಕಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮತ್ತೆ ಥಳಿಸಿದ್ದಾರೆ.

click me!